ADVERTISEMENT

ಮಹಾರಾಷ್ಟ್ರದಲ್ಲಿ ಬಿಜೆಪಿ- ಶಿವಸೇನೆ ಸರ್ಕಾರ: ನಿರಾಣಿ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 12:12 IST
Last Updated 26 ಜೂನ್ 2022, 12:12 IST
ಮುರುಗೇಶ  ನಿರಾಣಿ
ಮುರುಗೇಶ  ನಿರಾಣಿ    

ಬೆಳಗಾವಿ: "ಮಹಾರಾಷ್ಟ್ರದಲ್ಲಿ ಬಿಜೆಪಿ- ಶಿವಸೇನೆ ಹೊಂದಾಣಿಕೆ ಮಾಡಿಕೊಂಡು ಹೊಸ ಸರ್ಕಾರ ರಚನೆ ಮಾಡುವುದು ನಿಶ್ಚಿತ" ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಎನ್‍ಸಿಪಿ, ಕಾಂಗ್ರೆಸ್, ಶಿವಸೇನೆ ಮೂರು ಸೇರಿ ಯಾವಾಗ ಸರ್ಕಾರ ಸ್ಥಾಪಿಸಿದಿರೋ ಆಗಲೇ ಈ ಸರ್ಕಾರ ಬಹಳ ದಿನ ನಡೆಯಲ್ಲ ಎಂದು ನಾವು ತಿಳಿದುಕೊಂಡಿದ್ದೇವು. ತಮ್ಮ ತಮ್ಮಲ್ಲಿಯೇ ಗೊಂದಲ ಮೂಡಿದೆ. ಒಂದು ವಾಹನ ಸರಿಯಾಗಿ ಓಡಬೇಕೆಂದರೆ ಅದನ್ನು ಒಬ್ಬರೇ ಓಡಿಸಬೇಕು. ಒಬ್ಬರ ಕಡೆ ಸ್ಟೇರಿಂಗ್, ಒಬ್ಬರ ಕಡೆ ಎಕ್ಸಿಲೇಟರ್, ಒಬ್ಬರ ಕಡೆ ಬ್ರೇಕ್ ಇರುವಾಗ ಅದು ಸುಸೂತ್ರವಾಗಿ ಓಡುವುದಿಲ್ಲ ಎಂದರು.

ಶಿವಸೇನೆಯವರು ಕಳೆದ 50 ವರ್ಷಗಳಿಂದ ಕಾಂಗ್ರೆಸ್ ಮತ್ತು ಎನ್‍ಸಿಪಿಯನ್ನು ವಿರೋಧ ಮಾಡಿಕೊಂಡು ಬಂದಿದ್ದಾರೆ. ಈಗ ಏಕಾಏಕಿ ಅವರ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ರಾಜಕಾರಣ ಮಾಡುವುದನ್ನು ಕಾರ್ಯಕರ್ತರು ಒಪ್ಪುವುದಿಲ್ಲ. ಇದರಿಂದ ಅಸಮಾಧಾನಗೊಂಡು ಹೊರಗಡೆ ಬರುತ್ತಿದ್ದಾರೆ. ಎಲ್ಲ ಕಾನೂನುಗಳ ಸಾಧಕ, ಬಾಧಕಗಳನ್ನು ವಿಚಾರ ಮಾಡಿಕೊಂಡು ಅವರು ಭೇಟಿಯಾಗಬಹುದು. ನಿಶ್ಚಿತವಾಗಿ ಮಹಾರಾಷ್ಟ್ರದಲ್ಲಿ ಒಂದು ಹೊಸ ಸರ್ಕಾರ ಸ್ಥಾಪನೆ ಆಗುತ್ತದೆ ಎಂದರು.

ಶಿವಸೇನೆ ಮತ್ತು ಬಿಜೆಪಿ ಹೊಂದಾಣಿಕೆ ಹೊಸದೇನಲ್ಲ. ಇದು ಹಳೆಯ ಸಂಬಂಧ. ಸುಮಾರು 25 ವರ್ಷಗಳಿಂದ ನಮ್ಮ ನಡುವೆ ಸಂಬಂಧವಿದೆ. ತತ್ವ, ಸಿದ್ಧಾಂತಗಳಲ್ಲಿ ನಮ್ಮ ಎರಡೂ ಪಕ್ಷಗಳಲ್ಲಿ ಸಾಮ್ಯತೆ ಇದೆ. ಈ ರೀತಿ ಇರುವಾಗ ಅಣ್ಣ, ತಮ್ಮಂದಿರು ಸಣ್ಣ ಪುಟ್ಟ ಅಸಮಾಧಾನ ಆದಾಗ ಹೊರಗಡೆ ಹೋಗಿರುತ್ತಾರೆ. ಇದು ಶಾಶ್ವತ ಅಲ್ಲ. ಮತ್ತೆ ಅಲ್ಲಿ ಒಂದಾಗಲಿದ್ದಾರೆ ಎಂದರು.

ಪ್ರತ್ಯೇಕ ರಾಜ್ಯದ ಬಗ್ಗೆ ಸಚಿವ ಉಮೇಶ ಕತ್ತಿ ಹೇಳಿಕೆಯು ಅವರ ವಯಕ್ತಿಕ ಹೇಳಿಕೆ. ಅದು ನಮ್ಮ ಪಕ್ಷ ಮತ್ತು ಸರ್ಕಾರದ ನಿರ್ಧಾರ ಅಲ್ಲ. ನನಗೆ ಅದರ ಬಗ್ಗೆ ಗೊತ್ತಿಲ್ಲ. ಅವರು ನನಗಿಂತ ಹಿರಿಯರು, ನಾನು 3 ಬಾರಿ ಎಂಎಲ್‍ಎ ಆಗಿದ್ದೇನೆ, ಆದರೆ ಅವರು 9 ಸಲ ಎಂಎಲ್‍ಎ ಆಗಿದ್ದಾರೆ. ಅವರದ್ದೇಯಾದ ಸ್ವಂತ ಅನುಭವದಿಂದ ಈ ರೀತಿ ಹೇಳಿಕೆ ನೀಡಿರಬಹುದು ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.