ಬೆಂಗಳೂರು: ಪ್ರಸಕ್ತ ಹಂಗಾಮಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ(ಎಂಎಸ್ಪಿ) ರಾಗಿ, ಜೋಳ, ಭತ್ತ, ಸಿರಿಧಾನ್ಯ ಸೇರಿ 15 ಲಕ್ಷ ಟನ್ ಆಹಾರ ಧಾನ್ಯಗಳನ್ನು ಖರೀದಿಸಲಾಗುತ್ತಿದ್ದು, ಅದಕ್ಕಾಗಿ ₹8,000 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಪಡಿತರ ವಿತರಣೆಗಾಗಿ 6 ಲಕ್ಷ ಟನ್ ರಾಗಿ ಖರೀದಿಸಲಾಗುತ್ತಿದೆ. ಒಂದು ಎಕರೆಗೆ 10 ಕ್ವಿಂಟಲ್ನಂತೆ ಒಬ್ಬ ರೈತರಿಂದ ಗರಿಷ್ಠ 50 ಕ್ವಿಂಟಲ್ ಖರೀದಿಸಲಾಗುವುದು. ಕ್ವಿಂಟಲ್ಗೆ ₹4,886 ನಿಗದಿ ಮಾಡಲಾಗಿದೆ. ರಾಜ್ಯದಲ್ಲಿ ರಾಗಿ ಬೆಳೆ ಉತ್ಪಾದನೆ 13 ಲಕ್ಷ ಟನ್ ಇದ್ದು, ಶೇ 50ರಷ್ಟನ್ನು ಬೆಂಬಲ ಬೆಲೆ ಅಡಿ ಖರೀದಿಸಲಾಗುವುದು. ತೆಲಂಗಾಣ ಸೇರಿದಂತೆ ಹೊರ ರಾಜ್ಯಗಳಿಗೂ ನೀಡಲಾಗುವುದು. ಇದೇ ಮೊದಲ ಬಾರಿ ಕಟಾವಿಗೂ ಮೊದಲೇ ನೋಂದಣಿ ಆರಂಭವಾಗಿದ್ದು, ರೈತರಿಗೆ ಆರಂಭದಲ್ಲೇ ಮಾರುಕಟ್ಟೆ ಖಾತರಿ ಸಿಗಲಿದೆ. ಮಧ್ಯವರ್ತಿಗಳ ಹಾವಳಿಗೂ ಕಡಿವಾಣ ಬೀಳಲಿದೆ’ ಎಂದು ಮಾಹಿತಿ ನೀಡಿದರು.
ರಾಗಿಗೆ ನಿಗದಿ ಮಾಡಿದ ದರದಲ್ಲೇ ನವಣೆ, ಹಾರಕ ಸೇರಿದಂತೆ ಸಿರಿಧಾನ್ಯಗಳನ್ನು ಖರೀದಿಸಲಾಗುವುದು. ಪ್ರತಿ ಕ್ವಿಂಟಲ್ಗೆ ಹೆಚ್ಚುವರಿ ₹114 ಪ್ರೋತ್ಸಾಹ ಧನವನ್ನೂ ನೀಡಲಾಗುವುದು ಎಂದು ಹೇಳಿದರು.
ಮಧ್ಯವರ್ತಿಗಳ ಮಧ್ಯಪ್ರವೇಶ ತಪ್ಪಿಸಿ, ರೈತರಿಗೆ ಲಾಭ ಸಿಗುವಂತೆ ಮಾಡಲು ಬೆಳೆಗಳ ಡಿಜಿಟಲ್ ಸಮೀಕ್ಷೆ ನಡೆಸಲಾಗುವುದು. ರೈತರ ಎಷ್ಟು ಜಮೀನಿನಲ್ಲಿ ಯಾವ ಯಾವ ಬೆಳೆ ಬೆಳೆದಿದ್ದಾರೆ ಎಂಬ ಮಾಹಿತಿಯನ್ನೂ ಬಳಸಿಕೊಳ್ಳಲಾಗುವುದು. ಖರೀದಿ ಹಣ ತಕ್ಷಣವೇ ರೈತರಿಗೆ ಜಮೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಜೂನ್ವರೆಗೆ ಖರೀದಿಸಿದ ಬೆಲೆಗಳ ಬಾಕಿ ಮೊತ್ತ ₹765 ಕೋಟಿ ಪಾವತಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.