ADVERTISEMENT

ಎಲ್ಲರೂ ಒಟ್ಟಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ- ತೇಜಸ್ವಿನಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 8:59 IST
Last Updated 26 ಮಾರ್ಚ್ 2019, 8:59 IST
ತೇಜಸ್ವಿನಿ ಅನಂತಕುಮಾರ್ 
ತೇಜಸ್ವಿನಿ ಅನಂತಕುಮಾರ್    

ಬೆಂಗಳೂರು: ನಮ್ಮ ವೈಯಕ್ತಿಕ ಸಮಸ್ಯೆಗಳು ಏನೇ ಇದ್ದರೂ ಎಲ್ಲರೂ ಒಟ್ಟಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ತೇಜಸ್ವಿನಿ ಅನಂತಕುಮಾರ್ ಹೇಳಿದ್ದಾರೆ.

ಮಂಗಳವಾರ ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು. ಬಿಜೆಪಿ ತೇಜಸ್ವಿ ಸೂರ್ಯನಿಗೆ ಟಿಕೆಟ್ ನೀಡಿದೆ ಎಂದ ಮೇಲೆ ನಾವು ಅದನ್ನು ಗೌರವಿಸಬೇಕು. ನನಗೆ ಟಿಕೆಟ್ ಸಿಗಲಿಲ್ಲ ಎಂಬುದನ್ನೇ ಸಮಸ್ಯೆ ಮಾಡಿಕೊಳ್ಳಬೇಡಿ. ಇದರಿಂದ ಬೇರೆ ಯಾವ ಪಕ್ಷದ ಕಡೆಗೂ ಹೋಗುವುದು ಬೇಡ ಎಂದು ಈ ಮೂಲಕ ಕಾರ್ಯಕರ್ತರಲ್ಲಿ ಕೇಳಿಕೊಳ್ಳುತ್ತೇನೆ ಎಂದರು.

ನಾನು 22 ವರ್ಷದಿಂದ ಅದಮ್ಯ ಚೇತನ ಟ್ರಸ್ಟ್ ನಡೆಸಿಕೊಂಡು ಬರುತ್ತಿದ್ದೇನೆ. ಆಗಿನಿಂದಲೂ ಬಿಜೆಪಿ ಪರವಾಗಿಯೇ ಕೆಲಸ ಮಾಡಿಕೊಂಡು ಬಂದಿದ್ದೇನೆ. ನನ್ನ ಪತಿ ಅನಂತಕುಮಾರ್ ಅವರು ಕೂಡ ಕಳೆದ 30 ವರ್ಷಗಳಿಂದ ಬಿಜೆಪಿಯಲ್ಲಿ ಸತತವಾಗಿ ಕೆಲಸ ಮಾಡಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿಯೂ ಸಾಕಷ್ಟು ಕೆಲಸ ಮಾಡಿದ್ದಾರೆ. ನಾನು ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇನೆ ಎಂದರು.

ADVERTISEMENT

ಟಿಕೆಟ್ ಕೈ ತಪ್ಪಿರುವುದರಿಂದ ನನಗೇನೂ ಬೇಸರವಾಗಿಲ್ಲ. ಪತಿ ಅನಂತಕುಮಾರ್ ಅವರು ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಿದ್ದರು. ಪಕ್ಷದ ಅಭ್ಯರ್ಥಿಯಾಗಿ ತೇಜಸ್ವಿ ಸೂರ್ಯನನ್ನು ಆಯ್ಕೆ ಮಾಡಿದ್ದಾರೆ. ಆದ್ದರಿಂದ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಬೇಕಾಗಿದೆ ಎಂದರು.

ಪಕ್ಷೇತರರಾಗಿ ಸ್ಪರ್ಧಿಸುವ ಮಾತೇ ಇಲ್ಲ: ತೇಜಸ್ವಿನಿ

ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಪಕ್ಷ ತೊರೆದು ಬೇರೊಂದು ಪಕ್ಷ ಸೇರುವುದು ಅಥವಾ ಪಕ್ಷೇತರರಾಗಿ ಸ್ಪರ್ಧಿಸುವಪ್ರಶ್ನೆಯೇ ಇಲ್ಲ. ನಾನು ಯಾವಾಗಲೂ ಬಿಜೆಪಿ ಪಕ್ಷದವಳೆ. ನನಗೆ ಟಿಕೆಟ್ ಯಾಕೆ ಸಿಗಲಿಲ್ಲ ಎಂಬುದಕ್ಕೆ ಕಾರಣ ತಿಳಿದಿಲ್ಲ. ಅದನ್ನು ರಾಜ್ಯದ ಮುಖಂಡರನ್ನಾಗಲಿ, ಅಥವಾ ಕೇಂದ್ರದ ಮುಖಂಡರನ್ನು ಕೇಳಿ ಎಂದರು.

ತೇಜಸ್ವಿ ಸೂರ್ಯನನ್ನು ಸೂಚಿಸಿದ್ದು ಯಾರು ಗೊತ್ತಿಲ್ಲ:ಯಡಿಯೂರಪ್ಪ

ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ನಾವು ರಾಜ್ಯ ಘಟಕದಿಂದ ತೇಜಸ್ವಿನಿ ಅನಂತಕುಮಾರ್ ಅವರ ಹೆಸರನ್ನು ಮಾತ್ರ ಸೂಚಿಸಿದ್ದೆವು. ಅದು ಹೇಗೋ ತೇಜಸ್ವಿ ಸೂರ್ಯನ ಹೆಸರು ಬಂತೋ ಗೊತ್ತಿಲ್ಲ. ಅದು ಯಾರು ತೇಜಸ್ವಿ ಹೆಸರನ್ನು ಸೂಚಿಸಿದ್ದಾರೋ ಗೊತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.