ADVERTISEMENT

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಹುದ್ದೆಗೆ ಇನ್ನಿಲ್ಲದ ಲಾಬಿ

ಸದ್ಯ ‘ಅಸ್ತಿತ್ವ’ ಕಳೆದುಕೊಂಡಿರುವ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ರಾಜೇಶ್ ರೈ ಚಟ್ಲ
Published 21 ಆಗಸ್ಟ್ 2022, 19:31 IST
Last Updated 21 ಆಗಸ್ಟ್ 2022, 19:31 IST
ಹಾಲಪ್ಪ ಆಚಾರ್‌
ಹಾಲಪ್ಪ ಆಚಾರ್‌   

ಬೆಂಗಳೂರು: ಎಂಟು ತಿಂಗಳಿಂದ ಖಾಲಿ ಬಿದ್ದಿರುವ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಹುದ್ದೆಗೆ ಇನ್ನಿಲ್ಲದ ಪೈಪೋಟಿ ಏರ್ಪಟ್ಟಿದೆ. ಸಚಿವರು, ಮಠಾಧೀಶರು, ಪ್ರಭಾವಿ ರಾಜಕಾರಣಿಗಳ ಶಿಫಾರಸು ಪತ್ರಗಳ ಸಹಿತ 50ಕ್ಕೂ ಹೆಚ್ಚು ಅರ್ಜಿಗಳು ಈ ಹುದ್ದೆಗೆ ಸಲ್ಲಿಕೆಯಾಗಿವೆ. ಹೀಗಾಗಿ, ಸರ್ಕಾರದ ಪಾಲಿಗೆ ನೇಮಕಾತಿಯು ಕಗ್ಗಂಟಾಗಿ ಪರಿಣಮಿಸಿದೆ.

ಸಾಂವಿಧಾನಿಕ ಸಂಸ್ಥೆಯಾಗಿ
ರುವ ಈ ಆಯೋಗ, ಮಕ್ಕಳ ಹಕ್ಕುಗಳ ರಕ್ಷಣೆಯ ಜೊತೆಗೆ, ಶಿಕ್ಷಣ ಹಕ್ಕು ಕಾಯ್ದೆ, ಪೋಕ್ಸೊ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ವಿಚಾರಣೆ ನಡೆಸುತ್ತದೆ. ಸದ್ಯ ಪೂರ್ಣಪ್ರಮಾಣದ ಆಯೋಗ ಇಲ್ಲದೇ ಇರುವುದರಿಂದ 1,200ಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥವಾಗದೇ ಉಳಿದಿವೆ.

ಆಯೋಗದ ಅಧ್ಯಕ್ಷರಾಗಿದ್ದ ಡಾ. ಅಂತೋಣಿ ಸೆಬಾಸ್ಟಿಯನ್ ಅವರ ಮೂರು ವರ್ಷಗಳ ಅಧಿಕಾರವಧಿ 2021ರ ಡಿ. 4ಕ್ಕೆ ಕೊನೆಗೊಂಡಿದೆ. ಬಳಿಕ, ಆಯೋಗದ ಆರು ಸದಸ್ಯರ ಪೈಕಿ ಒಬ್ಬರಾದ ಜಯಶ್ರೀ ಅವರನ್ನು ಹಂಗಾಮಿ ಅಧ್ಯಕ್ಷರ
ನ್ನಾಗಿ ನೇಮಿಸಲಾಗಿತ್ತು. ಎಲ್ಲ ಆರೂ ಸದಸ್ಯರ ಅವಧಿ ಕೂಡಾ ಒಂದೂವರೆ ತಿಂಗಳ ಹಿಂದೆ (ಜುಲೈ 9) ಮುಕ್ತಾಯ
ವಾಗಿದೆ. ಹೀಗಾಗಿ, ಆಯೋಗವು
ಸದ್ಯ ತನ್ನ ಅಸ್ತಿತ್ವವನ್ನೇ ಕಳೆದು
ಕೊಂಡಂತಿದೆ!

ADVERTISEMENT

ಅಧ್ಯಕ್ಷ ಸ್ಥಾನಕ್ಕೆ ಆಯೋಗದ ಸದಸ್ಯರಾಗಿದ್ದ ಜಯಶ್ರೀ, ‘ಚೈಲ್ಡ್‌ ರೈಟ್ಸ್‌ ಟ್ರಸ್ಟ್’ನ ಕಾರ್ಯಕಾರಿ ನಿರ್ದೇಶಕ ವಾಸುದೇವ ಶರ್ಮಾ, ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಅವರೂ ಅರ್ಜಿ ಸಲ್ಲಿಸಿದ್ದಾರೆ‌.

ಅಧ್ಯಕ್ಷರ ಮತ್ತು ಸದಸ್ಯರ ಅಧಿಕಾರಾವಧಿ ಮೂರು ವರ್ಷಗಳು. ಅದಕ್ಕೂ ಮೊದಲು ಅಧ್ಯಕ್ಷರನ್ನು ಬದಲಿಸಲು ನಿಯಮದಲ್ಲಿ ಅವಕಾಶ ಇಲ್ಲ. ಅವರೇ ರಾಜೀನಾಮೆ ನೀಡಿದರೆ ಮಾತ್ರ ಹೊಸಬರ ನೇಮಕ ಮಾಡಬಹುದು.

‘ಸರ್ಕಾರಕ್ಕೆ ನಾಲ್ಕೈದು ಹೆಸರು ಶಿಫಾರಸು’

‘ಹೊಸ ಅಧ್ಯಕ್ಷರ ನೇಮಕಕ್ಕೆ ಫೆ. 1ರಂದು ಅರ್ಜಿ ಆಹ್ವಾನಿಸಿ, 30 ದಿನಗಳ ಕಾಲಾವಕಾಶ ನೀಡಲಾಗಿತ್ತು. ಅರ್ಜಿ ಸಲ್ಲಿಕೆ ಅವಧಿ ಮುಗಿದು ಆರು ತಿಂಗಳು ಕಳೆದಿದೆ. ಹುದ್ದೆಗಾಗಿ ತೀವ್ರ ಪೈಪೋಟಿ, ಒತ್ತಡ, ವಶೀಲಿಬಾಜಿ ನಡೆ
ಯುತ್ತಿದೆ. ಆರು ಸದಸ್ಯ ಸ್ಥಾನಗಳಿಗೆ ಜುಲೈ11ರಂದು ಅರ್ಜಿ ಆಹ್ವಾನಿಸಿ, ಒಂದು ತಿಂಗಳು ಅವಕಾಶ ನೀಡಲಾಗಿತ್ತು. ಸದಸ್ಯ ಸ್ಥಾನಕ್ಕೆ 90ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆ ಆಗಿವೆ. ಅಧ್ಯಕ್ಷರ ಹುದ್ದೆಗೆ ಸಲ್ಲಿಕೆಯಾದ ಅರ್ಜಿಗಳನ್ನು ಈಗಾಗಲೇ ಪರಿಶೀಲಿಸಿ, ನಾಲ್ಕೈದು ಹೆಸರುಗಳನ್ನು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಸದಸ್ಯ ಸ್ಥಾನಗಳಿಗೆ ಸಲ್ಲಿಕೆಯಾದ ಅರ್ಜಿಗಳ ಪರಿಶೀಲನೆ ನಡೆಯುತ್ತಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಅಧ್ಯಕ್ಷ ಹುದ್ದೆಗೆ ಸಾಕಷ್ಟು ಅರ್ಜಿಗಳು ಬಂದಿವೆ. ಆದರೆ, ಯಾವುದೇ ಶಿಫಾರಸು, ವಶೀಲಿಬಾಜಿ, ಒತ್ತಡಕ್ಕೆ ಮಣಿಯದೆ ಅತಿ ಶೀಘ್ರದಲ್ಲಿ ಆಯ್ಕೆ ಮಾಡುತ್ತೇವೆ

- ಹಾಲಪ್ಪ ಆಚಾರ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.