ADVERTISEMENT

ಮೈಸೂರಿನಲ್ಲಿ ವರ್ಗಾವಣೆ ದಂಧೆ; ಜೆಡಿಎಸ್‌ ಶಾಸಕ ಸಾ.ರಾ. ಮಹೇಶ್‌ ಆರೋಪ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 7:30 IST
Last Updated 5 ಜೂನ್ 2020, 7:30 IST
ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌
ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌   

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರ ಗಮನಕ್ಕೂ ಬಾರದೆ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ಆರೋಪಿಸಿದ್ದಾರೆ.

ಅಬಕಾರಿ ಡಿಸಿ ಮೈಸೂರಿಗೆ ಬಂದು 9 ತಿಂಗಳುಗಳಾಗುವಷ್ಟರಲ್ಲೇ ವರ್ಗಾವಣೆ ಮಾಡಲಾಗಿದೆ. ಈ ವರ್ಗಾವಣೆಯಲ್ಲಿ ಸುಮಾರು ₹2 ಕೋಟಿ ವ್ಯವಹಾರ ನಡೆದಿರುವ ಮಾಹಿತಿ ಇದೆ. ಲೋಕೋಪಯೋಗಿ ಇಲಾಖೆ ಹುಣಸೂರು ಉಪವಿಭಾಗದ ಎಇ ಹುದ್ದೆ ಖಾಲಿಯಿತ್ತು. ಅದಕ್ಕೆ ಮೊನ್ನೆ ನೇಮಕವಾಗಿದೆ. ಅಲ್ಲಿ ₹50 ಲಕ್ಷ ವ್ಯವಹಾರ ನಡೆದಿದೆ. ಈ ಹಣ ಯಾರಿಗೆ ಹೋಗಿದೆ ಎಂಬುದನ್ನು ಬಹಿರಂಗಪಡಿಸಿ ಎಂದು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಬಕಾರಿ ಡಿಸಿಗೆ ‘ಕೊರೊನಾ ವಾರಿಯರ್ಸ್‌’ ಎಂದು ಹೇಳಿ ಸನ್ಮಾನ ಮಾಡಲಾಗಿತ್ತು. ಇದೀಗ ವರ್ಗಾವಣೆ ಮಾಡಲಾಗಿದೆ. ಕೊರೊನಾ ವಾರಿಯರ್ಸ್‌ಗೆ ನೀಡುವ ಗೌರವ ಇದೇನಾ, ಈ ವರ್ಗಾವಣೆಗೆ ಪತ್ರ ವ್ಯವಹಾರ ನಡೆಸಿದ್ದು ಯಾರು ಎಂದು ಪ್ರಶ್ನಿಸಿದರು.

ADVERTISEMENT

‘ಮೈಸೂರು ಜಿಲ್ಲೆಗೆ ಇಬ್ಬರು ಉಸ್ತುವಾರಿ ಸಚಿವರಿದ್ದಾರೆ. ಒಬ್ಬರು ಆ್ಯಕ್ಟಿಂಗ್‌, ಇನ್ನೊಬ್ಬರು ಅಧಿಕೃತ’ ಎಂದು ಹೆಸರು ಹೇಳದೆಯೇ ಬಿಜೆಪಿ ಮುಖಂಡ ಎಚ್‌.ವಿಶ್ವನಾಥ್‌ ಅವರ ಕಾಲೆಳೆದರು.

‘ವರ್ಗಾವಣೆಯಲ್ಲಿ ಉಸ್ತುವಾರಿ ಸಚಿವರ ಪಾತ್ರ ಇಲ್ಲ. ಇದರ ಹಿಂದೆ ಇರುವ ಪುಣ್ಯಾತ್ಮರ ಹೆಸರನ್ನು ನಾನು ಹೇಳಲ್ಲ. ಹುಣಸೂರಿನಲ್ಲಿ 90 ಸಾವಿರ ಮತಗಳನ್ನು ನೀಡಿ ಗೆಲ್ಲಿಸಿದ್ದ ಮತದಾರರು ಉಪಚುನಾವಣೆಯಲ್ಲಿ ಅದರ ಅರ್ಧದಷ್ಟು ಮತಗಳಿಂದ ಸೋಲಿಸಿದ್ದಾರೆ. ಅಂತಹ ವ್ಯಕ್ತಿ ಇದೀಗ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ’ ಎಂದು ಟೀಕಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.