ಬೆಂಗಳೂರು: ಎಂಬಿಬಿಎಸ್ ಪ್ರಥಮ ಸುತ್ತಿನ ಕಾಲೇಜು ಪ್ರವೇಶಾತಿ ಶುಕ್ರವಾರ ಪೂರ್ಣಗೊಂಡಿದ್ದು, ಆಯುಷ್ ಕೋರ್ಸ್ಗಳ ಸೀಟ್ ಮ್ಯಾಟ್ರಿಕ್ಸ್ ಇನ್ನೂ ಪ್ರಕಟವಾಗದೆ ಇರುವುದರಿಂದ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ.
ಈಗಾಗಲೇ ನಾಲ್ಕು ಸರ್ಕಾರಿ ಆಯುಷ್ ಕಾಲೇಜುಗಳಲ್ಲಿನ ಸೀಟ್ ಮ್ಯಾಟ್ರಿಕ್ಸ್ ಪ್ರಕಟವಾಗಿದೆ. ಆದರೆ ಉಳಿದ ಕಾಲೇಜುಗಳ ಸೀಟ್ ಮ್ಯಾಟ್ರಿಕ್ಸ್ ಇನ್ನೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕೈ ಸೇರಿಲ್ಲ. ಪ್ರತಿ ವರ್ಷದಂತೆ ಈವರ್ಷವೂ ಮತ್ತೆ ವಿಳಂಬ ಆಗಿರುವುದರಿಂದ ವಿದ್ಯಾರ್ಥಿಗಳು ಇತರ ಕೋರ್ಸ್ಗಳತ್ತ ಗಮನ ಹರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಸುರಕ್ಷತೆಯ ಸಲುವಾಗಿ ಎಂಜಿನಿಯರಿಂಗ್ ಕಾಲೇಜು ಸೇರಿದರೆ ಅಂತಹ ಕಾಲೇಜಿನಿಂದ ಶುಲ್ಕ ವಾಪಸ್ ಪಡೆಯುವುದು ಸಹ ಅವರಿಗೆ ಬಹಳ ದೊಡ್ಡ ಸಮಸ್ಯೆಯಾಗುತ್ತದೆ.
ಈಗಾಗಲೇ ನಿಗದಿಯಾಗಿರುವಂತೆ ನೀಟ್ ಆಧಾರದಲ್ಲಿ ಆಯುಷ್ ಕೋರ್ಸ್ಗಳಿಗೆ ಪ್ರವೇಶಾತಿ ಆರಂಭವಾಗಬೇಕಿತ್ತು. ಖಾಲಿ ಉಳಿದ ಅಖಿಲ ಭಾರತ ಸೀಟುಗಳನ್ನು ಜುಲೈ 25ರೊಳಗೆ ಕೆಇಎಗೆ ವಾಪಸ್ ನೀಡುವ ದಿನಾಂಕವೂ ನಿಗದಿಯಾಗಿತ್ತು.
ಇದುವರೆಗೆ ಪ್ರಕಟವಾಗಿರುವ ನಾಲ್ಕು ಸರ್ಕಾರಿ ಆಯುಷ್ ಕಾಲೇಜುಗಳಲ್ಲಿನ ಸೀಟುಗಳ ಸಂಖ್ಯೆ 800. ‘ಪ್ರತಿ ವರ್ಷ ಆಯುಷ್ ಕೋರ್ಸ್ ವಿಚಾರದಲ್ಲಿ ಇಂತಹ ವಿಳಂಬ ಆಗುತ್ತಿದೆ. ವಿದ್ಯಾರ್ಥಿಗಳಿಗೆ ಬಹಳ ತೊಂದರೆ ಉಂಟಾಗುತ್ತಿದೆ’ ಎಂದು ಕೆಇಎ ಅಧಿಕಾರಿಯೊಬ್ಬರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.