ADVERTISEMENT

ಕೃಷಿ ಬೆಂಬಲ ಬೆಲೆ ಹೆಚ್ಚಿಸಿ: ಪ್ರಧಾನಿಗೆ ಸಿ.ಎಂ ಪತ್ರ ಕೊಟ್ಟ ದಿನೇಶ್ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 7:44 IST
Last Updated 28 ನವೆಂಬರ್ 2025, 7:44 IST
   

ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃಷಿ ಬೆಂಬಲ ಬೆಲೆ ಹೆಚ್ಚಿಸುವಂತೆ ಮನವಿ ಪತ್ರ ಬರೆದಿದ್ದು, ಅವರ ಪರವಾಗಿ ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರಧಾನಿಗೆ ಮನವಿ ಪತ್ರ ನೀಡಿದ್ದಾರೆ.

ಉಡುಪಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಅವರು ಶುಕ್ರವಾರ ಆಗಮಿಸಿದ ವೇಳೆ ಮನವಿ ಪತ್ರವನ್ನು ನೀಡಲಾಗಿದೆ.

ಪ್ರಧಾನಿ ಮೋದಿ ಅವರಿಗೆ ಮುಖ್ಯಮಂತ್ರಿಗಳ ಪತ್ರವನ್ನು ತಲುಪಿಸಲಾಗಿದೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆಯಿಲ್ಲದೆ ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವುದನ್ನು ತಿಳಿಸಿ, ಬೆಂಬಲ ಬೆಲೆಯಂತೆ ಬೆಳೆ ಖರೀದಿ ವ್ಯವಸ್ಥೆ ನಿರ್ಮಿಸುವಲ್ಲಿ ಕೇಂದ್ರ ಸರ್ಕಾರ ಇಚ್ಛಾಶಕ್ತಿ ತೋರಿಸಬೇಕೆಂದು ಅದರಲ್ಲಿ ಮನವಿ ಮಾಡಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ADVERTISEMENT

ಪತ್ರದಲ್ಲಿ ರೈತರ ಸಂಕಷ್ಟವನ್ನು ಕೂಲಂಕುಷವಾಗಿ ವಿವರಿಸಲಾಗಿದೆ. ಕರ್ನಾಟಕದಲ್ಲಿ 17.94 ಲಕ್ಷ ಹೆಕ್ಟೇರ್‌ಗಳಿಗಿಂತ ಹೆಚ್ಚು ಪ್ರದೇಶದಲ್ಲಿ ಮೆಕ್ಕೆಜೋಳ ಮತ್ತು 4.16 ಲಕ್ಷ ಹೆಕ್ಟೇರ್‌ಗಳಿಗಿಂತ ಹೆಚ್ಚು ಪ್ರದೇಶದಲ್ಲಿ ಹೆಸರು ಕಾಳನ್ನು ಬೆಳೆದಿದ್ದು, ತೀವ್ರ ಬೆಲೆ ಕುಸಿತದಿಂದ ರೈತರು‌ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಬೆಂಬಲ ಬೆಲೆಯಲ್ಲಿ ರೈತರ‌ ಬೆಳೆಗಳನ್ನು ಖರೀದಿಸುವಂತಹ ವ್ಯವಸ್ಥೆ ನಿರ್ಮಾಣ ಮಾಡುವ ಕುರಿತು ಈ ಪತ್ರ ಬರೆಯಲಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಪ್ರಸ್ತುತ ಮಾರಾಟವಾಗಲು ಅಂದಾಜು 32 ಲಕ್ಷ ಮೆಟ್ರಿಕ್ ಟನ್‌‌ಗಳಷ್ಟು ಮೆಕ್ಕೆಜೋಳ ಲಭ್ಯವಿದೆ. ಆದ್ದರಿಂದ, ಕೇಂದ್ರ ಸರ್ಕಾರವು ತಕ್ಷಣವೇ ಮಧ್ಯಪ್ರವೇಶಿಸಿ ದರ ನಿಗದಿ ಮಾಡುವಂತೆ ವಿನಂತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಪತ್ರದಲ್ಲಿ ಮನವಿ ಮಾಡಿರುವ ಪ್ರಮುಖ ಅಂಶಗಳು:

* ಎನ್‌ಎಎಫ್‌ಇಡಿ, ಎಫ್‌ಸಿಐ ಮತ್ತು ಎನ್‌ಸಿಸಿಎಫ್‌ಗಳಿಗೆ ಎಂಎಸ್‌ಫಿಯಲ್ಲಿ ವಿಳಂಬವಿಲ್ಲದೆ ಸಂಗ್ರಹಣೆಯನ್ನು ಪ್ರಾರಂಭಿಸಲು ನಿರ್ದೇಶಿಸುವುದು.

ಕರ್ನಾಟಕವು ಮೆಕ್ಕೆಜೋಳವನ್ನು ತನ್ನ ಸಾರ್ವಜನಿಕ ವಿತರಣಾ ವ್ಯವಸ್ಥೆ ವಿತರಣೆಯಲ್ಲಿ ಸೇರಿಸದ ಕಾರಣ, ರೈತರಿಗೆ ಬೆಲೆ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗಿಲ್ಲ. ಹಾಗಾಗಿ, ಎನ್‌ಎಎಫ್‌ಇಡಿ, ಎಫ್‌ಸಿಐ ಮತ್ತು ಇತರ ಸಂಗ್ರಹಣಾ ಏಜೆನ್ಸಿಗಳಿಗೆ ಪ್ರೈಸ್ ಸಪೋರ್ಟ್ ಸ್ಕೀಮ್ ಅಥವಾ ಸೂಕ್ತ ಮಾರುಕಟ್ಟೆ ಮಧ್ಯಸ್ಥಿಕೆ ಕಾರ್ಯವಿಧಾನದ ಅಡಿಯಲ್ಲಿ ತಕ್ಷಣವೇ ಎಂಎಸ್‌ಫಿಯಲ್ಲಿ ಮೆಕ್ಕೆಜೋಳ ಮತ್ತು ಹೆಸರು ಕಾಳಿನ ಸಂಗ್ರಹಣೆಯನ್ನು ಪ್ರಾರಂಭಿಸಲು ನಿರ್ದೇಶನ ನೀಡಬೇಕು.

* ಎಥನಾಲ್ ಪೂರೈಕೆ ಸರಪಳಿಯಲ್ಲಿ ಕರ್ನಾಟಕದ ರೈತರ ಭಾಗವಹಿಸುವಿಕೆಯನ್ನು ಖಚಿತಪಡಿಸುವುದು

ಮೆಕ್ಕೆಜೋಳದಿಂದ ಉತ್ಪಾದಿಸುವ ಎಥನಾಲ್‌ಗೆ ಮೂಲ ದರ ಲೀಟರ್‌ಗೆ ₹66.07 ಆಗಿದೆ, ಮತ್ತು ಮೆಕ್ಕೆಜೋಳದಿಂದ ಪಡೆಯುವ ಎಥನಾಲ್‌ಗೆ ಲೀಟರ್‌ಗೆ ಹೆಚ್ಚುವರಿ ₹5.79 (ಜಿಎಸ್‌ಟಿ ಹೊರತುಪಡಿಸಿ) ಪ್ರೋತ್ಸಾಹಧನವನ್ನು ಪಾವತಿಸಬೇಕು. ಕರ್ನಾಟಕದ ಅನೇಕ ಎಥನಾಲ್ ಘಟಕಗಳು ಮಧ್ಯವರ್ತಿಗಳು ಮತ್ತು ವ್ಯಾಪಾರಿಗಳಿಂದ ಮೆಕ್ಕೆಜೋಳವನ್ನು ಖರೀದಿಸುತ್ತಿರುವುದು ಕಂಡುಬಂದಿದೆ. ಇದು ಕೃಷಿಕರಿಗೆ ಪ್ರಯೋಜನ ನೀಡಲು ಉದ್ದೇಶಿಸಿರುವ ಕೇಂದ್ರ ಸರ್ಕಾರದ ಪ್ರೋತ್ಸಾಹಕ ರಚನೆಯ ಉದ್ದೇಶವನ್ನು ಸೋಲಿಸುತ್ತದೆ. ಕೇಂದ್ರ ಸರ್ಕಾರವು ಎಥನಾಲ್ ಘಟಕಗಳಿಗೆ ರೈತರಿಂದ ಅಥವಾ ರೈತ-ಉತ್ಪಾದಕ ಸಂಸ್ಥೆಗಳಿಂದ ನೇರವಾಗಿ ಮೆಕ್ಕೆಜೋಳವನ್ನು ಸಂಗ್ರಹಿಸಲು ನಿರ್ದೇಶಿಸಬೇಕು. ನೇರ ಸಂಗ್ರಹಣೆಯನ್ನು ಖಚಿತಪಡಿಸದಿದ್ದರೆ, ಎಥನಾಲ್ ಉತ್ಪಾದಕರಿಗೆ ನೀಡುವ ಪ್ರೋತ್ಸಾಹಕವನ್ನು ಮರುಪರಿಶೀಲಿಸಬೇಕು.

* ಕರ್ನಾಟಕದ ಎಥನಾಲ್ ಹಂಚಿಕೆಯನ್ನು ಹೆಚ್ಚಿಸುವುದು

ಕರ್ನಾಟಕವು 272 ಕೋಟಿ ಲೀಟರ್‌ಗಳ ಹೆಚ್ಚಿನ ಡಿಸ್ಟಿಲರಿ ಸಾಮರ್ಥ್ಯದಿಂದ ಬೆಂಬಲಿತವಾದ ದೊಡ್ಡ ಮೆಕ್ಕೆಜೋಳದ ಉತ್ಪಾದನೆಯನ್ನು ಹೊಂದಿದ್ದು, ಎಥನಾಲ್ ಉತ್ಪಾದನೆಗೆ ಸೂಕ್ತವಾದ ದೊಡ್ಡ ಪ್ರಮಾಣದ ಮೆಕ್ಕೆಜೋಳದ ಹೆಚ್ಚುವರಿ ಸಂಗ್ರಹವನ್ನು ಹೊಂದಿದೆ. 2025-26 ರ ಎಥನಾಲ್ ಟೆಂಡರ್ ಹಂಚಿಕೆಯ ಪ್ರಕಾರ, ಒಎಂಸಿಗಳು 1050 ಕೋಟಿ ಲೀಟರ್‌ಗಳ ಎಥನಾಲ್‌ಗಾಗಿ ಟೆಂಡರ್ ಕರೆದಿದ್ದು, ಅದರಲ್ಲಿ 758.6 ಕೋಟಿ ಲೀಟರ್‌ಗಳನ್ನು (72.45%) ಧಾನ್ಯ ಆಧಾರಿತ ಎಥನಾಲ್‌ಗೆ ಹಂಚಿಕೆ ಮಾಡಲಾಗಿದೆ, ಇದರಲ್ಲಿ 478 ಕೋಟಿ ಲೀಟರ್‌ಗಳನ್ನು ಕೇವಲ ಮೆಕ್ಕೆಜೋಳದಿಂದ ಪಡೆಯಲಾಗುತ್ತದೆ. ಕರ್ನಾಟಕವು, 49 ಘಟಕಗಳಲ್ಲಿ 272 ಕೋಟಿ ಲೀಟರ್‌ಗಳ ಸ್ಥಾಪಿತ ಎಥನಾಲ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದ್ದರೂ, ಅದಕ್ಕೆ ಕೇವಲ ಒಂದು ಸಣ್ಣ ಭಾಗವನ್ನು ಮಾತ್ರ ಹಂಚಿಕೆ ಮಾಡಲಾಗಿದೆ, ಇದು ಅದರ ಸಾಮರ್ಥ್ಯ, ಉತ್ಪಾದನಾ ಬಲ ಮತ್ತು ರಾಜ್ಯದಲ್ಲಿ ಲಭ್ಯವಿರುವ ಗಣನೀಯ ಮೆಕ್ಕೆಜೋಳದ ಹೆಚ್ಚುವರಿ ಸಂಗ್ರಹಕ್ಕೆ ಹೋಲಿಸಿದರೆ ಅಸಮಾನವಾಗಿ ಕಡಿಮೆಯಾಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರಗಳು ಧಾನ್ಯ ಆಧಾರಿತ ಎಥನಾಲ್‌ನ ಅಗ್ರ ಉತ್ಪಾದಕರಲ್ಲಿ ಸೇರಿದ್ದರೂ, ಈ ವರ್ಷ ಅಳವಡಿಸಿಕೊಂಡಿರುವ ವಲಯವಾರು ಹಂಚಿಕೆ ವಿಧಾನವು ಕರ್ನಾಟಕದಂತಹ ಹೆಚ್ಚುವರಿ ಸಂಗ್ರಹ ಇರುವ ರಾಜ್ಯಗಳಿಗೆ ಅನನುಕೂಲ ಮಾಡಿದೆ ಎಂಬುದು ನಿರ್ದಿಷ್ಟವಾಗಿ ಕಳವಳಕಾರಿಯಾಗಿದೆ. ನಮ್ಮ ಗಣನೀಯ ಹೆಚ್ಚುವರಿ ಸಂಗ್ರಹ ಮತ್ತು ಸಾಮರ್ಥ್ಯವನ್ನು ಗಮನಿಸಿದರೆ, ಕರ್ನಾಟಕವು ಧಾನ್ಯ ಆಧಾರಿತ ಎಥನಾಲ್ ಹಂಚಿಕೆಯಲ್ಲಿ ಹೆಚ್ಚಿನ ಪಾಲಿಗೆ ಅರ್ಹವಾಗಿದೆ. ಇದು ಎಂಎಸ್‌ಪಿ ಮಟ್ಟದ ಬೆಲೆಗಳಲ್ಲಿ ಮೆಕ್ಕೆಜೋಳಕ್ಕೆ ವಿಶ್ವಾಸಾರ್ಹ ಬೇಡಿಕೆಯನ್ನು ಸೃಷ್ಟಿಸುತ್ತದೆ ಮತ್ತು ಮುಕ್ತ ಮಾರುಕಟ್ಟೆಗಳಲ್ಲಿನ ಏರಿಳಿತಗಳಿಂದ ರೈತರನ್ನು ರಕ್ಷಿಸುತ್ತದೆ.

* ಮೆಕ್ಕೆಜೋಳದ ಆಮದಿನ ಮೇಲೆ ನಿರ್ಬಂಧ ಹೇರಿರುವುದು

ಬೆಲೆ ಕುಸಿತಕ್ಕೆ ಪ್ರಮುಖ ಕಾರಣವಾಗಿದ್ದು, ಕಳೆದ ವರ್ಷ ಮ್ಯಾನ್ಮಾರ್, ಉಕ್ರೇನ್ ಮತ್ತು ಇತರ ರಾಷ್ಟ್ರಗಳಿಂದ ದೊಡ್ಡ ಪ್ರಮಾಣದ ಮೆಕ್ಕೆಜೋಳದ ಆಮದು ಮಾಡಿಕೊಂಡಿದ್ದು. ಅಂತಹ ಆಮದುಗಳು ದೇಶೀಯ ಬೆಲೆಗಳನ್ನು ಕುಗ್ಗಿಸಿವೆ ಮತ್ತು ರೈತರ ನ್ಯಾಯಯುತ ಆದಾಯಕ್ಕೆ ಹಾನಿ ಮಾಡಿವೆ. ವಿಶ್ವದ ಅತ್ಯುತ್ತಮ ಮೆಕ್ಕೆಜೋಳವನ್ನು ಉತ್ಪಾದಿಸುವ ಭಾರತೀಯ ರೈತರನ್ನು ಬಲವಂತದ ಸಂಕಷ್ಟ ಮಾರಾಟಕ್ಕೆ ತಳ್ಳದಂತೆ, ಮೆಕ್ಕೆಜೋಳದ ಆಮದುಗಳನ್ನು ತಕ್ಷಣವೇ ತಡೆಹಿಡಿಯಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ.

* ಹೆಸರು ಕಾಳು ಸಂಗ್ರಹಣೆಗಾಗಿ ಗುಣಮಟ್ಟದ ಮಾನದಂಡಗಳನ್ನು ಸಡಿಲಿಕೆ ಮಾಡಬೇಕು

ಅಕಾಲಿಕ ಮಳೆಯ ಕಾರಣದಿಂದಾಗಿ, ಕರ್ನಾಟಕದ ಹೆಸರು ಕಾಳು ಬೆಳೆಯ ಒಂದು ಭಾಗವು ಶೇ. 6-10 ರಷ್ಟು ಸಣ್ಣ ಬಣ್ಣಗುಂದಿಕೆಯನ್ನು ಹೊಂದಿದೆ. ಕೇಂದ್ರ ಸರ್ಕಾರದ ಎಫ್‌ಎಕ್ಯೂಗಳು ಎಂಸಿಫಿ ಅಡಿಯಲ್ಲಿ ಶೇ. 4 ರವರೆಗೆ ಬಣ್ಣಗುಂದಿದ ಸಂಗ್ರಹಣೆಗೆ ಅನುಮತಿ ನೀಡಿದ್ದರೂ, ನಮ್ಮ ಉತ್ಪನ್ನವು ಸ್ವಲ್ಪ ಬಣ್ಣಗುಂದಿದ್ದರೂ ಕೂಡ ಸಂಪೂರ್ಣವಾಗಿ ಖಾದ್ಯ ಮತ್ತು ಬಳಕೆಗೆ ಸೂಕ್ತವಾಗಿದೆ. ಆದ್ದರಿಂದ, ಹವಾಮಾನ ಪರಿಸ್ಥಿತಿಯಿಂದ ರೈತರಿಗೆ ಸಮಸ್ಯೆಯಾಗುವುದನ್ನು ತಪ್ಪಿಸಲು ಈಗ ಇರುವ ಮಾನದಂಡಗಳನ್ನು ಸಡಿಲಿಸಿ ಶೇ. 10 ರಷ್ಟು ಬಣ್ಣಗುಂದಿದ ಹೆಸರು ಕಾಳನ್ನು ಎಂಸಿಫಿಯಲ್ಲಿ ಸಂಗ್ರಹಿಸಲು ಅವಕಾಶ ನೀಡುವಂತೆ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಿಗೆ ನಿರ್ದೇಶನ ನೀಡಬೇಕೆಂದು ನರೇಂದ್ರ ಮೋದಿಯವರಿಗೆ ಒತ್ತಾಯಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.