ADVERTISEMENT

ಭೂ ಮಾಲೀಕತ್ವಕ್ಕೆ ಭೂ ಗ್ಯಾರಂಟಿ: ಸಚಿವ ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 8:34 IST
Last Updated 6 ಡಿಸೆಂಬರ್ 2025, 8:34 IST
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ   

ಹಾಸನ: ಭೂಮಿಯ ಮಾಲೀಕತ್ವಕ್ಕೆ ಖಚಿತತೆ ಕೊಡುವ ಮೂಲಕ ಭೂ ಗ್ಯಾರಂಟಿ ಯೋಜನೆಯನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೂಚನೆಯಂತೆ ಜನರ ಕೆಲಸ ಮಾಡಲು ಸಾಧ್ಯವಾಗಿದೆ ಎಂದು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಿರುವ ಸರ್ಕಾರಿ ಸೇವೆಗಳ ಸಮರ್ಪಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಶಕಗಳಿಂದ ಕಗ್ಗಂಟಾಗಿದ್ದ ಈ ವಿಷಯವನ್ನು ಕಳೆದ ಬಜೆಟ್‌ನಲ್ಲಿ ಸರಳೀಕೃತ ದರಖಾಸ್ತು ಪೋಡಿ ದುರಸ್ತು ಅಭಿಯಾನ ಮಾಡುವುದಾಗಿ ಘೋಷಿಸಿದ್ದರು. ದರಖಾಸ್ತು ಪೋಡಿ ದುರಸ್ತು ಅಭಿಯಾನ ಮಾಡಲಾಗಿದೆ. ಆದರೆ, ಇದು ಅಸಾಧ್ಯ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರು ಹೇಳಿದ್ದರು. ಆ ಸವಾಲನ್ನು ಸ್ವೀಕರಿಸಿ, ಕೆಲಸ ಮಾಡಿದ್ದೇವೆ. ಒಂದೇ ವರ್ಷದಲ್ಲಿ 24 ಸಾವಿರ ರೈತರ ಜಮೀನು ಪೋಡಿ ದುರಸ್ತು ಕೈಗೆತ್ತಿಕೊಂಡಿದ್ದೇವೆ.2013–18 ರವರೆಗೆ ರಾಜ್ಯದಲ್ಲಿ 8,500 ಆಗಿತ್ತು. ಈಗ 1.15 ಲಕ್ಷ ಪ್ರಕರಣ ದುರಸ್ತು ಮಾಡಿದ್ದೇವೆ. ಜನರ ಮನೆ ಬಾಗಿಲಿಗೆ ಹೋಗಿ ಕೆಲಸ ಮಾಡಲಾಗುತ್ತಿದೆ ಎಂದರು.

ADVERTISEMENT

ಎರಡೂವರೆ ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಡಿ ₹ 1,08,235.37 ಕೋಟಿಯನ್ನು ಜನರಿಗೆ ನೀಡಲಾಗಿದೆ. ಜನರ ಕೈಗೆ ಇಷ್ಟೊಂದು ಹಣ ಕೊಟ್ಟ ಸರ್ಕಾರ ಪ್ರಪಂಚದಲ್ಲಿ ಇದ್ದರೆ ಅದು ರಾಜ್ಯದ ಕಾಂಗ್ರೆಸ್‌ ಸರ್ಕಾರ ಎಂದು ಹೇಳಿದರು.

ಹಿಮ್ಸ್‌ ₹ 55, ಪಿಡಬ್ಲ್ಯುಡಿ ₹30 ಕೋಟಿ ಸೇರಿದಂತೆ ₹290 ಕೋಟಿ ಮೊತ್ತದ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಲಿದೆ. ನೀರಾವರಿ ಇಲಾಖೆಯ ಹಿರೀಸಾವೆ ಹೋಬಳಿಯ ಏತ ನೀರಾವರಿ ಯೋಜನೆ ₹74 ಕೋಟಿ ವೆಚ್ಚ, ಹಾಸನ ತಾಲ್ಲೂಕು ಕಚೇರಿ ಉದ್ಘಾಟನೆ, ಹಿಮ್ಸ್‌ಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ₹57 ಕೋಟಿ ನೀಡಲಾಗಿದೆ. ಇನ್ನೂ ₹17 ಕೋಟಿ ಒದಗಿಸುವ ಭರವಸೆ ನೀಡಿದ್ದಾರೆ. ಕೆಲವೇ ದಿನಗಳಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯಾರಂಭ ಮಾಡಲಾಗಿದೆ. ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.

94 ಸಿ ಅಡಿ ಹಕ್ಕುಪತ್ರ, ಕೃಷಿ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.

ವಿಮಾನ ನಿಲ್ದಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅದಕ್ಕೆ ಮುಕ್ತಿ ನೀಡಬೇಕು. ಹೇಮಾವತಿ ನಾಲೆಗಳ ಆಧುನೀಕರಣಕ್ಕೆ ಒತ್ತು ನೀಡಬೇಕು. ಹಂತಹಂತವಾಗಿ ಆದರೂ ಕೆಲಸ ಕೈಗೆತ್ತಿಕೊಳ್ಳಬೇಕು. ಹೇಮಾವತಿ ಜಲಾಶಯದ ಕೆಳಗೆ ನೂರಾರು ಎಕರೆ ಜಾಗವಿದ್ದು, ಬೃಂದಾವನ ಮಾದರಿ ಉದ್ಯಾನಕ್ಕೆ ಅನುಮೋದನೆ ನೀಡಬೇಕು. ಗಂಡಸಿ ಹೋಬಳಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅವಕಾಶ ಮಾಡಿಕೊಡಬೇಕು. ಹಾಸನ ಮಹಾನಗರ ಪಾಲಿಕೆಗೆ ಹೆಚ್ಚುವರಿ ಹಳ್ಳಿಗಳು ಸೇರಿದ್ದು, ಅದಕ್ಕೆ ಹೆಚ್ಚುವರಿ ಅನುದಾನ ನೀಡಬೇಕು. ಮಾನವ–ವನ್ಯಜೀವಿ ಸಂಘರ್ಷಕ್ಕೆ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು.

ರಾಜಕೀಯವಾಗಿ ಪ್ರಭಾವ ಹಾಗೂ ಮಹತ್ವ ಹೊಂದಿರುವ ಜಿಲ್ಲೆ. ಘಟಾನುಘಟಿ ರಾಜಕಾರಣಿಗಳ ತವರೂರು. ಈ ಜಿಲ್ಲೆಯವರೇ ಸಚಿವರಾಗಬೇಕು ಎಂಬ ಕೂಗು ಇದೆ. ಇದಕ್ಕೆ ಅವಕಾಶ ಮಾಡಿಕೊಡಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.