ADVERTISEMENT

ಬೈಂದೂರು, ಕಾರವಾರದಲ್ಲಿ ವಿಮಾನ ನಿಲ್ದಾಣ ಸ್ಥಾಪನೆ: ಸಚಿವ ಜಗದೀಶ್ ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2021, 8:42 IST
Last Updated 21 ಮಾರ್ಚ್ 2021, 8:42 IST
 ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್
ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್   

ಮಂಗಳೂರು: ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಯೋಜನೆಯ ಮುಂದುವರಿದ ಭಾಗವಾಗಿ ಬೈಂದೂರು ಮತ್ತು ಕಾರವಾರದಲ್ಲಿ ನಾಗರಿಕ ವಿಮಾನ ನಿಲ್ದಾಣಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಭೂಮಿ ಸ್ವಾಧೀನ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ ಎಂದುಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ನಗರದ ಟಿಎಂಎ ಪೈ ಕನ್ವೆನ್ಶನ್ ಸಭಾಂಗಣದಲ್ಲಿ ಫಿಕ್ಕಿಯಿಂದ ಆಯೋಜಿಸಲಾದ 'ಕರ್ನಾಟಕ ಕೋಸ್ಟ್‌ಲೈನ್ ಬ್ಯುಸಿನೆಸ್ ಕಾನ್‌ಕ್ಲೇವ್' ಉದ್ಘಾಟಿಸಿ ಅವರು ಮಾತನಾಡಿದರು.

ಉಡಾನ್ ಯೋಜನೆಯಡಿ ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಪ್ರತಿದಿನವೂ ಇಲ್ಲಿಂದ 15 ರಿಂದ 20 ವಿಮಾನಗಳು ಸಂಚರಿಸುತ್ತಿವೆ. ವಿಮಾನ ನಿಲ್ದಾಣಗಳು ವ್ಯಾಪಾರ-ವಹಿವಾಟಿಗೆ ಸಹಕಾರಿ ಎಂದರು.

ADVERTISEMENT

ದ.ಕ. ಜಿಲ್ಲೆಯಲ್ಲಿ ಸಾವಿರಾರು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಟ್ಟಲ್ಲಿ ಅತ್ಯುತ್ತಮ ಕೈಗಾರಿಕೆ ಯೋಜನೆಗಳನ್ನು ನೀಡಲಿದ್ದೇವೆ. ದ.ಕ. ಜಿಲ್ಲೆಯ ಬೆಳ್ತಂಗಡಿ, ಪುತ್ತೂರು ತಾಲೂಕಿನಲ್ಲಿ ಈಗಾಗಲೇ 200 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇನ್ನು ಸಾವಿರಾರು ಎಕರೆಯ ಅಗತ್ಯವಿದೆ. ಭೂ ಸ್ವಾಧೀನ ಪ್ರಕ್ರಿಯೆ ಚಾಲನೆಗೊಂಡಲ್ಲಿ ಕೈಗಾರಿಕಾ ಅಭಿವೃದ್ಧಿ ಕೂಡ ವೇಗ ಪಡೆಯಲಿದೆ ಎಂದರು.

ಕೈಗಾರಿಕೆಗಳು ಬೆಂಗಳೂರನ್ನೇ ಕೇಂದ್ರೀಕೃತವಾಗಿರಿಸಿಕೊಂಡಿದ್ದು, ಅದನ್ನು ಎರಡು ಮತ್ತು ಮೂರನೇ ಹಂತದ ನಗರಗಳಿಗೂ ವಿಸ್ತರಿಸಲು ಸರ್ಕಾರ ಮುಂದಾಗಿದೆ. ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು ನಗರಗಳು ಕೂಡ ಔದ್ಯಮಿಕ ಕ್ಷೇತ್ರದಲ್ಲಿ ಬೆಳವಣಿಗೆ ಸಾಧಿಸಲಿವೆ ಎಂದರು.

ರಾಜ್ಯದಲ್ಲಿ 1.60 ಲಕ್ಷ ಕೋಟಿ ಕೈಗಾರಿಕಾ ಹೂಡಿಕೆಗೆ ಪ್ರಸ್ತಾವನೆಗಳು ಬಂದಿವೆ. ಈ ಸಂಖ್ಯೆಯು ದೇಶದಲ್ಲೇ ಅಧಿಕವಾಗಿದ್ದು, ರಾಜ್ಯ ಮೊದಲ ಸ್ಥಾನ‌ ಪಡೆದಿದೆ ಎಂದು ಮಾಹಿತಿ ನೀಡಿದರು.

ಭೂ ಸ್ವಾಧೀನ‌ ಪ್ರಕ್ರಿಯೆಯ ಕಾಯ್ದೆಯ ತಿದ್ದುಪಡಿಯಿಂದಾಗಿ ಉದ್ಯಮಿಗಳಿಗೆ ವರದಾನವಾಗಿದೆ. ಇದರಿಂದ ಕೈಗಾರಿಕೆಯಲ್ಲಿ ಹೂಡಿಕೆ‌ ವಿಸ್ತರಿಸುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.