ಬೆಂಗಳೂರು:ಕೊರೊನಾ ಸೋಂಕು ಹರಡುವ ಭೀತಿಯಿಂದ ದೇಶವನ್ನು ಸಂಪೂರ್ಣವಾಗಿ ಲಾಕ್ಡೌನ್ ಮಾಡಲಾಗಿದ್ದು, ಇತ್ತಿಚೇಗೆ ಮಸೀದಿಗಳಲ್ಲಿ ನಮಾಜ್ ಮಾಡುತ್ತಿರುವುದು ಮಾಧ್ಯಮಗಳ ಮೂಲಕ ಕಂಡು ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ವಕ್ಫ್ ಮಂಡಳಿಯ ಅಧಿಕಾರಿಗಳು ಹಾಗೂ ಕಾರ್ಯದರ್ಶಿಯವರೊಂದಿಗೆ ಚರ್ಚಿಸಿ ಕಟ್ಟುನಿಟ್ಟಾದ ಕ್ರಮ ಗೈಗೊಳ್ಳಲು ಸೂಚಿಸಲಾಗಿದೆ ಎಂದು ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಮುಸ್ಲೀಂರು ದಿನಕ್ಕೆ 5 ಬಾರಿ ನಮಾಜ್ ಮಾಡುವ ಆಚರಣೆಯಿದ್ದು, ರಾಜ್ಯದ ಎಲ್ಲ ವಕ್ಫ್ ಸಂಸ್ಥೆಗಳ ವ್ಯವಸ್ಥಾಪನಾ ಸಮಿತಿಗಳು ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ದಿನಾಂಕ ಮಾರ್ಚ್ 31ರವರೆಗೆ ಸಾರ್ವಜನಿಕವಾಗಿ ನಮಾಜ್ ಮಾಡಲು ನಿರ್ಬಂಧಿಸಲಾಗಿತ್ತು. ಇದನ್ನೆ ಈಗ ಏರ್ಪಿಲ್ 14ರವರೆಗೆ ವಿಸ್ತರಿಸಲಾಗಿದೆ.
ಅಲ್ಲದೆ ಪ್ರತಿದಿನದ 5 ಹೊತ್ತಿನ ನಮಾಜನ್ನು ಯಾವುದೇ ಕಾರಣಕ್ಕೆ ಮಸೀದಿಗೆ ತೆರಳಿ ಮಾಡಬಾರದು. ಮುಂದಿನ ಆದೇಶ ಬರುವವರೆಗೆ ತಮ್ಮ ಮನೆಗಳಲ್ಲಿ ನಮಾಜ್ ಮಾಡಲು ತಿಳಿಸಲಾಗಿದೆ. ಯಾವುದೇ ಕಾರಣಕ್ಕೂ ನೆರೆಹೊರೆಯವರೊಂದಿಗೆ ಸೇರಿ ನಮಾಜ್ ಮಾಡಲು ಅವಕಾಶ ಇರುವುದಿಲ್ಲ. ಆದೇಶವನ್ನು ಉಲ್ಲಂಘಿಸಿ ಸಾಮೂಹಿಕವಾಗಿ ನಮಾಜ್ ಮಾಡುವುದು ಕಂಡುಬಂದಲ್ಲಿ ಆಯೋಜಕರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.
ವಿಶೇಷವಾಗಿ ಯುವಕರು ಅನಾವಶ್ಯಕವಾಗಿ ಓಡಾಡುವುದು, ಬೀದಿಗಳಲ್ಲಿ ಗುಂಪು ಸೇರುವುದು ಹಾಗೂ ಬೈಕ್ ಓಡಿಸುವುದನ್ನು ಸಹ ನಿಲ್ಲಿಸಬೇಕು. ಸರ್ಕಾರ ಹಾಗೂ ಸ್ಥಳಿಯ ಆಡಳಿತದಿಂದ ಕಾಲಕಾಲಕ್ಕೆ ನೀಡುವ ನಿರ್ದೇಶನ ಹಾಗೂ ಸೂಚನೆಗಳನ್ನು ಕಡ್ಡಯವಾಗಿ ಪಾಲಿಸಲು ಸೂಚಿಸಲಾಗಿದೆ. ಕೊರೊನಾ ಸೋಂಕು ಅಥವಾ ಆರೋಗ್ಯದಲ್ಲಿ ಏರುಪೇರು ಕಂಡುಬಂದಲ್ಲಿ ತಕ್ಷಣಕ್ಕೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದ್ದಾರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.