
ಆರ್. ಅಶೋಕ
ಬೆಂಗಳೂರು: ಸೂಕ್ತ ಬೆಂಬಲ ಬೆಲೆ ನೀಡಿ ಮೆಕ್ಕೆ ಜೋಳ ಖರೀಸುವಂತೆ ರೈತರು ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದರೆ, ಸಿದ್ದರಾಮಯ್ಯ ನೇತೃತ್ವದ ರೈತ ವಿರೋಧಿ ಸರ್ಕಾರ ಈವರೆಗೆ ಒಂದೇ ಒಂದು ಖರೀದಿ ಕೇಂದ್ರವನ್ನೂ ತೆರೆದಿಲ್ಲ ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ ಕಿಡಿ ಕಾರಿದ್ದಾರೆ.
ಕಾಲಹರಣ ಮಾಡದೇ ಕೂಡಲೇ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು. ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಅವರು ಸುದ್ದಿಗಾರರ ಜತೆ ಮಾತನಾಡಿ ಎಚ್ಚರಿಕೆ ನೀಡಿದರು.
‘ಈರುಳ್ಳಿ ಬೆಳೆಗಾರರು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಮಾರುಕಟ್ಟೆಯಲ್ಲಿ ಸಿಗುತ್ತಿರುವ ದರ ಕಳೆ ಕೀಳಿಸಿದ ಕೂಲಿಯ ಹಣಕ್ಕಿಂತಲೂ ಕಡಿಮೆ ಇದೆ. ಇಂತಹ ಸ್ಥಿತಿಯಲ್ಲಿ ನೆರವಿಗೆ ಧಾವಿಸಿ ಈರುಳ್ಳಿ ಖರೀದಿಸಲು ಕ್ರಮ ಕೈಗೊಳ್ಳಬೇಕಿದ್ದ ಸರ್ಕಾರ ಮೀನಾ–ಮೇಷ ಎಣಿಸುತ್ತಿದೆ. ಮಾತು–ಮಾತಿಗೆ ತಮ್ಮದು ರೈತ ಪರ ಸರ್ಕಾರ ಎಂದು ಸಿದ್ದರಾಮಯ್ಯ ಬೆನ್ನು ತಟ್ಟಿಕೊಳ್ಳುತ್ತಾರೆ. ಇದೇನಾ ರೈತರ ಪರವಾದ ಕಾಳಜಿ’ ಎಂದು ಪ್ರಶ್ನಿಸಿದರು.
ಶಾ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಗೃಹ ಸಚಿವ ಅಮಿತ್ ಶಾ ಅವರ ಕುರಿತು ಮಾತನಾಡುವ ನೈತಿಕತೆ ಇಲ್ಲ. ಮಲ್ಲಿಕಾರ್ಜುನ ಖರ್ಗೆ ರಾಜ್ಯದಲ್ಲಿ ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ದಲಿತರನ್ನು ಸುಟ್ಟು ಹಾಕಿದ ಘಟನೆ ನಡೆದಿತ್ತು. ಆ ಪ್ರಕರಣದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ವೈಫಲ್ಯಗಳ ಬಗ್ಗೆ ಪ್ರಿಯಾಂಕ್ ಮಾತನಾಡಲಿ ಎಂದು ಅಶೋಕ ಹೇಳಿದರು.
‘ಬಿಹಾರ ಗೆದ್ದರೆ ಮತಕಳ್ಳತನ ಆರೋಪ ಮಾಡುತ್ತಾರೆ’
‘ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಗೆಲ್ಲಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಆದ್ದರಿಂದ ಫಲಿತಾಂಶ ಬಂದ ಬಳಿಕ ರಾಹುಲ್ಗಾಂಧಿ ಮತಗಳ್ಳತನದ ಆರೋಪ ಮಾಡುವುದು ಖಂಡಿತ’ ಎಂದು ಆರ್. ಅಶೋಕ ಹೇಳಿದರು.
‘ಸುಮಾರು 12ಕ್ಕೂ ಹೆಚ್ಚು ಸಂಸ್ಥೆಗಳು ಸಮೀಕ್ಷೆ ಮಾಡಿದ್ದು ಎನ್ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಘಟಬಂಧನ್ ಸೋಲುತ್ತವೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಜನರ ತೀರ್ಪು ಒಪ್ಪಿಕೊಳ್ಳಲು ತಯಾರಿಲ್ಲದ ಮತ್ತು ತಮ್ಮ ನೇತೃತ್ವದ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ರಾಹುಲ್ಗಾಂಧಿ ಮತ ಕಳ್ಳತನದ ಆರೋಪ ಮಾಡುತ್ತಾರೆ. ರಾಹುಲ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಚುನಾವಣೆಗಳಲ್ಲಿ ಸರಣಿಯಾಗಿ ಸೋಲುತ್ತಿದೆ. ಹೀಗಾಗಿ ರಾಹುಲ್ ಅವರನ್ನು ‘ಐರನ್ ಲೆಗ್’ ಎಂದು ಕರೆಯಲಾಗುತ್ತದೆ’ ಎಂದು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.