
ಎಂ.ಬಿ. ಪಾಟೀಲ, ಯತ್ನಾಳ್
ವಿಜಯಪುರ: ‘ಯತ್ನಾಳ ಗೌಡ್ರೇ, ನೀವು ಯಾರಿಗಾದರೂ ದಮಕಿ ಹಾಕಿರಬಹುದು, ಬಾಯಿಗೆ ಬಂದಂತೆ ಮಾತನಾಡಿರಬಹುದು, ನನ್ನ ಬಳಿ ನಡೆಯುವುದಿಲ್ಲ, ನಾನು ಯಾರಿಗೂ ಅಂಜುವುದಿಲ್ಲ, ನನ್ನ ವಿರುದ್ಧ ನಾಲಿಗೆ ಹರಿಬಿಟ್ಟರೆ ಸರಿ ಇರಲ್ಲ, ಬಾಯಿಗೆ ಬಂದಂತೆ ಮಾತನಾಡಲು ನಿಮ್ಮಂತೆ ನಾನು ನಿರುದ್ಯೋಗಿಯಲ್ಲ’ ಎಂದು ಸಚಿವ ಎಂ.ಬಿ.ಪಾಟೀಲ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಸನಗೌಡರ ಬಾಯಿಗೂ ಮಿದುಳಿಗೂ ಸಂಪರ್ಕವಿಲ್ಲ, ನನ್ನ ವಿರುದ್ಧ ಅನಗತ್ಯವಾಗಿ ನಾಲಿಗೆ ಹರಿಬಿಟ್ಟಿದ್ದಾರೆ, ನಾನು ನಿಮ್ಮ ಜಾತಕ ಜಾಲಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
‘ಉಚ್ಛಾಟಿತ ಹಿಂದೂ ಹುಲಿ ಯತ್ನಾಳ ಈ ಹಿಂದೆ ರಂಜಾನ್ ಸಂದರ್ಭದಲ್ಲಿ ಇಫ್ತಾರ್ ಕೂಟ ಮಾಡಿಸಿದ್ದಾರೆ. ಈದ್ಗಾ ಮೈದಾನದಲ್ಲಿ ನಮಾಜ್ ಮಾಡಿ, ಅಲ್ಲಾಹು ಅಕ್ಬರ್ ಎಂದಿದ್ದಾರೆ, ಟೊಪ್ಪಿ ಹಾಕಿದ್ದಾರೆ. ಮುಸ್ಲಿಮರ ವೋಟಿಗಾಗಿ ಎಲ್ಲ ವೇಷಭೂಷಣ ಹಾಕಿಮುಗಿಸಿದ್ದಾರೆ. ಈಗ ಹಿಂದುಗಳ ವೋಟಿಗಾಗಿ, ಯಾರನ್ನೋ ಮೆಚ್ಚಿಸಲು ಮುಸ್ಲಿಮರಿಗೆ ಬೈಯುತ್ತಾರೆ’ ಎಂದು ಆರೋಪಿಸಿದರು.
‘ನಾನು ಎಂದೂ ಪಂಚಪೀಠಗಳಿಗೆ ಬೈಯ್ದಿಲ್ಲ. ಅವರ ಬಗ್ಗೆ ಭಕ್ತಿ, ಶ್ರದ್ಧೆ ಇದೆ. ಆದರೆ, ಪಂಚಪೀಠಗಳಿಗೆ, ಜಂಗಮರಿಗೆ, ಹಾನಗಲ್ ಕುಮಾರಶ್ರೀಗಳಿಗೆ, ಶಿವಯೋಗ ಮಂದಿರವನ್ನು ಬಿಡದೇ ಯತ್ನಾಳ ಬೈಯಿದ್ದಾರೆ’ ಎಂದು ಹೇಳಿದರು.
‘ಬಿಜೆಪಿ, ಆರ್ಎಸ್ಎಸ್ನವರು ಲಿಂಗಾಯತ–ಲಿಂಗಾಯತರ ನಡುವೆ ಹಚ್ಚಿ, ಮಜ ನೋಡುತ್ತಿದ್ದಾರೆ. ಇಂತಹ ಷಡ್ಯಂತ್ರಗಳನ್ನು ನಾನು ಬಹಳಷ್ಟು ನೋಡಿದ್ದೇನೆ’ ಎಂದರು.
‘ಕೂಡಲಸಂಗಮ ಸ್ವಾಮೀಜಿ ಯತ್ನಾಳರ ಬೆನ್ನು ಹತ್ತಿ ಈಗ ಅವರ ಪರಿಸ್ಥಿತಿ ಗಂಭೀರ ಆಗಿದೆ. ಈಗ ಕನೇರಿ ಶ್ರೀಗಳ ಸರದಿಯಾಗಿದೆ. ಇವರನ್ನು ಯತ್ನಾಳ ದಂಡೆಗೆ ಹಚ್ಚಲಿದ್ದಾರೆ’ ಎಂದರು.
‘ಸಿದ್ದರಾಮಯ್ಯ ಎದೆ ಸೀಳಿದರೆ ಅಲ್ಲಾ ಇದ್ದಾನೆ’ ಎಂಬ ಯತ್ನಾಳ ಟೀಕೆಗೆ ತಿರುಗೇಟು ನೀಡಿದ ಸಚಿವರು, ‘ಸಿದ್ದರಾಮಮ್ಯ ಎದೆ ಒಳಗೆ ಸಂವಿಧಾನ ಇದೆ. ಸಾಮಾಜಿಕ ನ್ಯಾಯ ಇದೆ’ ಎಂದರು.
ನಿರ್ಧಾಕ್ಷಿಣ್ಯ ಕ್ರಮ
‘ನನ್ನ ಹಿಂದೆ ಭೂ ಹಗರಣ ಮಾಡುವವರು ಇದ್ದಾರೆ, ಧರ್ಮ ಒಡೆಯುವವರು ಇದ್ದಾರೆ’ ಎಂದು ಯತ್ನಾಳ ಆರೋಪಿಸಿದ್ದಾರೆ. ನಾನು ಇದುವರೆಗೂ ಯಾವುದೇ ಜಮೀನು ವ್ಯವಹಾರದಲ್ಲಿ ಪಾಲ್ಗೊಂಡಿಲ್ಲ. ‘ಜಿ’ ಕೆಟಗರಿ ನಿವೇಶನವನ್ನೂ ತೆಗೆದುಕೊಂಡಿಲ್ಲ, ನಿಮ್ಮ ಆರೋಪ ನಿಜವಾದರೆ ಅಂತವರ ಹೆಸರು, ಸಾಕ್ಷಿ ಸಹಿತ ಕೊಡಿ, ಅವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳುತ್ತೇನೆ' ಎಂದು ಸವಾಲು ಹಾಕಿದರು.
ಅಪಪ್ರಚಾರ
‘ತಿಡಗುಂದಿ ಬಳಿ ಸಚಿವ ಎಂ.ಬಿ.ಪಾಟೀಲರ ಜಮೀನು ಇರುವುದರಿಂದ ಅಲ್ಲಿಗೆ ಕೈಗಾರಿಕೆ ತರುತ್ತಿದ್ದಾರೆ ಎಂದು ಕೆಲವರು ನನ್ನ ವಿರುದ್ಧ ಅಪಪ್ರಚಾರ ನಡೆಸಿದ್ದಾರೆ. ಜಿಲ್ಲೆಯಲ್ಲಿ ಕೈಗಾರಿಕೆ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಜಮೀನು ಭೂಸ್ವಾಧೀನಕ್ಕೆ ಕ್ರಮಕೈಗೊಳ್ಳಲಾಗಿದೆ. ಅಲ್ಲಿ ನನ್ನದು ಯಾವುದೇ ಆಸ್ತಿ ಇಲ್ಲ’ ಎಂದು ಸ್ಪಷ್ಟಪಡಿಸಿದರು.
‘ಮಖಣಾಪುರದಲ್ಲಿ ಈ ಹಿಂದೆ ತೆಗೆದುಕೊಂಡಿರುವ 135 ಎಕರೆ ಜಮೀನು ಇದೆ. ಯತ್ನಾಳಗೆ ದಾನ ಮಾಡುತ್ತೇನೆ, ಬೇಕಾದರೆ ತೆಗೆದುಕೊಳ್ಳಲಿ, ನನ್ನ ವಿರುದ್ಧ ಹಗುರವಾಗಿ ಮಾತನಾಡಿದರೆ ಸರಿ ಇರುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.
‘ಅನುಭವ ಮಂಟಪವನ್ನೇ ಸೃಷ್ಟಿಸುತ್ತೇನೆ’
‘ನನ್ನ ವಿರುದ್ಧ ದೊಡ್ಡ ಸಮಾವೇಶ ಮಾಡುವುದಾಗಿ ಯತ್ನಾಳ ಹೇಳಿದ್ದಾರೆ. ನೀವು ಬಿಜೆಪಿ, ಆರ್ಎಸ್ಎಸ್ನವರನ್ನು ಸೇರಿಸಿ ಸಮಾವೇಶ ಮಾಡಬಹುದು ಅಷ್ಟೆ. ನನ್ನ ಹಿಂದೆಯೂ ಜನ ಇದ್ದಾರೆ. ನೀವು ಎಷ್ಟು ಮಾಡಿತ್ತೀರೋ ಅದರ ಎರಡುಪಟ್ಟು ನಾನು ಸಮಾವೇಶ ಮಾಡುವ ಶಕ್ತಿ ಬಸವಣ್ಣ ಕೊಟ್ಟಿದ್ದಾನೆ. ಬಸವ ದಳ, ಬಸವ ಸೇನೆ, ಅಂಬೇಡ್ಕರ್ ಅಭಿಮಾನಿಗಳು, ಸಿದ್ದರಾಮಯ್ಯನವರ ಅಹಿಂದ ಸೇರಿದಂತೆ ಅನುಭವ ಮಂಟಪವನ್ನೇ ಸೃಷ್ಟಿ ಮಾಡುತ್ತೇನೆ. ನಾನೋ, ನೀವೋ ನೋಡೇ ಬಿಡೋಣ’ ಎಂದು ಸಚಿವ ಎಂ.ಬಿ.ಪಾಟೀಲ ಸವಾಲು ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.