ADVERTISEMENT

ಮಂಗಳೂರು | 47 ನೇ ಕೋಸ್ಟ್ ಗಾರ್ಡ್ ದಿನಾಚರಣೆ: ರಾಜ್ಯಪಾಲರು ಭಾಗಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2023, 5:53 IST
Last Updated 2 ಫೆಬ್ರುವರಿ 2023, 5:53 IST
   

ಮಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ನವ ಮಂಗಳೂರು ಬಂದರಿನಲ್ಲಿ 47 ನೇ ಕರಾವಳಿ ರಕ್ಷಣೆ ದಿನಾಚರಣೆಯಲ್ಲಿ ಗುರುವಾರ ಪಾಲ್ಗೊಂಡರು.

ರಾಜ್ಯದ ಕರಾವಳಿ ರಕ್ಷಣಾ ಪಡೆಯವರು ವಿವಿಧ ಕಾರ್ಯಾಚರಣೆ ಚಟುವಟಿಕೆಗಳನ್ನು ರಾಜ್ಯಪಾಲರ ಸಮ್ಮುಖದಲ್ಲಿ ಪ್ರಸ್ತುತಪಡಿಸಿದರು.

ಕರಾವಳಿ ರಕ್ಷಣಾ ಪಡೆಯ ಅಧಿಕಾರಿಗಳ ಜೊತೆ ರಾಜ್ಯಪಾಲರು ಕಡಲ ಭದ್ರತೆಗೆ ಸಂಬಂಧಿಸಿದ ವಿವಿಧ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿದರು.

ADVERTISEMENT

ಜನವಸತಿ ಇರುವ ಮತ್ತು ಜನವಸತಿಯಿಲ್ಲದ ದ್ವೀಪಗಳ ಭದ್ರತೆಯ ಅಗತ್ಯ, ಅರಬ್ಬಿ ಸಮುದ್ರದಲ್ಲಿ ನಾವಿಕರ ಮತ್ತು ಮೀನುಗಾರರ ಸುರಕ್ಷತೆ ಮತ್ತು, ಪರಸ್ಪರ ನೆರವಿನ ಕಾರ್ಯಸಾಧ್ಯತೆ ಹಾಗೂ ಮತ್ತು ಕಡಲ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಿದರು.
ಕರಾವಳಿ ರಕ್ಷಣಾ ಪಡೆಯ ಕಣ್ಗಾವಲು ಸೌಲಭ್ಯ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ರಾಜ್ಯಪಾಲರು ಖುದ್ದು ಅವಲೋಕನ ನಡೆಸಿದರು.

ರಾಜ್ಯದ ಕರಾವಳಿ ರಕ್ಷಣಾ ಪಡೆಯ ಕೇಂದ್ರ ಕಚೇರಿ ನಂ.3 ರಲ್ಲಿ ವಿಲೇವಾರಿಯಲ್ಲಿರುವ ಕಾರ್ಯಾಚರಣೆಯ ಮೂಲಸೌಕರ್ಯಗಳನ್ನು ಪರಿಶೀಲಿಸಿದರು. ಕಮಾಂಡರ್ (ಕರ್ನಾಟಕ) ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಪ್ರವೀಣ್ ಕುಮಾರ್ ಮಿಶ್ರಾ ಅವರು ಚೈನ್ ಆಫ್ ಸ್ಟಾಟಿಕ್ ಸೆನ್ಸರ್ ಯೋಜನೆಯ ಎರಡನೇ ಹಂತಕ್ಕೆ ಒತ್ತು ನೀಡುವ ಮೂಲಕ ಕರಾವಳಿ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಗತಿಯಲ್ಲಿರುವ ಪ್ರಮುಖ ಮೂಲಸೌಕರ್ಯ ಯೋಜನೆಗಳ ಕುರಿತು ರಾಜ್ಯಪಾಲರಿಗೆ ವಿವರಿಸಿದರು.

ಸಮುದ್ರದಲ್ಲಿ ಕಾರ್ಯಾಚರಣೆಯ ಸಂದರ್ಭದಲ್ಲಿ ಕರಾವಳಿ ರಕ್ಷಣಾ ಪಡೆಯ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಕಮಾಂಡರ್ ಅವರು ವಿವರಿಸಿದರು. ಸಮುದ್ರದಲ್ಲಿ ಶೋಧ ಕಾರ್ಯ ಮತ್ತು ಪಹರೆ, ವಿರೋಧಿಗಳ ಚಟುವಟಿಕೆ ಮೇಲೆ ನಿಗಾ, ಪತ್ತೆ ಕಾರ್ಯ, ವೈದ್ಯಕೀಯ ತುರ್ತು ಅಗತ್ಯ ಇರುವ ನಾವಿಕರನ್ನು ದಡಕ್ಕೆ ತಲುಪಿಸುವುದು ಸೇರಿದಂತೆ ವಿವಿಧ ಕಾರ್ಯಾಚರಣೆಗಳನ್ನು ಪ್ರದರ್ಶಿಸಲಾಯಿತು.

ಸಮುದಾಯ ಸಂವಹನ ಕಾರ್ಯಕ್ರಮಗಳ ವಿವಿಧ ಹಂತಗಳನ್ನು ರಾಜ್ಯಪಾಲರು ಮೌಲ್ಯಮಾಪನ ಮಾಡಿದರು. ಸ್ವಾತಂತ್ರ್ಯದ ಅಮೃತ ಮಹೋತ್ಸವ, ಪುನೀತ ಸಾಗರ ಅಭಿಯಾನ, ಸ್ವಚ್ಛ ಭಾರತ ಅಭಿಯಾನ ಮೊದಲಾದ ಅಭಿಯಾನಗಳಲ್ಲಿ ಕರಾವಳಿ ರಕ್ಷಣಾ ಪಡೆಯ ಪಾತ್ರವನ್ನು ಶ್ಲಾಘಿಸಿದರು. ಸಮುದ್ರದಲ್ಲಿ ಕರಾವಳಿ ರಕ್ಷಣಾ ಪಡೆಯ ಹಡಗುಗಳ ಕಾರ್ಯಾಚರಣೆಯ ಸಾಮರ್ಥ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.