ಬೆಂಗಳೂರು: ಏಪ್ರಿಲ್ 14ರವರೆಗೆ ಇದ್ದ ಮೊದಲ ಹಂತದ ಲಾಕ್ಡೌನ್ ಮುಗಿದ ಕೂಡಲೇ ಸರ್ಕಾರ ಮದ್ಯ ಮಾರಾಟದ ಮೇಲಿನ ನಿರ್ಬಂಧ ಸಡಿಲಗೊಳಿಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಏಪ್ರಿಲ್ 20ರವರೆಗೆ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಿ ಅಬಕಾರಿ ಇಲಾಖೆ ಮಂಗಳವಾರ ಆದೇಶ ಹೊರಡಿಸಿದೆ.
ಈ ಹಿಂದೆ ಏಪ್ರಿಲ್ 14 ಮದ್ಯರಾತ್ರಿವರೆಗೆ ಮದ್ಯ ಮಾರಾಟಕ್ಕೆ ನಿರ್ಬಂಧವಿತ್ತು. ಹಾಗಾಗಿ ಬುಧವಾರ ಮದ್ಯದಂಗಡಿ ತೆರೆಯುತ್ತದೆ ಎಂದು ಕಾದಿದ್ದವರಿಗೆ ಈ ಆದೇಶ ನಿರಾಸೆಯುಂಟು ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಲಾಕ್ಡೌನ್ ಆದೇಶ ನೀಡಿದ್ದಾಗಿನಿಂದ ಮದ್ಯದಂಗಡಿಗಳನ್ನು ಮುಚ್ಚಲು ಅಬಕಾರಿ ಇಲಾಖೆ ಆದೇಶ ಹೊರಡಿಸಿತ್ತು.
ಪ್ರಧಾನಿ ಆದೇಶದಂತೆ ನಾವು ಲಾಕ್ಡೌನ್ ಕಟ್ಟು ನಿಟ್ಟಾಗಿ ಪಾಲಿಸಬೇಕಿದೆ. ಹಾಗಾಗಿ ಈಗ ನಾವು ಮದ್ಯ ಮಾರಾಟಕ್ಕೆ ಅನುಮತಿ ನೀಡಬೇಕೆಂದು ಪ್ರಸ್ತಾಪಿಸುವುದಿಲ್ಲ. ಮದ್ಯದಂಗಡಿಗಳಲ್ಲಿ ಜನರ ಗುಂಪನ್ನು ನಿಯಂತ್ರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡುವಂತೆ ಮಾಡುವುದು ಕಷ್ಟದ ಕೆಲಸ. ಆದ್ದರಿಂದ ಏಪ್ರಿಲ್ 20ರ ವರೆಗೆ ಮದ್ಯದಂಗಡಿ ತೆರೆಯಲು ಅನುಮತಿ ನೀಡುವುದು ಕಷ್ಟವಾಗುತ್ತದೆ ಎಂದು ಅಬಕಾರಿ ಸಚಿವ ಎಚ್. ನಾಗೇಶ್ ಹೇಳಿದ್ದಾರೆ.
ಲಾಕ್ಡೌನ್ ಮುಗಿಯುತ್ತಿದ್ದಂತೆ ಮದ್ಯ ಮಾರಾಟ ಮಾಡಲು ಮದ್ಯದಂಗಡಿಗಳು ಸಜ್ಜಾಗುತ್ತಿರುವ ಫೋಟೊಗಳು ಸೋಮವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.