ಶಿರಸಿ: ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ,ಎಂ.ಆರ್.ಬ್ರದರ್ಸ್ ಸಂಘಟನೆಯ ಸ್ಥಳೀಯ ಘಟಕದ ಅಧ್ಯಕ್ಷ ಫಯಾಜ್ ಚವಟಿ ಜತೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಸೋಮವಾರ ಇಲ್ಲಿ ವೇದಿಕೆ ಹಂಚಿಕೊಂಡರು.
ಎಂ.ಆರ್.ಬ್ರದರ್ಸ್ ಸಂಘಟನೆ ಆಯೋಜಿಸಿದ್ದ 'ಬದಲಾಗುತ್ತಿರುವ ಭಾರತ- ವಿಶ್ವಗುರು ಭಾರತದತ್ತ ಚಿತ್ತ- ದೇಶ ನಡೆಸಲು ಮೋದಿ ಸಮರ್ಥ' ಕಾರ್ಯಕ್ರಮದಲ್ಲಿ ಮಾತನಾಡಿದ ಅನಂತಕುಮಾರ್ ಹೆಗಡೆ, ‘ರಾಜಕೀಯ ಹೊರತುಪಡಿಸಿ ದೇಶ ಕಟ್ಟುವ ಕಾಯಕದಲ್ಲಿ ಹಲವು ಕೈಗಳು ಬಿಜೆಪಿ ಜೊತೆ ಸೇರಿವೆ. ನಮ್ಮಲ್ಲಿ ಅಭಿಪ್ರಾಯ ಭೇದ ಇದ್ದರೂ ದೇಶ ಕಟ್ಟುವ ವಿಚಾರದಲ್ಲಿ ಗೊಂದಲ, ಭಿನ್ನಾಭಿಪ್ರಾಯ ಹಾಗೂ ಇಬ್ಬಗೆಯಿಲ್ಲ’ ಎಂದರು.
ದೇಶವು ಸಂಕ್ರಮಣದ ತಿರುವಿನಲ್ಲಿದೆ. ಈ ತಿರುವಿನಲ್ಲಿ ನಾವಿರುವುದು ಹೆಮ್ಮೆಯಾಗಿದೆ. ಜಗತ್ತು ಕಂಡ ಶ್ರೇಷ್ಠ ನಾಯಕನ ಅಡಿಯಲ್ಲಿ ಜನರು ನಿಂತಿರುವ ಸಂಭ್ರಮ ಇದಾಗಿದೆ. ಹಲವು ಶತಮಾನಗಳ ದೌರ್ಜನ್ಯ ಮೀರಿ, ಇಂದು ಸ್ವಂತ ಶಕ್ತಿಯ ಮೇಲೆ ದೇಶ ನಿಲ್ಲುತ್ತಿದೆ. ಹಲವು ರಾಜಕೀಯೇತರ ಕೈಗಳು ಬಿಜೆಪಿ ಜೊತೆ ಸೇರಿವೆ. ಇದು ಭವಿಷ್ಯದ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಮುನ್ಸೂಚನೆಯಾಗಿದೆ’ ಎಂದು ಹೇಳಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಎಸಳೆ ಇದ್ದರು. ಅಜಿತ್ ನಾಡಿಗ್ ಸ್ವಾಗತಿಸಿದರು. ನಂತರ ಎಂ.ಆರ್.ಬ್ರದರ್ಸ್ ಸಂಘಟನೆ ನೇತೃತ್ವದಲ್ಲಿ ಅನೇಕ ಯುವಕರು ಕೇಸರಿ ಬಾವುಟ ಹಿಡಿದು, ಬೈಕ್ ರ್ಯಾಲಿ ನಡೆಸಿದರು.
ರೌಟಿ ಶೀಟ್: ಫಯಾಜ್ ಚವಟಿ ಅವರ ಮೇಲೆ ವಿವಿಧ ಠಾಣೆಗಳಲ್ಲಿ 34 ಪ್ರಕರಣಗಳಿವೆ. ಮಾರುಕಟ್ಟೆ ಠಾಣೆಯ ರೌಡಿಗಳ ಪಟ್ಟಿಯಲ್ಲಿ ಅವರ ಹೆಸರಿದೆ. ಈ ಮಾಹಿತಿಯನ್ನು ಫಯಾಜ್ ಅವರೇ ಕಳೆದ ವಿಧಾನಸಭೆ ಚುನಾವಣೆಯ ವೇಳೆ ನಾಮಪತ್ರ ಸಲ್ಲಿಸುವಾಗ ನೀಡಿದ್ದ ಅಫಿಡವಿಟ್ನಲ್ಲಿ ಉಲ್ಲೇಖಿಸಿದ್ದರು. ಶಿರಸಿ–ಸಿದ್ದಾಪುರ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಅವರು ನಂತರ ನಾಮಪತ್ರ ವಾಪಸ್ ಪಡೆದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.