ADVERTISEMENT

ಉಭಯ ಸದನಗಳಲ್ಲಿ ಧರಣಿ ನಿರತ ಕಾಂಗ್ರೆಸ್ ಶಾಸಕರಿಗೆ ಊಟ, ಹಾಸಿಗೆ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2022, 20:15 IST
Last Updated 17 ಫೆಬ್ರುವರಿ 2022, 20:15 IST
ಧರಣಿನಿರತ ಕಾಂಗ್ರೆಸ್‌ ಸದಸ್ಯರು ವಿಧಾನ ಪರಿಷತ್‌ ಸಭಾಪತಿ ಪೀಠದ ಎದುರಿನ ಸ್ಥಳದಲ್ಲಿ ಗುರುವಾರ ರಾತ್ರಿ ಮಲಗಿರುವುದು
ಧರಣಿನಿರತ ಕಾಂಗ್ರೆಸ್‌ ಸದಸ್ಯರು ವಿಧಾನ ಪರಿಷತ್‌ ಸಭಾಪತಿ ಪೀಠದ ಎದುರಿನ ಸ್ಥಳದಲ್ಲಿ ಗುರುವಾರ ರಾತ್ರಿ ಮಲಗಿರುವುದು   

ಬೆಂಗಳೂರು: ವಿಧಾನಮಂಡಲದ ಉಭಯ ಸದನಗಳಲ್ಲಿ ಧರಣಿ ನಡೆಸುತ್ತಿರುವ ಕಾಂಗ್ರೆಸ್‌ ಶಾಸಕರಿಗೆ ವಿಧಾನಸಭೆ ಮತ್ತು ವಿಧಾನ ಪರಿಷತ್‌ ಸಚಿವಾಲಯದಿಂದ ಊಟ, ಹಾಸಿಗೆ, ದಿಂಬು ಪೂರೈಕೆಗೆ ವ್ಯವಸ್ಥೆ ಮಾಡಲಾಗಿತ್ತು.

ವಿಧಾನಸಭೆಯಲ್ಲಿ ಶಾಸಕರಿಗೆ ಸಸ್ಯಾಹಾರಿ ಊಟ, ಹಾಸಿಗೆ, ದಿಂಬು ಮತ್ತು ಹೊದಿಕೆ ಪೂರೈಕೆಗೆ ವ್ಯವಸ್ಥೆ ಮಾಡಲಾಗಿತ್ತು. ವಿಧಾನ ಪರಿಷತ್‌ನಲ್ಲಿ ಕೂಡ ಊಟ ಪೂರೈಕೆಗೆ ಸಚಿವಾಲಯದ ಅಧಿಕಾರಿಗಳು ಸಿದ್ಧತೆ ನಡೆಸಿದ್ದರು. ಆದರೆ, ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ತಮ್ಮ ಸದಸ್ಯರಿಗೆ ಸಸ್ಯಾಹಾರಿ ಊಟದ ವ್ಯವಸ್ಥೆ ಮಾಡಿದ್ದರು. ಹಾಸಿಗೆ, ದಿಂಬು ಮತ್ತು ಹೊದಿಕೆಗಳನ್ನು ಸಚಿವಾಲಯದಿಂದ ಪೂರೈಸಲಾಗಿತ್ತು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪರಿಷತ್ ಸಭಾಂಗಣಕ್ಕೆ ಗುರುವಾರ ತಡ ರಾತ್ರಿ ಭೇಟಿನೀಡಿ, ಧರಣಿನಿರತ ಕಾಂಗ್ರೆಸ್ ಸದಸ್ಯರಿಗೆ ಒದಗಿಸಿರುವ ಸೌಲಭ್ಯಗಳ ಕುರಿತು ವಿಚಾರಿಸಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಕೂಡ ಪರಿಷತ್ತಿನ ಕಾಂಗ್ರೆಸ್ ಸದಸ್ಯರನ್ನು ಭೇಟಿ ಮಾಡಿದರು. ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಧರಣಿ ನಡೆಸುತ್ತಿರುವ ಶಾಸಕರ ಆರೋಗ್ಯ ತಪಾಸಣೆಯನ್ನು ವಿಧಾನ ಮಂಡಲದ ವೈದ್ಯರು ನಡೆಸಿದರು.

ADVERTISEMENT

ಉಭಯ ಸದನಗಳಲ್ಲೂ ಪ್ರಮುಖ ನಾಯಕರು ಒಂದೆಡೆ ಕುಳಿತು ಕೆಲಕಾಲ ಚರ್ಚೆ ನಡೆಸಿದರು. ಉಳಿದ ಸದಸ್ಯರು ನಿದ್ದೆಗೆ ಜಾರುವವರೆಗೂ ಸಚಿವ ಕೆ.ಎಸ್‌. ಈಶ್ವರಪ್ಪ ಮತ್ತು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.