ADVERTISEMENT

ನಂದಗುಡಿ ‘ರಾಗಿಗುಡ್ಡ’ಕ್ಕೆ ಲಕ್ಷ ವರ್ಷಗಳ ನಂಟು

ಮಳೆನಾಡಾಗಿದ್ದ ಕೋಲಾರ ಬೆಂಗಾಡಿದ್ದೇಕೆ? ಭೂವಿಜ್ಞಾನಿಗಳ ಹೊಸ ಶೋಧ

ಎಸ್.ರವಿಪ್ರಕಾಶ್
Published 17 ಸೆಪ್ಟೆಂಬರ್ 2025, 19:50 IST
Last Updated 17 ಸೆಪ್ಟೆಂಬರ್ 2025, 19:50 IST
ನಂದಗುಡಿಯ ರಾಗಿಗುಡ್ಡ
ನಂದಗುಡಿಯ ರಾಗಿಗುಡ್ಡ   

ಬೆಂಗಳೂರು: ಇಂದು ಬಿರು ಬಿಸಿಲು, ಒಣ ಭೂಮಿ, ನೀರಿನ ಕೊರತೆಯಿಂದ ಬೆಂಡಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲವು ಪ್ರದೇಶ ಮತ್ತು ಕೋಲಾರ ಜಿಲ್ಲೆಯ ಭೂಭಾಗ ಒಂದಾನೊಂದು ಕಾಲದಲ್ಲಿ ಈಗಿನ ಮಲೆನಾಡಿನಂತೆ ಹೆಚ್ಚು ಮಳೆ ಬೀಳುವ ತೇವದಿಂದ ಕೂಡಿದ ಹಸಿರಿನಿಂದ ನಳನಳಿಸುವ ಪ್ರದೇಶವಾಗಿತ್ತು ಎಂದರೆ ನಂಬುತ್ತೀರಾ?

ಹೌದು, ಭೂವಿಜ್ಞಾನಿಗಳಾದ ಬಿ.ಸಿ.ಪ್ರಭಾಕರ್, ಕೆ.ಎನ್‌.ರಾಧಿಕಾ, ಆರ್‌.ಶಂಕರ್ ಮತ್ತು ಎಚ್‌.ಎಸ್‌.ಎಂ. ಪ್ರಕಾಶ್ ಅವರು ನಡೆಸಿರುವ ಹೊಸ ಅಧ್ಯಯನದಿಂದ ಈ ವಿಸ್ಮಯಕಾರಿ ಸಂಗತಿ ಬೆಳಕಿಗೆ ಬಂದಿದೆ.

ಅದರಲ್ಲೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ನಂದಗುಡಿಯ ‘ರಾಗಿಗುಡ್ಡ’ ಪ್ರದೇಶ ಕರ್ನಾಟಕ ಮಾತ್ರವಲ್ಲ, ಭಾರತದಲ್ಲೇ ಭೂವಿಸ್ಮಯದ ತಾಣವಾಗಿದೆ. ಭೂಮೇಲ್ಮೈನಿಂದ ಸುಮಾರು 150 ಅಡಿ ಎತ್ತರ ಮತ್ತು ಸಾವಿರಕ್ಕೂ ಹೆಚ್ಚು ಅಡಿ ಸುತ್ತಳತೆಯ ಈ ಗುಡ್ಡ ಸುತ್ತಲಿನ ಸಮತಟ್ಟಾದ ಮೇಲ್ಮೈನಿಂದ ಎದ್ದು ಕಾಣುತ್ತದೆ.

ADVERTISEMENT

ಈ ಗುಡ್ಡದ ಮಹತ್ವದ ಏನೆಂದರೆ ಲಕ್ಷಾಂತರ ವರ್ಷಗಳ ಹಿಂದೆ ಸಂಭವಿಸಿದ ವಿಶಿಷ್ಟ ಶೀತಲೀಕರಣ ಪ್ರಕ್ರಿಯೆ ಕುರುಹಾಗಿ ಇದು ಮೈದಳೆದಿದೆ. ಗುಡ್ಡದ ಒಡಲಿನಲ್ಲಿ ಜಂಬಿಟ್ಟಿಗೆ ಇದೆ. ಜಂಬಿಟ್ಟಿಗೆ (ಲ್ಯಾಟರೈಟ್‌) ಎಂಬ ನೈಸರ್ಗಿಕ ಶಿಲೆಯ ನಿರ್ಮಾಣದ ಸುದೀರ್ಘ ಪ್ರಕ್ರಿಯೆಯೇ ಒಂದು ಕುತೂಹಲಕರ ಕಥನ.

ಲಕ್ಷಾಂತರ ವರ್ಷಗಳ ಹಿಂದೆ ಈ ಪ್ರದೇಶದಲ್ಲಿದ್ದ ವಿಶಿಷ್ಟ ಹವಾಮಾನ, ಭೂಪ್ರಕ್ರಿಯೆ ಮತ್ತು ಶೀತಲೀಕರಣದ ಪರಿಣಾಮ, ಭೂಮಿಯ ವಿವಿಧ ಸ್ತರಗಳಲ್ಲಿ ಕುತೂಹಲಕರ ಖನಿಜಗಳು ಸೃಷ್ಟಿಯಾಗಿವೆ. ಕೋಲಾರ ಜಿಲ್ಲೆಯ ಬಹುಪಾಲು ಪ್ರದೇಶವು ಲ್ಯಾಟರೈಟ್ ಮತ್ತು ಲ್ಯಾಟರೈಟ್‌ನಿಂದಾದ ಮಣ್ಣಿನಿಂದ ಆವೃತವಾಗಿದೆ. ನಂದಗುಡಿಯ ರಾಗಿಗುಡ್ಡ ಲ್ಯಾಟರೈಟ್‌ ಪ್ರಕ್ರಿಯೆಯ ಪ್ರತಿನಿಧಿಯಂತೆ ಗಮನ ಸೆಳೆಯುತ್ತಿದೆ. ಹೀಗಾಗಿ, ಭೂವಿಜ್ಞಾನಿಗಳಿಗೆ ಹೆಚ್ಚಿನ ಸಂಶೋಧನೆಯ ಆಯಸ್ಕಾಂತ ಬಿಂದುವಾಗಿ ಸೆಳೆಯುತ್ತಿದೆ ಎನ್ನುತ್ತಾರೆ ಭೂ ವಿಜ್ಞಾನಿಗಳು.

ಹೊಸಕೋಟೆ ಒಣ ಹವೆಯ ಪ್ರದೇಶ. ಇಲ್ಲಿ ಮಳೆಯ ಪ್ರಮಾಣ ಅತ್ಯಂತ ಕಡಿಮೆ. ಹೆಚ್ಚು ಬಿಸಿಲಿನಿಂದ ಕೂಡಿದೆ. ಈ ಪ್ರದೇಶ ಲಕ್ಷಾಂತರ ವರ್ಷಗಳ ಹಿಂದೆ ವಿಶಿಷ್ಟ ಹವಾಮಾನದಿಂದ ಕೂಡಿತ್ತು. ಹೇರಳವಾಗಿ ಮಳೆಯೂ ಬೀಳುತ್ತಿತ್ತು. ಲ್ಯಾಟರೈಟ್‌ ಸೃಷ್ಟಿಯಾಗುವುದು ಹೆಚ್ಚಾಗಿ ಆಫ್ರಿಕಾ, ಆಸ್ಟ್ರೇಲಿಯಾ, ಭಾರತ ಸೇರಿದಂತೆ ಉಷ್ಣವಲಯ ಹವಾಗುಣ ಪ್ರದೇಶದಲ್ಲಿ ಕಾಣಬಹುದು. ಆದರೆ, ಕೋಲಾರ ಮತ್ತು ಸುತ್ತಮುತ್ತಲಿನ ಸಣ್ಣ ಪ್ರದೇಶದಲ್ಲಿ ಲ್ಯಾಟರೈಟ್‌ ನೋಡಿದಾಗ ವಿಸ್ಮಯವಾಗುತ್ತದೆ. ಪಶ್ಚಿಮಘಟ್ಟ, ಮಧ್ಯ ವಿಂಧ್ಯ ಪರ್ವತಗಳಲ್ಲಿ ಮತ್ತು ಪೂರ್ವ ಘಟ್ಟ ಪ್ರದೇಶಗಳು ಈಗ ಹೊಂದಿರುವ ಹವಾಗುಣದಿಂದ ಲ್ಯಾಟರೈಟ್‌ ಉಂಟಾಗಿದೆ. ಆದರೆ, ಕೋಲಾರ ಜಿಲ್ಲೆ ಈಗ ಅದಕ್ಕೆ ತದ್ವಿರುದ್ಧ ಹವಾ ಲಕ್ಷಣ ಹೊಂದಿದೆ. ಕಾಲಕ್ರಮೇಣ ಹವಾಮಾನ ವೈಪರೀತ್ಯದಿಂದಾಗಿ ಹಿಂದೆ ಸಮೃದ್ಧವಾಗಿ ಮಳೆಯಿಂದ ಕೂಡಿದ್ದ ತೇವಯುಕ್ತ ಪ್ರದೇಶ ಈಗ ಒಣ ಭೂಮಿ ಎನಿಸಿಕೊಂಡಿದೆ ಎನ್ನುತ್ತಾರೆ ಈ ವಿಜ್ಞಾನಿಗಳು.

ಈ ಸಂಶೋಧನೆಗೆ ವೆಸ್ಕೋ ಕಂಪನಿಯ ಮುಖ್ಯಸ್ಥ ಕೆ.ಎಸ್‌.ಶಿವಕುಮಾರ್‌ ಅವರು ಕರ್ನಾಟಕ ಅಸೋಸಿಯೇಷನ್‌ ಫಾರ್ ಅಡ್ವಾನ್ಸ್‌ಮೆಂಟ್ ಆಫ್‌ ಸೈನ್ಸ್‌ ಸಂಸ್ಥೆಗೆ ಯೋಜನಾ ರೂಪದಲ್ಲಿ ಧನ ಸಹಾಯ ಮಾಡಿದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ನಂದಗುಡಿಯ ರಾಗಿಗುಡ್ಡ

ನಂದಗುಡಿಯಲ್ಲಾದ ಲ್ಯಾಟರಟೈಸೇಶನ್‌ ಪ್ರಕ್ರಿಯೆ ಏನು?

ಲಾಟರಟೈಸೇಶನ್‌ ಎಂದರೆ ಮೂಲ ಗಡಸು ಕಲ್ಲನ್ನು ಭೌತಿಕವಾಗಿ ಹಾಗೂ ರಾಸಾಯನಿಕವಾಗಿ ಪರಿವರ್ತಿಸಿ ಮೆದು ಕಲ್ಲಿನ ರೂಪವನ್ನು ಕೊಡುವ ಕ್ರಿಯೆ ಆಗಿದೆ. ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರದ ಸುತ್ತಮುತ್ತ ಗೀರುಶಿಲೆ ಮತ್ತು ಗ್ರಾನೈಟ್‌ ಕಲ್ಲುಗಳು ಸರ್ವೇ ಸಾಮಾನ್ಯ. ಈ ಕಲ್ಲುಗಳು ವಿಶಿಷ್ಟ ಹವಾಗುಣ ಪರಿಸ್ಥಿತಿಯಲ್ಲಿ ಲ್ಯಾಟರೈಟ್‌ ಆಗಿ ಮಾರ್ಪಾಡಾಗುತ್ತವೆ. ನಂದಗುಡಿಯ ಸುತ್ತಮುತ್ತ ನೈಸ್‌ ಎಂಬ ಬೂದಿ ಬಣ್ಣದ ಗಡಸು ಶಿಲೆ ಇದ್ದು ಇದು ಲಕ್ಷಾಂತರ ವರ್ಷಗಳ ಸವಕಳಿ ಮತ್ತು ರಾಸಾಯನಿಕ ಶೀತಲೀಕರಣಕ್ಕೆ ಒಳಪಟ್ಟು ಕಂದು ಬಣ್ಣದ ಮೆದುವಾದ ಶಿಲೆಯಾಗಿ ಮಾರ್ಪಟ್ಟಿದೆ. ಇದಕ್ಕೆ ಉಷ್ಣವಲಯದ (ಟ್ರಾಫಿಕಲ್) ಹವಾಗುಣವಿರಬೇಕು.

ರಾಗಿ ಗುಡ್ಡದ ಉಳಿವಿಗೆ ಏನಾಗಬೇಕು?

ಈ ಜಾಗ ಶಾಲಾ ಮಕ್ಕಳು ಕಾಲೇಜು ವಿದ್ಯಾರ್ಥಿಗಳು ಸಂಶೋಧಕರು ಮತ್ತು ಪ್ರವಾಸಿಗರಿಗೆ ಮಹತ್ವದ ತಾಣ. ಲಕ್ಷಾಂತರ ವರ್ಷಗಳ ಹಿಂದೆ ವಿಶಿಷ್ಟ ಹವಾಮಾನದ ಭೂಪ್ರಕ್ರಿಯೆ ಮತ್ತು ಶೀತಲೀಕರಣ ಕಾರಣ ಇಂತಹ ಭೂರಚನೆ ಆಗಿದೆ.

ಇವುಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಸಂಶೋಧನೆಗೆ ರಾಗಿಗುಡ್ಡವನ್ನು ಉಳಿಸಿಕೊಳ್ಳಬೇಕು. ಅಮೆರಿಕಾ ಐರೋಪ್ಯ ದೇಶಗಳು ಮತ್ತು ಮುಂದುವರಿದ ದೇಶಗಳಲ್ಲಿ ಇಂತಹ ಮಹತ್ವದ ತಾಣಗಳನ್ನು ರಕ್ಷಿಸಿ ಭೂಪಾರಂಪರಿಕ ತಾಣಗಳನ್ನಾಗಿ ಉಳಿಸಿಕೊಳ್ಳಲಾಗಿದೆ. 30 ವರ್ಷಗಳಿಂದ ರಾಗಿ ಗುಡ್ಡದ ವ್ಯಾಪ್ತಿ ಕಿರಿದಾಗುತ್ತಾ ಹೋಗಿದೆ.

ಹೊಸಕೋಟೆ– ಕೋಲಾರ ಹೆದ್ದಾರಿ ಆದ ಬಳಿಕ ಮನೆ ಅಂಗಡಿ–ಮುಂಗಟ್ಟುಗಳಿಗಾಗಿ ತಪ್ಪಲಿನ ಪ್ರದೇಶವನ್ನು ಅಗೆದು ಸಮತಟ್ಟು ಮಾಡಲಾಗಿದೆ. ಅಲ್ಲದೇ ಸರ್ಕಾರವೇ ತಪ್ಪಲಿನ ಪ್ರದೇಶವನ್ನು ಸಮತಟ್ಟು ಮಾಡಿ ನಿವೇಶಗಳನ್ನು ಹಂಚಿ ಬಡಾವಣೆ ನಿರ್ಮಿಸಿದೆ.

  • ಸರ್ಕಾರ ಇದನ್ನು ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಬೇಕು.

  • ನಿಸರ್ಗ ಪರಂಪರೆಯಂತೆ ಉಳಿಸಿಕೊಂಡು ಮುಂದಿನ ಪೀಳಿಗೆಗೆ ದಾಟಿಸಬೇಕು

  • ಗುಡ್ಡದ ಸುತ್ತಲೂ ಕಾಂಕ್ರೀಟ್ ಬೇಲಿ ಹಾಕಿ ಫಲಕ ಅಳವಡಿಸಿ ಸ್ಥಳ ಮಾಹಿತಿ ವೈಶಿಷ್ಟ್ಯವನ್ನು ವಿವರಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.