ಸಿದ್ದರಾಮಯ್ಯ
ಬೆಂಗಳೂರು: ಒಳಮೀಸಲಾತಿ ಅಡಿಯಲ್ಲಿ ಪಿಜಿ ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶ ಪಡೆದ ಮಾದಿಗ ಸಮುದಾಯದ ವಿದ್ಯಾರ್ಥಿಗಳ ನಿಯೋಗವು, ಕಾಂಗ್ರೆಸ್ ಮುಖಂಡ ಎಚ್.ಆಂಜನೇಯ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿತು.
ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ನಿಯೋಗವು, ‘ಒಳಮೀಸಲಾತಿ ಜಾರಿಗೂ ಮುನ್ನ ಮಾದಿಗ ವಿದ್ಯಾರ್ಥಿಗಳಿಗೆ, ಪಿಜಿ ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶ ಸಿಗುತ್ತಿರಲಿಲ್ಲ. ಒಳ ಮೀಸಲಾತಿ ಜಾರಿಯಾದ ಬಳಿಕ ಅದು ಸಾಧ್ಯವಾಗಿದೆ. ಹಲವು ಅಡೆತಡೆಗಳಿದ್ದರೂ ಒಳ ಮೀಸಲಾತಿ ಜಾರಿ ಮಾಡಿದ್ದಕ್ಕೆ ಅಭಿನಂದನೆ’ ಎಂದು ತಿಳಿಸಿತು.
‘ಅಸ್ಪೃಶ್ಯ ಅಲೆಮಾರಿ ಸಮುದಾಯಗಳು ನ್ಯಾಯಾಲಯಕ್ಕೆ ಹೋಗಿರುವ ಕಾರಣಕ್ಕೆ ನೇಮಕಾತಿಯಲ್ಲಿ ಒಳ ಮೀಸಲಾತಿ ಜಾರಿಗೆ ತಡೆಬಿದ್ದಿದೆ. ಅದು ತೆರವಾದರೆ ಸರ್ಕಾರಿ ಉದ್ಯೋಗ ನೇಮಕಾತಿಯಲ್ಲೂ ಮಾದಿಗರಿಗೆ ಅವಕಾಶ ಸಿಗಲಿದೆ ಎಂಬ ಆಶಾಭಾವ ಮೂಡಿದೆ’ ಎಂದು ವಿದ್ಯಾರ್ಥಿಗಳು ಹೇಳಿದರು.
ಎಚ್.ಆಂಜನೇಯ ಮಾತನಾಡಿ, ‘101 ಜಾತಿಗಳ ವಿದ್ಯಾರ್ಥಿಗಳ ಮಧ್ಯೆ ಪೈಪೋಟಿ ನೀಡಲು ಮಾದಿಗರಿಗೆ ಸಾಧ್ಯವಾಗುತ್ತಿರಲಿಲ್ಲ. ಒಳ ಮೀಸಲಾತಿಯ ಕಾರಣಕ್ಕೇ ಉನ್ನತ ಶಿಕ್ಷಣದಲ್ಲಿ ಮಾದಿಗರಿಗೆ ಅವಕಾಶ ಸಿಕ್ಕಿದೆ. ಒಳ ಮೀಸಲಾತಿಯಿಂದ ಅನುಕೂಲವಿದೆ ಎಂಬುದು ಈಗ ಸಾಬೀತಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.