ಮದ್ಯ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಮದ್ಯ ತಯಾರಿಕೆ, ಬಾಟ್ಲಿಂಗ್ ಮತ್ತು ಮಾರಾಟ ಮಳಿಗೆಗಳು ಸೇರಿ ಎಲ್ಲ ಸ್ವರೂಪದ ಶುಲ್ಕಗಳನ್ನು ಶೇ 100ರಷ್ಟು ಏರಿಕೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಈ ಸಂಬಂಧ ಅಬಕಾರಿ ಕಾನೂನುಗಳಿಗೆ ತಿದ್ದುಪಡಿ ಮಾಡಿದ್ದು, ಕರಡು ನಿಯಮಗಳ ಅಧಿಸೂಚನೆಯನ್ನು ಗುರುವಾರ ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ಆಕ್ಷೇಪಣೆಗೆ ಏಳು ದಿನಗಳ ಅವಕಾಶ ನೀಡಿದೆ. ಜುಲೈ 1ರಿಂದ ಪರಿಷ್ಕೃತ ಶುಲ್ಕ ಜಾರಿಗೆ ಬರಲಿದೆ.
ಬ್ರುವರಿ ಸನ್ನದು ಶುಲ್ಕ ₹27 ಲಕ್ಷದಿಂದ ₹54 ಲಕ್ಷಕ್ಕೆ, ಡಿಸ್ಟಿಲರಿ ಮತ್ತು ವೇರ್ಹೌಸ್ ಸನ್ನದು ಶುಲ್ಕವು ₹45 ಲಕ್ಷದಿಂದ ₹90 ಲಕ್ಷಕ್ಕೆ ಏರಿಕೆಯಾಗಲಿದೆ. ಡಿಸ್ಟಿಲರಿ ಮತ್ತು ಬ್ರುವರಿಗಳ ಬಾಟ್ಲಿಂಗ್ ಸನ್ನದು ಶುಲ್ಕವನ್ನು ₹1 ಲಕ್ಷದಿಂದ ₹2 ಲಕ್ಷಕ್ಕೆ, ಬಲ್ಕ್ ಬಿಯರ್ ಮಾರಾಟ ಗುತ್ತಿಗೆ ವಾರ್ಷಿಕ ಶುಲ್ಕವು ₹1 ಲಕ್ಷದಿಂದ ₹2 ಲಕ್ಷಕ್ಕೆ, ಬಾಟಲ್ ಬಿಯರ್ ಚಿಲ್ಲರೆ ಮಾರಾಟ ಹಕ್ಕಿನ ಗುತ್ತಿಗೆ ವಾರ್ಷಿಕ ಶುಲ್ಕವು ₹10,000ಕ್ಕೆ ಹೆಚ್ಚಾಗಲಿದೆ.
ಸಿಎಲ್–1, ಸಿಎಲ್–2, ಸಿಎಲ್–7 ಮತ್ತು ಸಿಎಲ್–9 ಸನ್ನದುಗಳನ್ನು ಒಬ್ಬರಿಂದ ಮತ್ತೊಬ್ಬರ ಹೆಸರಿಗೆ ವರ್ಗಾ ವಣೆ ಮಾಡಲು ಈಗ ವಾರ್ಷಿಕ ಸನ್ನದು ಶುಲ್ಕದ, ಎರಡು ಪಟ್ಟು ಶುಲ್ಕ ವಿಧಿಸಲಾಗುತ್ತಿದೆ. ಅದನ್ನು ಮೂರು ಪಟ್ಟಿಗೆ ಹೆಚ್ಚಿಸಲು ಕರಡು ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾಗಿದೆ. ಜತೆಗೆ ಯಾವುದೇ ಮಳಿಗೆಯ ಸ್ಥಳ ಬದಲಾವಣೆಗೆ ಈಗ ಸನ್ನದು ಶುಲ್ಕದ, ಶೇ 50ರಷ್ಟು ಶುಲ್ಕ ವಿಧಿಸಲಾಗುತ್ತಿದೆ. ಅದನ್ನು ಶೇ 100ರಷ್ಟಕ್ಕೆ ಹೆಚ್ಚಿಸಲಾಗುತ್ತಿದೆ.
‘2025–26ನೇ ಸಾಲಿನಲ್ಲಿ ಅಬಕಾರಿ ಇಲಾಖೆಗೆ ಒಟ್ಟು ₹40,000 ಕೋಟಿ ಆದಾಯ ಸಂಗ್ರಹ ಗುರಿ ನೀಡಲಾಗಿದೆ. ಆದಾಯ ಸಂಗ್ರಹದ ಎಲ್ಲ ಸಾಧ್ಯತೆಗಳನ್ನೂ ಸರ್ಕಾರ ಬಳಸಿ ಕೊಳ್ಳುತ್ತಿದೆ. ಸನ್ನದು ಶುಲ್ಕ ಏರಿಕೆಗೂ ಇದೇ ಕಾರಣ’ ಎಂದು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಶುಲ್ಕ ಹೆಚ್ಚಳಕ್ಕೆ ವಿರೋಧ
*ಸಿಎಲ್–5 ಸನ್ನದುಗಳ ಪ್ರತಿದಿನದ ಶುಲ್ಕ ₹10,000ದಿಂದ ₹20,000ಕ್ಕೆ ಏರಿಕೆ
*ತಾರಾ ಹೋಟೆಲ್ಗಳ ಸಿಎಲ್–7 ಸನ್ನದಿನ ವಾರ್ಷಿಕ ಶುಲ್ಕ ₹10 ಲಕ್ಷದಿಂದ ₹20 ಲಕ್ಷಕ್ಕೆ ಏರಿಕೆ
*ಸೇನಾ ಕ್ಯಾಂಟೀನ್ಗಳ ಸಿಎಲ್–8 ಸನ್ನದು ಶುಲ್ಕ ₹250ರಿಂದ ₹500ಕ್ಕೆ, ಸೇನಾ ಮದ್ಯ ಗೋದಾಮುಗಳ ಸಿಎಲ್–8ಎ ಸನ್ನದು ಶುಲ್ಕ ₹1.25 ಲಕ್ಷದಿಂದ ₹2.50 ಲಕ್ಷಕ್ಕೆ ಏರಿಕೆ
*ಸಿಎಲ್–9 ವರ್ಗದ ಎಲ್ಲ ಸನ್ನದುಗಳ ಶುಲ್ಕ ಶೇ100ರಷ್ಟು ಏರಿಕೆ
*ವಿಮಾನ ನಿಲ್ದಾಣ ವ್ಯಾಪ್ತಿಯ ಸನ್ನದುಗಳ ಶುಲ್ಕ ಶೇ 100ರಷ್ಟು ಹೆಚ್ಚಳ
‘ನಾವೆಲ್ಲ ಸಾಯಬೇಕು’
‘ಶುಲ್ಕವನ್ನು ಒಂದುಪಟ್ಟು ಏರಿಕೆ ಮಾಡುವ ಸರ್ಕಾರದ ಈ ನಡೆಯಿಂದ ನೂರಾರು ಮದ್ಯ ಮಾರಾಟಗಾರರು ಸಾಯುವ ಸ್ಥಿತಿ ಎದುರಾಗಲಿದೆ’ ಎಂದು ಮದ್ಯ ಮಾರಾಟಗಾರರ ಸಂಘದ ಪದಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಬಿಯರ್ ಮೇಲಿನ ಸುಂಕವನ್ನು ಪದೇ–ಪದೇ ಏರಿಕೆ ಮಾಡಿದ ಕಾರಣಕ್ಕೆ, ಅದರ ಮಾರಾಟ ಕುಸಿದಿತ್ತು. ಈಗ ಸನ್ನದು ಶುಲ್ಕ ಏರಿಕೆಯೂ ಪ್ರತಿಕೂಲ ಪರಿಣಾಮ ಬೀರಲಿದೆ. ಮದ್ಯ ಮಾರಾಟಗಾರರ ಸಂಘಗಳ ಒಕ್ಕೂಟದಿಂದ ಶುಕ್ರವಾರ ಸಭೆ ನಡೆಸಲಾಯಿತು. ಎಲ್ಲ ಸಂಘಗಳು ತಮ್ಮ ಅಭಿಪ್ರಾಯವನ್ನು ಲಿಖಿತ ರೂಪದಲ್ಲಿ ಸಲ್ಲಿಸಬೇಕು ಮತ್ತು ಅದನ್ನು ಸೋಮವಾರ ಸರ್ಕಾರದ ಗಮನಕ್ಕೆ ತರುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.