ADVERTISEMENT

ದೇವಸ್ಥಾನದಲ್ಲಿ ಜೋರು ಶಬ್ದ: ಪೊಲೀಸ್‌ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2022, 19:35 IST
Last Updated 15 ಫೆಬ್ರುವರಿ 2022, 19:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಿಗದಿಗಿಂತ ಹೆಚ್ಚು ಶಬ್ದ ಉಂಟು ಮಾಡುತ್ತಿದೆ ಎಂಬ ಆರೋಪದಡಿ ನಗರದ ದೊಡ್ಡ ಗಣಪತಿ ದೇವಸ್ಥಾನ ಮತ್ತು ಸಮೂಹ ದೇವಾಲಯಗಳ ಆಡಳಿತ ಮಂಡಳಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ ಹೆಚ್ಚಿನ ಶಬ್ದ ಕೇಳಿ ಬಂದರೆ ‘ಶಬ್ದ ಮಾಲಿನ್ಯ ನಿರ್ಬಂಧ ಮತ್ತು ನಿಯಂತ್ರಣ ನಿಯಮ– 2000’ ಅಡಿಯಲ್ಲಿ ಪ್ರಕರಣ ದಾಖಲಿಸಲು ಅವಕಾಶವಿದೆ. ಅದರ ಅನ್ವಯ, ನಿಗದಿತ ಡೆಸಿಬಲ್ ಶಬ್ದಕ್ಕಿಂತ ಹೆಚ್ಚಿನ ಶಬ್ದ ಉಂಟು ಮಾಡುತ್ತಿರುವ ಕಾರಣಕ್ಕೆ ಬಸವನಗುಡಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ಈ ನೋಟಿಸ್ ನೀಡಿದ್ದಾರೆ.

ಸೂಚನೆಯ ಹೊರತಾಗಿಯೂ ಹೆಚ್ಚಿನ ಶಬ್ದ ಬರುವಂತೆ ಘಂಟೆ ಬಾರಿಸಿದರೆ ಪ್ರಕರಣ ದಾಖಲು ಮಾಡಲಾಗುವುದು ಎಂದು ದೇವಸ್ಥಾನಗಳ ಕಾರ್ಯನಿರ್ವಹಣಾಧಿಕಾರಿಗೆ ನೀಡಿರುವ ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.

ADVERTISEMENT

ಪೊಲೀಸ್‌ ಇನ್‌ಸ್ಪೆಕ್ಟರ್‌ ಅವರ ನೋಟಿಸ್‌ ಉಲ್ಲೇಖಿಸಿ ದೇವಸ್ಥಾನದ ಪ್ರಧಾನ ಅರ್ಚಕರಿಗೆ ಜ್ಞಾಪನ ಪತ್ರ ನೀಡಿರುವ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ, ‘ದೇವಸ್ಥಾನಗಳಲ್ಲಿ ಮಹಾ ಮಂಗಳಾರತಿ, ಅಭಿಷೇಕ ಇತ್ಯಾದಿ ಸಂದರ್ಭಗಳಲ್ಲಿ ಹಾಗೂ ದೇವಾಲಯದ ಆವರಣದಲ್ಲಿ ಉಪಯೋಗಿಸುವ ಢಮರುಗ, ಧ್ವನಿವರ್ಧಕ ಯಂತ್ರಗಳಿಂದ ನಿಗದಿತ ಮಿತಿಗಿಂತ ಹೆಚ್ಚು ಧ್ವನಿ ಹೊರಡಿಸಬಾರದು’ ಎಂದೂ ಸೂಚಿಸಿದ್ದಾರೆ.

ನೋಟಿಸ್ ನೀಡಿಲ್ಲ: ಆನಂದ್ ಸಿಂಗ್

‘ದೊಡ್ಡ ಗಣಪತಿ ದೇವಾಲಯದಲ್ಲಿ ಘಂಟೆ ಶಬ್ದ ಕಡಿಮೆ ಮಾಡುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಯಾವುದೇ ನೋಟಿಸ್ ನೀಡಿಲ್ಲ’ ಎಂದು ಪರಿಸರ ಸಚಿವ ಆನಂದ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

‘ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಂಗಳೂರು ದಕ್ಷಿಣ ಪ್ರಾದೇಶಿಕ ಕಚೇರಿಯಿಂದ ಯಾವುದೇ ಆದೇಶ ಹೊರಡಿಸಿಲ್ಲ. ಅಲ್ಲದೆ, ಪೊಲೀಸ್ ನೋಟಿಸ್‌ನಲ್ಲಿ ಉಲ್ಲೇಖಿಸಿರುವಂತೆ ಬೆಂಗಳೂರು ನಗರ ದಕ್ಷಿಣ ಪ್ರಾದೇಶಿಕ ಕಚೇರಿಯಿಂದ ಈ ರೀತಿಯ ಯಾವುದೇ ಪತ್ರವನ್ನು ನೀಡಿಲ್ಲ. ಈ ಬಗ್ಗೆ ಇಲಾಖೆಯ ಕಾರ್ಯದರ್ಶಿ ಜೊತೆ ಮಾತನಾಡಿದ್ದೇನೆ’ ಎಂದೂ ಸಚಿವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.