ADVERTISEMENT

ಮನ್‌ಮುಲ್‌: ಅಧಿಕಾರ ಹಿಡಿದ ಜೆಡಿಎಸ್‌, ಬಿಜೆಪಿಗೆ ಮುಖಭಂಗ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 14:07 IST
Last Updated 3 ಅಕ್ಟೋಬರ್ 2019, 14:07 IST
   

ಮಂಡ್ಯ: ತೀವ್ರ ಕುತೂಹಲ ಮೂಡಿಸಿದ್ದ ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಮನ್‌ಮುಲ್‌)ದ ಅಧ್ಯಕ್ಷ–ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್‌ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಗುರುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿತರಾದ ರಾಮಚಂದ್ರು ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ರಘುನಂದನ್‌ ಆಯ್ಕೆಯಾದರು. ಜೆಡಿಎಸ್‌ ಬೆಂಬಲಿತ ನಿರ್ದೇಶಕ ಸ್ವಾಮಿ, ಮೂವರು ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕರು ಹಾಗೂ ನಾಲ್ವರು ಅಧಿಕಾರಿಗಳ ನೆರವಿನೊಂದಿಗೆ ಅಧಿಕಾರ ಹಿಡಿಯಲು ಯತ್ನಿಸಿದ್ದ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.

ಒಟ್ಟು 12 ನಿರ್ದೇಶಕ ಸ್ಥಾನದಲ್ಲಿ 8 ಜೆಡಿಎಸ್‌, 3 ಕಾಂಗ್ರೆಸ್‌, 1 ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದರು. ಜೆಡಿಎಸ್‌ಗೆ ಸರಳ ಬಹುಮತ ಇತ್ತು. ಆದರೆ ಅಧ್ಯಕ್ಷರಾಗುವ ಆಸೆಗೆ ಜೆಡಿಎಸ್‌ ಬೆಂಬಲಿತ ಎಸ್‌.ಪಿ.ಸ್ವಾಮಿ ಬಿಜೆಪಿ ಸೇರಿದ್ದರು. ಜೊತೆಗೆ ಬೈಲಾ ಉಲ್ಲಂಘನೆ ಆರೋಪದ ಮೇಲೆ ಇಬ್ಬರು ಜೆಡಿಎಸ್‌ ಬೆಂಬಲಿತರನ್ನು ಅನರ್ಹಗೊಳಿಸಲಾಗಿತ್ತು. ಆದರೆ ಹೈಕೋರ್ಟ್‌ನಲ್ಲಿ ಅವರಿಗ ಮತ ಚಲಾವಣೆ ಅವಕಾಶ ನೀಡಿತ್ತು. ಸ್ವಾಮಿ ಬಿಜೆಪಿ ಸೇರ್ಪಡೆಯೊಂದಿಗೆ ಜೆಡಿಎಸ್‌ ಬೆಂಬಲಿತರ ಸಂಖ್ಯೆ 7ಕ್ಕೆ ಕುಸಿದಿತ್ತು.

ADVERTISEMENT

ಅಧ್ಯಕ್ಷೀಯ ಚುನಾವಣೆಯಲ್ಲಿ ಮನ್‌ಮುಲ್‌ ಅಧಿಕಾರಿಯೊಬ್ಬರು ಜೆಡಿಎಸ್‌ ಪರ ಮತ ಚಲಾವಣೆ ಮಾಡಿದ ಕಾರಣ ಜೆಡಿಎಸ್‌ ಅಭ್ಯರ್ಥಿಗೆ 8 ಮತಗಳು ಬಿದ್ದವು. ಎಸ್‌.ಪಿ.ಸ್ವಾಮಿ ಸೇರಿ 1 ಬಿಜೆಪಿ, 3 ಕಾಂಗ್ರೆಸ್‌, ಒಬ್ಬರು ನಾಮ ನಿರ್ದೇಶಿತ ಸದಸ್ಯ ಹಾಗೂ ಮೂವರು ಅಧಿಕಾರಿಗಳು ಸೇರಿ ಬಿಜೆಪಿ ಪರವೂ 8 ಮತ ಬಿದ್ದವು. ಸಮಬಲ ಸಾಧಿಸಿದ ಹಿನ್ನೆಲೆಯಲ್ಲಿ ಲಾಟರಿ ಎತ್ತಲಾಯಿತು. ಜೆಡಿಎಸ್‌ನ ಅಭ್ಯರ್ಥಿಯ ಆಯ್ಕೆಯನ್ನು ಘೋಷಣೆ ಮಾಡಲಾಯಿತು. 9 ಮತ ಪಡೆಯುವ ಮೂಲಕ ರಘುನಂದನ್‌ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.