ಮಡಿಕೇರಿ: ಕೊರೊನಾ ವೈರಸ್ ಕಾರ್ಮಿಕರ ಬದುಕಿನ ಮೇಲೂ ಕರಿನೆರಳು ಬೀರಿದೆ. ಹೊರ ರಾಜ್ಯ, ಹೊರ ಜಿಲ್ಲೆಯಿಂದ ದುಡಿಮೆಗೆ ಬಂದಿದ್ದ ಅದೆಷ್ಟೋ ಕಾರ್ಮಿಕರಿಗೆ ಕೆಲಸ ಇಲ್ಲದಾಗಿದೆ. ತಮ್ಮ ಸ್ವಗ್ರಾಮಕ್ಕೆ ಮರಳಲೂ ಸಾಧ್ಯವಾಗುತ್ತಿಲ್ಲ.
ಏ.14ರ ವರಗೆ ಲಾಕ್ಡೌನ್ ಘೋಷಿಸಿರುವುದರಿಂದ ಹೊರ ಜಿಲ್ಲೆಗಳಿಂದ ಎಸ್ಟೇಟ್ಗಳಿಗೆ ಕೂಲಿ ಕೆಲಸಕ್ಕೆ ಬಂದಿದ್ದ ಸಾವಿರಾರು ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿದೆ.
ಜಿಲ್ಲೆಯ ಸಿದ್ದಾಪುರ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಕೂಲಿ ಕೆಲಸಕ್ಕೆಂದು ಬಂದಿದ್ದ ಸುಮಾರು 62 ಜನರನ್ನು ಸೋಮವಾರಪೇಟೆಯ ಚೆಕ್ಪೋಸ್ಟ್ ಬಳಿ ಪೊಲೀಸರು ತಡೆದು ಹೋಂ ಕ್ವಾರಂಟೈನ್ನಲ್ಲಿ ನಿಗಾ ಇಡಲಾಗಿದೆ. ಎಲ್ಲ ಕಾರ್ಮಿಕರನ್ನೂ ಮಡಿಕೇರಿಯ ಸಾರ್ವಜನಿಕ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಇಟ್ಟು ನಿಗಾ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ರಾಯಪುರ ಗ್ರಾಮದಿಂದ ಕೊಡಗಿಗೆ ಕೂಲಿ ಕೆಲಸಕ್ಕೆ ಬಂದಿದ್ದ ಇಷ್ಟೂ ಕಾರ್ಮಿಕರೂ ಕೊರೊನಾ ಭೀತಿ ಹಾಗೂ ಲಾಕ್ಡೌನ್ನಿಂದ ಹುಟ್ಟೂರಿಗೆ ವಾಪಸ್ ತೆರಳಲು ಮುಂದಾಗಿದ್ದರು. ಗಂಟು ಮೂಟೆ ಕಟ್ಟಿಕೊಂಡು ಲಾರಿಯಲ್ಲಿ ಪ್ರಯಾಣ ಬೆಳೆಸಿದ್ದರು. ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಪೋಲಿಸರು, ಸೋಮವಾರಪೇಟೆ ಚೆಕ್ಪೋಸ್ಟ್ನಲ್ಲಿ ಬಳಿ ತಡೆದು ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ಒದಗಿಸಿದ್ದಾರೆ. ಅಲ್ಲದೇ ಎಲ್ಲರನ್ನೂ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ.
ಮಾಲೀಕರ ವಿರುದ್ಧ ಕ್ರಮಕ್ಕೆ ಸೂಚನೆ: ಕೂಲಿ ಕಾರ್ಮಿಕರನ್ನು ಮೂಲ ನೆಲೆಗೆ ಹೋಗುವಂತೆ ಹೇಳಿದ ತೋಟದ ಮಾಲೀಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಎ.ಸಿ ಜವರೇಗೌಡ ಹೇಳಿದರು.
ಕಾರ್ಮಿಕರು ತಮ್ಮ ಸ್ವಗ್ರಾಮಕ್ಕೆ ಹೋಗುವಂತೆ ಒತ್ತಾಯಿಸಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಲಾಕ್ಡೌನ್ ಆದೇಶ ಜಾರಿಯಲ್ಲಿದ್ದರೂ ಅವರನ್ನು ಲಾರಿಯಲ್ಲಿ ಕಳುಹಿಸಲು ಯತ್ನಿಸಿದ ಸಿದ್ದಾಪುರದ ಕಾಫಿ ತೋಟವೊಂದರ ಮಾಲೀಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗುವುದು. ಅದಕ್ಕೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.