ADVERTISEMENT

ಇಂದು ವಿಚಾರಣೆಗೆ ಬರಲು ಸಾಧ್ಯವಿಲ್ಲ: ಅತೃಪ್ತ ‌ಶಾಸಕರಿಂದ ಸ್ಪೀಕರ್‌ಗೆ ಪತ್ರ

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 3:52 IST
Last Updated 23 ಜುಲೈ 2019, 3:52 IST
   

ಬೆಂಗಳೂರು:ಇಂದು ವಿಚಾರಣೆಗೆ ಬರಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿರುವ ಅತೃಪ್ತ ಶಾಸಕರು ವಿಚಾರಣೆಗೆ ಹಾಜರಾಗಲು‌ ನಾಲ್ಕು ವಾರ ಅವಕಾಶ ನೀಡುವಂತೆ ಮನವಿ ಮಾಡಿ ವಿಧಾನಸಭಾ ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಅವರಿಗೆ ಪತ್ರ ಬರೆದಿದ್ದಾರೆ.

ಶಾಸಕರನ್ನು ಅನರ್ಹ ಗೊಳಿಸುವ ಪ್ರಕ್ರಿಯೆಗೆ ಕನಿಷ್ಟ ಏಳು ದಿನ ಅವಕಾಶ ‌ನೀಡಬೇಕು. ನಮಗೆ ನಮ್ಮ ಪಕ್ಷದಿಂದ ‌ನೀಡಿರುವ ದೂರು ಹಾಗೂ ಆರೋಪದ ದಾಖಲೆಗಳು ದೊರೆತಿಲ್ಲ. ನಾವು ಅನಿವಾರ್ಯ ಕಾರಣದಿಂದ ಬೇರೆಡೆ ಇದ್ದು, ವಿಚಾರಣೆಗೆ ಕಾಲಾವಕಾಶ‌ ನೀಡಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ನಾವು ಈಗಾಗಲೇ ನಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ. ರಾಜೀನಾಮೆ ಅಂಗೀಕರಿಸಲು ಸೂಚಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗಿತ್ತು. ಇದೀಗ ನಮ್ಮನ್ನು ಅನರ್ಹಗೊಳಿಸುವ ಕುರಿತು ಪತ್ರ ಬರೆದಿರುವುದು ನಮ್ಮ ಗಮನಕ್ಕೆ ‌ಬಂದಿದೆ. ಆದರೆ, ನಮ್ಮ ಪಕ್ಷದಿಂದ ಯಾವುದೇ ನೋಟೀಸ್ ಬಂದಿಲ್ಲ. ಹೀಗಾಗಿ, ನಮಗೆ ಸಮಯಾವಾಕಾಶ ನೀಡುವಂತೆ ಸ್ಪೀಕರ್‌ಗೆ ಬರೆದಿರುವ ಪತ್ರದಲ್ಲಿ ಅತೃಪ್ತರು ಮನವಿ ಮಾಡಿದ್ದಾರೆ.

ರಾಜೀನಾಮೆ ಸಲ್ಲಿಸಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಅತೃಪ್ತ ಶಾಸಕರು ಮುಂಬೈನಲ್ಲಿ ಹೋಟೆಲ್‌ನಲ್ಲಿ ತಂಗಿದ್ದಾರೆ.

ಅತೃಪ್ತರಿಗೆ ಸೋಮವಾರ ನೋಡಿಸ್‌ ನೀಡಿದ್ದ, ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಅವರು ವಿಚಾರಣೆಗೆ ಮಂಗಳವಾರತಮ್ಮ ಮುಂದೆ ಹಾಜರಾಗುವಂತೆ ಸೂಚಿಸಿದ್ದರು.

ವಿಶ್ವಾಸಮತ ಯಾಚನೆ ಮೇಲಿನ ಚರ್ಚೆಯನ್ನು ದಿನದಿಂದ ದಿನಕ್ಕೆ ಮುಂದುವರಿಸುತ್ತಾ ಮೈತ್ರಿ ನಾಯಕರು ಕಾಲ ಕಳೆಯುತ್ತಿದ್ದಾರೆ. ಇತ್ತ ವಿಪಕ್ಷ ಬಿಜೆಪಿ ಸದಸ್ಯರು ಆಗಾಗ ಆಕ್ಷೇಪ ವ್ಯಕ್ತಪಡಿಸುತ್ತಾ, ಮತಕ್ಕೆ ಹಾಕುವಂತೆ ಕೋರುತ್ತಾ, ಶಾಂತವಾಗಿ ಕುಳಿತಿದ್ದರು.

ಸೋಮವಾರ ರಾತ್ರಿ 11.45ರವರೆಗೆ ನಡೆದ ಕಲಾಪವನ್ನು ಸ್ಪೀಕರ್‌ ಮಂಗಳವಾರಕ್ಕೆ ಮುಂದೂಡಿದ್ದರು. ಇಂದು ಬೆಳಿಗ್ಗೆ 10ಕ್ಕೆ ಕಲಾಪ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.