ADVERTISEMENT

ನಿಗದಿಗಿಂತ ಹೆಚ್ಚು ಕಾಮಗಾರಿ: ₹ 8,506 ಕೋಟಿ ಬಾಕಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2023, 23:30 IST
Last Updated 17 ಜುಲೈ 2023, 23:30 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಬೆಂಗಳೂರು: ನಿಗದಿಯಾಗಿದ್ದ ಮೊತ್ತಕ್ಕಿಂತ ಮೂರುಪಟ್ಟು ಹೆಚ್ಚುವರಿ ಕಾಮಗಾರಿಗೆ ಹಿಂದಿನ ಸರ್ಕಾರ ಮಂಜೂರಾತಿ ನೀಡಿದ್ದರಿಂದ ದೊಡ್ಡಪ್ರಮಾಣದಲ್ಲಿ ಗುತ್ತಿಗೆದಾರರ ಬಾಕಿ ಉಳಿದುಕೊಂಡಿದೆ. ಮೇ ಅಂತ್ಯದವರೆಗೆ ₹ 8,506 ಕೋಟಿ ಬಾಕಿ ಇದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ವಿಧಾನ ಪರಿಷತ್‌ನಲ್ಲಿ ಸೋಮವಾರ ಜೆಡಿಎಸ್‌ನ ಗೋವಿಂದರಾಜು ಅವರು ಕೋಲಾರ ಜಿಲ್ಲೆಯ ಗುತ್ತಿಗೆದಾರರಿಗೆ ನೀಡಬೇಕಾದ ಬಾಕಿ ಕುರಿತು ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, 2023–24ನೇ ಸಾಲಿನ ಬಜೆಟ್‌ನಲ್ಲಿ ₹ 9 ಸಾವಿರ ಕೋಟಿ ಅನುದಾನ ಒದಗಿಸಲಾಗಿದೆ. ಪ್ರತಿ ತಿಂಗಳ ಬಾಕಿ ಆಧಾರದ ಮೇಲೆ ಹಂತಹಂತವಾಗಿ ವಿಭಾಗವಾರು ಹಣ ಬಿಡುಗಡೆ ಮಾಡಲಾಗುವುದು ಎಂದರು.

ರಾಜ್ಯ ಹೆದ್ದಾರಿ, ಸೇತುವೆಗಳು, ಕಟ್ಟಡಗಳು, ನಿರ್ವಹಣೆ, ದುರಸ್ತಿ ಸೇರಿದಂತೆ ಎಲ್ಲ ಕಾಮಗಾರಿಗಳಲ್ಲೂ ಬಾಕಿ ಉಳಿದುಕೊಂಡಿದೆ. ಆರ್ಥಿಕ ಸಂಕಷ್ಟದಲ್ಲಿರುವ ಗುತ್ತಿಗೆದಾರರ ಹಿತರಕ್ಷಣೆ ಮಾಡಲಾಗುವುದು. ಈಗಾಗಲೇ ಟೆಂಡರ್‌ ಪ್ರಕ್ರಿಯೆ ಮುಗಿದಿರುವ ಕಾಮಗಾರಿಗಳಿಗೆ ತಡೆ ನೀಡುವುದಿಲ್ಲ. ಹಿಂದಿನ ಸರ್ಕಾರ ಮಂಜೂರು ಮಾಡಿದ ಟೆಂಡರ್‌ ಆಗದ ಕಾಮಗಾರಿಗಳನ್ನು ಮರುಪರಿಶೀಲಿಸಲಾಗುವುದು ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.