ರಾಮನಗರ: ಮೇಕೆದಾಟು ಎರಡನೇ ಹಂತದ ಪಾದಯಾತ್ರೆಗೆ ಇದೇ 27ರಂದು ಬೆಳಿಗ್ಗೆ 9ಕ್ಕೆ ರಾಮನಗರದಲ್ಲಿ ಚಾಲನೆ ದೊರೆಯಲಿದ್ದು, 7 ದಿನಗಳ ಬದಲಿಗೆ 5 ದಿನಕ್ಕೆ ನಡಿಗೆಯನ್ನು ಸೀಮಿತಗೊಳಿಸಲಾಗುವುದು ಎಂದು ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ತಿಳಿಸಿದರು.
ಭಾನುವಾರ ಸಂಜೆ ಕೆಂಗಲ್ನಲ್ಲಿ ನಡೆದ ಪಾದಯಾತ್ರೆ ಪೂರ್ವಭಾವಿ ಸಭೆಯ ವೇಳೆ ಪತ್ರಕರ್ತರಿಗೆ ಅವರು ಮಾಹಿತಿ ನೀಡಿದರು.
‘ಮೊದಲು ಬೆಂಗಳೂರಿನಲ್ಲೇ ಐದು ದಿನ ಪಾದಯಾತ್ರೆಗೆ ನಿರ್ಧರಿಸಿದ್ದೆವು. ಆದರೆ ರಾಜ್ಯ ಬಜೆಟ್ ಇರುವ ಕಾರಣ ಅಲ್ಲಿ ಮೂರು ದಿನ ಮಾತ್ರ ನೀರಿಗಾಗಿ ನಡಿಗೆ ನಡೆಯಲಿದೆ. ಮೊದಲ ದಿನ ರಾಮನಗರದಿಂದ ಬಿಡದಿ ಹಾಗೂ ಎರಡನೇ ದಿನ ಬಿಡದಿಯಿಂದ ಕೆಂಗೇರಿವರೆಗೆ ನಿಗದಿಯಂತೆ ಕಾರ್ಯಕ್ರಮ ನಡೆಯಲಿದೆ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರು ಪಾಲ್ಗೊಳ್ಳುತ್ತಾರೆ’ ಎಂದು ಮಾಹಿತಿ ನೀಡಿದರು.
ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯದ ಬಗ್ಗೆ ಪ್ರತಿಕ್ರಿಯಿಸಿ ‘ಅವರು ಪ್ರಧಾನಮಂತ್ರಿ ಕುಟುಂಬದವರು. ಅವರಿಗಿರುವ ಬುದ್ಧಿ, ತಿಳಿವಳಿಕೆ ರಾಜ್ಯದಲ್ಲಿ ಮತ್ಯಾರಿಗೂ ಇಲ್ಲ. ರಾಜ್ಯ– ರಾಷ್ಟ್ರಕ್ಕಾಗಿ ಅವರು ಏನು ಹೇಳುತ್ತಾರೋ ಅದನ್ನೆಲ್ಲ ನಾವು ಕೇಳಬೇಕು ಅಷ್ಟೇ. ಅದನ್ನು ಪ್ರಶ್ನಿಸಬಾರದು’ ಎಂದು ತಿರುಗೇಟು ನೀಡಿದರು.
‘ಎರಡೂ ಕಡೆ ಬಿಜೆಪಿ ಸರ್ಕಾರ ಇದ್ದು, ಒತ್ತಡ ಹೇರುವ ಸಲುವಾಗಿ ಈ ಪಾದಯಾತ್ರೆ ಮಾಡುತ್ತಿದ್ದೇವೆ. ಜನರು ಒತ್ತಾಯ ಮಾಡಿದರೆ ಯಾವುದೇ ಸರ್ಕಾರ ಕೂಡ ಯೋಜನೆ ಜಾರಿಗೆ ತರಲೇಬೇಕಾಗುತ್ತದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಜನರು ಪಾಲ್ಗೊಳ್ಳಲಿದ್ದು, ಬೆಂಗಳೂರಿನ ಜನರು ಪಕ್ಷಾತೀತವಾಗಿ ಬೆಂಬಲ ನೀಡಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.