ADVERTISEMENT

ಮೀಸಲಾತಿ ನೀಡುವಂತೆ ಮೊಗವೀರರ ಆಗ್ರಹ

ಮೀನುಗಾರರ ಸಾಲ ಮನ್ನಾ ಮಾಡಲು ಸರ್ಕಾರಕ್ಕೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 20:37 IST
Last Updated 24 ಫೆಬ್ರುವರಿ 2021, 20:37 IST

ಬೆಂಗಳೂರು: ರಾಜ್ಯದಲ್ಲಿರುವಮೊಗವೀರ ಸಮುದಾಯಕ್ಕೂ ಸರ್ಕಾರ ವಿಶೇಷ ಮೀಸಲಾತಿ ನೀಡಬೇಕು ಹಾಗೂ ಸಂಕಷ್ಟಕ್ಕೆ ಸಿಲುಕಿರುವ ಮೀನುಗಾರರ ಸಾಲ ಮನ್ನಾ ಮಾಡುವಂತೆದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಹಾಗೂಆಳಸಮುದ್ರ ಮೀನುಗಾರರ ಸಂಘಗಳು ಒತ್ತಾಯಿಸಿವೆ.

ನಗರದಲ್ಲಿ ಸಂಘಗಳ ಪದಾಧಿಕಾರಿಗಳು ಬುಧವಾರ ಜಂಟಿ ಸುದ್ದಿಗೋಷ್ಠಿ ನಡೆಸಿದರು.

ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್,‘ ಮೊಗವೀರರ ಕುಲಕಸುಬು ಮೀನುಗಾರಿಕೆ. ಇತ್ತೀಚಿನ ವರ್ಷಗಳಲ್ಲಿ ಮತ್ಸ್ಯೋದ್ಯಮ ನೆಲಕಚ್ಚಿದೆ.ಚಂಡಮಾರುತಗಳ ಅಬ್ಬರ, ತೈಲ ದರ ಏರಿಕೆಯಿಂದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಮಾಡಲಾಗದೆ, ಶೇ 90ರಷ್ಟು ಮೀನುಗಾರರು ಸಂಕಷ್ಟದಲ್ಲಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಹವಾಮಾನ ವೈಪರೀತ್ಯ, ಪರಿಸರ ಮಾಲಿನ್ಯದಿಂದ ಒಂದು ಬಾರಿ ಮೀನುಗಾರಿಕೆಗೆ 12 ದಿನ ಸಮುದ್ರದಲ್ಲೇ ಕಳೆಯುವಂತಾಗಿದೆ. ನೂರಾರು ಕಿ.ಮೀ ದೂರದವರೆಗೆ ಸಮುದ್ರ ಯಾನ ಮಾಡುವ ಅನಿವಾರ್ಯ ಸೃಷ್ಟಿಯಾಗಿದೆ. ಇದಕ್ಕಾಗಿ ಸಂಕಷ್ಟದಲ್ಲಿರುವ ಮೀನುಗಾರರ ಸಾಲ ಮತ್ತು ಬಡ್ಡಿ ಮನ್ನಾ ಮಾಡಬೇಕು’ ಎಂದು ಆಗ್ರಹಿಸಿದರು.

‘ರಾಜ್ಯ ಸರ್ಕಾರ ನೀಡುತ್ತಿರುವ ಕರ ರಿಯಾಯಿತಿ ಡೀಸೆಲ್‌ ಪೂರೈಕೆ ಪದ್ಧತಿ ನಿಲ್ಲಿಸಿ, ವಾರ್ಷಿಕ ಕೋಟಾದಲ್ಲಿ ಡೀಸೆಲ್ ನೀಡಬೇಕು. ನಾಡದೋಣಿ ಮೀನುಗಾರರಿಗೆ ಕರ ರಹಿತ ಅಗತ್ಯ ಸೀಮೆಎಣ್ಣೆ ನೀಡಬೇಕು. ಮೀನುಗಾರಿಗೆ ಶೇ 4ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಬೇಕು.

ಕಾರ್ಯದರ್ಶಿ ಸುಧಾಕರ್ ಕುಂದರ್, ‘ಶೇ 75ರಷ್ಟು ಮೀನುಗಾರಿಕೆ ಬೋಟ್‌ಗಳು ಡೀಸೆಲ್ ಅನ್ನು ಅವಲಂಬಿಸಿವೆ.ತೈಲ ದರ ಏರಿಕೆಯಿಂದಮೀನುಗಾರಿಕೆಗೆ ದೊಡ್ಡ ಪೆಟ್ಟು ಬಿದ್ದಿದೆ. ಕೂಡಲೇ ಸರ್ಕಾರ ಮೀನುಗಾರರ ನೆರವಿಗೆ ಬರಬೇಕು’ ಎಂದು ಮನವಿ ಮಾಡಿದರು.

‘ಮತ್ಸ್ಯ ಕ್ಷಾಮದಿಂದ ಉದ್ಯೋಗ ಕಳೆದುಕೊಂಡವರಿಗೆ ಸರ್ಕಾರ ಪರಿಹಾರ ನೀಡಬೇಕು. ಮೀನುಗಾರರು ಬಳಸುವ ಡೀಸೆಲ್ ಮೇಲಿನ ರಸ್ತೆ ತೆರಿಗೆ ಕಡಿತಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಎಲ್ಲತಾಲ್ಲೂಕುಗಳಲ್ಲಿ ಸ್ವಚ್ಛ ಮೀನು ಮಾರುಕಟ್ಟೆ ನಿರ್ಮಿಸಬೇಕು. ಈ ಎಲ್ಲ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ, ಮೀನುಗಾರಿಕೆ ಸ್ಥಗಿತಗೊಳಿಸಿ, ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗುವುದು’ ಎಂದು ಆಳಸಮುದ್ರ ಮೀನುಗಾರರ ಸಂಘದ ಅಧ್ಯಕ್ಷ ಅಶೋಕ್ ಹಾಗೂ ಮೊಗವೀರ ಸಂಘದ ಸದಸ್ಯರು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.