ಬೆಂಗಳೂರು: ಪುಟ್ಟ ದೇಶ ಭೂತಾನ್ ನಿಂದ 17 ಸಾವಿರ ಟನ್ ಹಸಿ ಅಡಕೆ ಆಮದು ಮಾಡಿ ಕೊಳ್ಳಲು ಅವಕಾಶ ನೀಡಿದ ಕೇಂದ್ರದ ನಿರ್ಧಾರದಿಂದ, ದೇಶಿಯ ಅಡಕೆ ಮಾರುಕಟ್ಟೆ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಚಿವರು, ಪ್ರಸ್ತುತ ನಮ್ಮದೇಶದಿಂದ ಭೂತಾನ್ ದೇಶಕ್ಕೆ, ಸಂಸ್ಕರಿತ ಅಡಕೆ ಉತ್ಪನ್ನಗಳು, ಆಮದು ಪ್ರಮಾಣಕ್ಕಿಂತ ಹೆಚ್ಚು ರಫ್ತು ಆಗುತ್ತಿದ್ದು ಭೂತಾನ್ ನಿಂದ ಕೇವಲ ಹಸಿ ಅಡಕೆಗೆ ಮಾತ್ರ ಅನುಮತಿ ನೀಡಲಾಗಿದೆ ಎಂದರು.
ನೆರೆಯ ಭೂತಾನ್ ದೇಶವು ಭಾರತದ ಪರಂಪರಾಗತ ಮಿತ್ರ ದೇಶವಾಗಿದ್ದು, ಉಭಯ ದೇಶಗಳ ನಡುವೆ ಉತ್ತಮ ವಾಣಿಜ್ಯ ವಹಿವಾಟು ನಡೆಸಲಾಗುತ್ತಿದೆ ಎಂಬುದನ್ನು ಸಚಿವರು ನೆನಪಿಸಿದರು.
ಅಡಕೆ ಮಾರುಕಟ್ಟೆಯಲ್ಲಿ, ಸ್ಥಿರತೆಯನ್ನು ಕಾಯ್ದು ಕೊಳ್ಳಲು, ಕೇಂದ್ರ ಸರಕಾರದ ಜತೆಗೆ ಸತತ ಸಂಪರ್ಕ ದಲ್ಲಿದ್ದು, ಭೂತಾನ್ ಅಡಕೆ ಆಮದು ವಿಚಾರವಾಗಿಯೂ, ಮಾತುಕತೆ ನಡೆಸಲಾಗುವುದು. ಬೆಳೆಗಾರರಿಗೆ ಯಾವುದೇ ಗೊಂದಲ, ಆತಂಕ ಬೇಡ ಎಂದು ಸಚಿವರು, ಅಭಯ ನೀಡಿದ್ದಾರೆ.
ಈ ವಿಚಾರ ಕುರಿತು ಕೇಂದ್ರಕ್ಕೆ ಮನವರಿಕೆ ಮಾಡಿ ಕೊಡಲು ಲೋಕಸಭಾ ಸದಸ್ಯರ ನೇತೃತ್ವದಲ್ಲಿ ನಿಯೋಗವೊಂದನ್ನು ಕೊಂಡೊಯ್ಯಲಾಗುವುದು ಎಂದೂ ಸಚಿವರು ಹೇಳಿದರು.
ಇದನ್ನೂ ಓದಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.