
ನವದೆಹಲಿ: ದೇಶದ ಮಾನ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೃತಕ ಬುದ್ಧಿಮತ್ತೆ ಇಂಪ್ಯಾಕ್ಟ್ ಶೃಂಗ ಸಭೆಯಲ್ಲಿ ಬಿಜೆಪಿ ಸರ್ಕಾರ ಅನೇಕ ಎಡವಟ್ಟುಗಳನ್ನು ಮಾಡಿತ್ತು. ಇದರ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ’ ಎಂದರು.
‘ಎಪ್ಸ್ಟೈನ್ ಫೈಲ್ಸ್ನಲ್ಲಿ ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ ಅವರ ಹೆಸರು 62 ಸಲ ಬಂದಿದೆ. ಕೇಂದ್ರ ಸಚಿವರು ಎಪ್ಸ್ಟೈನ್ ಅವರನ್ನು ನಾಲ್ಕು ಸಲ ಭೇಟಿ ಮಾಡಿದ್ದಾರೆ. ಅತ್ಯಾಚಾರಿ ಜತೆಗೆ ನಂಟು ಹೊಂದಿದ್ದ ಪುರಿ ಅವರನ್ನು ಮೋದಿ ಅವರು ಸಂಪುಟದಲ್ಲಿ ಇಟ್ಟುಕೊಂಡಿದ್ದಾರೆ. ಇದರಿಂದಾಗಿ, ದೇಶದ ಮಾನ ಹರಾಜು ಆಗಿದೆ’ ಎಂದರು.
‘ಭ್ರಷ್ಟಾಚಾರಕ್ಕೆ ಮತ್ತೊಂದೇ ಹೆಸರೇ ಬಿಜೆಪಿ. ಪಿಎಂ ಕೇರ್ಸ್ ಫಂಡ್, ಚುನಾವಣಾ ಬಾಂಡ್, ನೋಟ್ ರದ್ದತಿ ಸೇರಿದಂತೆ ಎಲ್ಲ ಕಡೆ ಬಿಜೆಪಿ ಭ್ರಷ್ಟಾಚಾರ ನಡೆಸಿದೆ. ಈಗ ಶಾಸಕ ಚಂದ್ರು ಲಮಾಣಿ ಎಂಬ ಸಣ್ಣ ನೊಣ ಸಿಲುಕಿಕೊಂಡಿದೆ’ ಎಂದು ಅವರು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.