ADVERTISEMENT

‘ಕಾಫಿ ಡೇ‘ ಸಿದ್ಧಾರ್ಥ ಲಪಟಾಯಿಸಿದ ಹಣ ಸರ್ಕಾರದ ಬೊಕ್ಕಸಕ್ಕೆ ಬರಲಿ: ಹಿರೇಮಠ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 14:14 IST
Last Updated 14 ಆಗಸ್ಟ್ 2019, 14:14 IST
   

ಧಾರವಾಡ: ‘ಕೆಫೆ ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ ಅವರದ್ದು ದುರಂತ ಸಾವು. ಆದರೆ ‘ವೇ ಟೂ ವೆಲ್ತ್‌’ ಮೂಲಕ ಲಪಟಾಯಿಸಿದ ಸಾರ್ವಜನಿಕ ಮೊತ್ತ ಮರಳಿ ಸರ್ಕಾರದ ಬೊಕ್ಕಸಕ್ಕೆ ಬರಬೇಕು’ ಎಂದು ಸಮಾಜ ಪರಿವರ್ತನ ಸಮುದಾಯದ ಎಸ್‌.ಆರ್.ಹಿರೇಮಠ ಆಗ್ರಹಿಸಿದರು.

‘ಉದ್ಯಮಿ ಸಿದ್ಧಾರ್ಥ ಅವರು ಸಾವಿರಾರು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ ಎಂಬುದು ಒಳ್ಳೆಯ ಸಂಗತಿ. ಆದರೆ ಭ್ರಷ್ಟಾಚಾರ, ಭೂ ಕಬಳಿಕೆ ಮಾಡಿದ್ದು ಕ್ಷಮಿಸಲಾರದ ತಪ್ಪು. ಕೊಲೊಕೇಷನ್‌, ಡಾರ್ಕ್‌ ಫೈಬರ್‌ ಹಗರಣ ಕನಿಷ್ಠ ₹50ಸಾವಿರ ಕೋಟಿ ಮೊತ್ತದ್ದಾಗಿದೆ. ಇವೆಲ್ಲದರ ಸತ್ಯವನ್ನು ಬಯಲಿಗೆ ತರುವ ಅಗತ್ಯವಿದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಈ ಕುರಿತು ಪ್ರಧಾನಮಂತ್ರಿ, ಸಿಬಿಐ, ಲೋಕಪಾಲ್ ಮುಖ್ಯಸ್ಥರು ಕೂಡಲೇ ಸಮಯ ವ್ಯರ್ಥ ಮಾಡದೆ ತನಿಖೆ ಮಾಡಿ ಸತ್ಯವನ್ನು ಬಯಲಿಗೆ ತರಬೇಕು. ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಹಾಗೂ ಸಾಂವಿಧಾನಿಕ ಸಂಸ್ಥೆಗಳು ಈ ಬಹುದೊಡ್ಡ ಹಗರಣದ ತನಿಖೆ ಆರಂಭಿಸುವ ಮೂಲಕ ದೇಶದ ಜನತೆಗೆ ಒಳ್ಳೆಯ ಕೊಡುಗೆ ನೀಡಬೇಕು’ ಎಂದು ಹಿರೇಮಠ ಒತ್ತಾಯಿಸಿದರು.

ADVERTISEMENT

‘ಆಕಸ್ಮಿಕ ಹೆಚ್ಚಿನ ಮಳೆಯಿಂದ ಜನಜೀವನ ಹಾಗೂ ಪಶುಗಳ ಸ್ಥಿತಿ ಅಸ್ತವ್ಯಸ್ಥವಾಗಿದೆ. ಜನರು ತುಂಬಾ ಕಷ್ಟದಲ್ಲಿದ್ದಾರೆ. ಅವರ ಸಹಾಯಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತು ನಾಗರಿಕ ಸಮಾಜದ ಸಂಘ–ಸಂಸ್ಥೆಗಳು ಸಹಾಯ ಹಸ್ತ ಚಾಚಿ ಅವರಲ್ಲಿ ಧೈರ್ಯ ತುಂಬಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.