
2025ರಲ್ಲಿ ನಮ್ಮನ್ನಗಲಿದವರು
ಚಿತ್ರ: ಪ್ರಜಾವಾಣಿ
ಸಾಲುಮರದ ತಿಮ್ಮಕ್ಕ
ಸಾಲುಮರದ ತಿಮ್ಮಕ್ಕ
ಸಾಲುಮರದ ತಿಮ್ಮಕ್ಕ ಅವರು 2025ರ ನ. 14ರಂದು ನಿಧನರಾದರು. ವೃಕ್ಷಮಾತೆ ಎಂದೇ ಪ್ರಸಿದ್ಧಿ ಪಡೆದಿರುವ ಸಾಲು ಮರದ ತಿಮ್ಮಕ್ಕ ಅವರು ಪರಿಸರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮಕ್ಕಳಿಲ್ಲದ ತಿಮ್ಮಕ್ಕ ತಮ್ಮ ಊರಿನ ದಾರಿಯ ಎರಡೂ ಬದಿಗಳಲ್ಲಿ ಗಿಡಗಳನ್ನು ನೆಟ್ಟು ಮಕ್ಕಳಂತೆ ಸಾಕಿ ಸಲಹಿದವರು. ಅವರ ಈ ಸಾಧನೆಗೆ ಪದ್ಮಶ್ರೀ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ.
ಮಹಾಂತೇಶ ಬೀಳಗಿ
ಹಿರಿಯ ಐಎಎಸ್ ಅಧಿಕಾರಿ, ಮಹಾಂತೇಶ ಬೀಳಗಿ ಅವರು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಗೌನಹಳ್ಳಿ ಬಳಿ ನ. 25ರಂದು ರಸ್ತೆ ಅಪಘಾತದಲ್ಲಿ ಮೃತಪಟ್ಟರು. ರಾಮದುರ್ಗದವರಾದ ಬೀಳಗಿ ಅವರು ಧಾರವಾಡ ಉಪವಿಭಾಗಾಧಿಕಾರಿಯಾಗಿ, ದಾವಣಗೆರೆ ಜಿಲ್ಲಾಧಿಕಾರಿಯಾಗಿ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗಳನ್ನು ನಿಭಾಯಿಸಿದ್ದರು. ಇದಕ್ಕೂ ಮುನ್ನ ಧಾರವಾಡದಲ್ಲಿ ಇಂಗ್ಲಿಷ್ ಪಾಠ ಹೇಳುತ್ತಿದ್ದರು.
ಎಸ್.ಎಲ್. ಭೈರಪ್ಪ
ಎಸ್. ಎಲ್. ಭೈರಪ್ಪ
ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ, ಕಾದಂಬರಿಕಾರ ಪ್ರೊ.ಎಸ್.ಎಲ್.ಭೈರಪ್ಪ (94) ಅವರು ಬೆಂಗಳೂರಿನ ರಾಜರಾಜೇಶ್ವರಿನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಸೆ. 24ರಂದು ಮಧ್ಯಾಹ್ನ 2.38ಕ್ಕೆ ಹೃದಯಾಘಾತದಿಂದ ನಿಧನರಾದರು. ಇವರು ವಿದ್ಯಾರ್ಥಿಯಾಗಿದ್ದಾಗಲೇ ‘ಭೀಮಕಾಯ’, ‘ಬೆಳಕು ಮೂಡಿತು’ ಕಾದಂಬರಿಗಳನ್ನು ಬರೆದಿದ್ದ ಅವರ ಮೊದಲ ಕಾದಂಬರಿ ‘ಧರ್ಮಶ್ರೀ’ 1961ರಲ್ಲಿ ಪ್ರಕಟಗೊಂಡಿತ್ತು.
ಡಾ.ಶರಣಬಸವಪ್ಪ ಅಪ್ಪ
ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ, ಶರಣಬಸವೇಶ್ವರ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿದ್ದ ಡಾ.ಶರಣಬಸವಪ್ಪ ಅಪ್ಪ (90) ಅವರು ಆ. 14ರಂದು ನಿಧನರಾದರು. ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವುದರ ಜೊತೆಗೆ ಶೈಕ್ಷಣಿಕ ಕ್ರಾಂತಿ ಮಾಡಿದ್ದ ಶರಣಬಸವಪ್ಪ ಅವರು ಶರಣಬಸವೇಶ್ವರ ವಿಶ್ವವಿದ್ಯಾಲಯ, ಶರಣಬಸವೇಶ್ವರ ರೆಸಿಡೆನ್ಷಿಯಲ್ ಪಬ್ಲಿಕ್ ಸ್ಕೂಲ್, ಅಪ್ಪ ಪಬ್ಲಿಕ್ ಸ್ಕೂಲ್, ಗೋದುತಾಯಿ ಮಹಿಳಾ ಕಾಲೇಜು, ಎಂಜಿನಿಯರಿಂಗ್, ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಕಾಲೇಜುಗಳನ್ನು ಆರಂಭಿಸಿ ಹೊಸ ಎತ್ತರಕ್ಕೆ ಕೊಂಡೊಯ್ದರು.
ಶಾಮನೂರು ಶಿವಶಂಕರಪ್ಪ
ದೇಶದ ಅತಿ ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ವಯೋಸಹಜ ಅನಾರೋಗ್ಯದಿಂದ ಡಿ. 15ರಂದು ನಿಧನರಾದರು. ಇವರಿಗೆ 95 ವರ್ಷ ವಯಸ್ಸಾಗಿತ್ತು. ಶಿವಶಂಕರಪ್ಪ ಮೂಲತಃ ಉದ್ಯಮಿ. ರಾಜಕೀಯ ಕ್ಷೇತ್ರ ಪ್ರವೇಶಿಸಿದ ಇವರು 6 ಬಾರಿ ಶಾಸಕರಾಗಿ, ಸಚಿವರಾಗಿ ಹಾಗೂ ಒಮ್ಮೆ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ಸುದೀರ್ಘ ಅವಧಿಗೆ ಕೆಪಿಸಿಸಿ ಖಜಾಂಚಿಯಾಗಿದ್ದರು.
ಬಿ. ಸರೋಜಾದೇವಿ
ಬಿ. ಸರೋಜಾದೇವಿ
ಬಹುಭಾಷಾ ನಟಿ ಬಿ. ಸರೋಜಾದೇವಿ (87) ಅವರು ವಯೋಸಹಜ ಅನಾರೋಗ್ಯದಿಂದಾಗಿ ಜು. 15ರಂದು ಮಲ್ಲೇಶ್ವರದ ಸ್ವಗೃಹದಲ್ಲಿ ನಿಧನರಾದರು. ಸರೋಜಾ ದೇವಿ ಜನಿಸಿದ್ದು 1938ರ ಜನವರಿ 7ರಂದು, ಬೆಂಗಳೂರಿನಲ್ಲಿ. ತಂದೆ ಭೈರಪ್ಪ, ಪೊಲೀಸ್ ಅಧಿಕಾರಿಯಾಗಿದ್ದರು. ತಾಯಿ ರುದ್ರಮ್ಮ. 14ನೇ ವಯಸ್ಸಿಗೆ ಸಿನಿಮಾ ರಂಗ ಪ್ರವೇಶ. ಮಹಾಕವಿ ಕಾಳಿದಾಸ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು.
ರಾಕೇಶ್ ಪೂಜಾರಿ
ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಲ್ಪೆ ರಾಕೇಶ್ ಪೂಜಾರಿ (33) ಅವರು ಮೇ 12ರಂದು ಕುಸಿದು ಬಿದ್ದು ಮೃತಪಟ್ಟಿದ್ದರು. ಉಡುಪಿ ಮೂಲದವರಾದ ರಾಕೇಶ್, 2018ರಲ್ಲಿ ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಸೀಸನ್ 2ರ ರನ್ನರ್ ಅಪ್ ತಂಡದಲ್ಲಿದ್ದ ಅವರು ಅನಂತರ ಹಲವು ತುಳು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು. ರಿಯಾಲಿಟಿ ಶೋ ಮಾತ್ರವಲ್ಲದೆ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿಯೂ ರಾಕೇಶ್, ಕಾಂತಾರ ಅಧ್ಯಾಯ 1ರಲ್ಲೂ ನಟಿಸಿದ್ದರು.
ಬ್ಯಾಂಕ್ ಜನಾರ್ಧನ್
ಬ್ಯಾಂಕ್ ಜನಾರ್ಧನ್
ಕನ್ನಡದ ಹಾಸ್ಯ ಕಲಾವಿದ ಮತ್ತು ಪೋಷಕ ನಟ ಬ್ಯಾಂಕ್ ಜನಾರ್ದನ್ (76) ಅವರು ಏ. 14ರಂದು ಕಿಡ್ನಿ ವೈಫಲ್ಯದಿಂದ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾದರು. ಅವರು ನಟಿಸಿರುವ ಸಿನಿಮಾಗಳ ಸಂಖ್ಯೆ 800ಕ್ಕೂ ಅಧಿಕ. ರಾಜ್ಕುಮಾರ್, ವಿಷ್ಣುವರ್ಧನ್, ಅನಂತನಾಗ್, ದೇವರಾಜ್ ಸೇರಿದಂತೆ ಪ್ರಮುಖ ನಟರ ಜೊತೆ ತೆರೆ ಹಂಚಿಕೊಂಡಿದ್ದರು.
ನಟ ಹರೀಶ್ ರಾಯ್
ಹರೀಶ್ ರಾಯ್
‘ಕೆಜಿಎಫ್’ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ಖಳನಾಯಕನಾಗಿ ನಟಿಸಿ ಜನಪ್ರಿಯತೆ ಪಡೆದುಕೊಂಡಿದ್ದ ನಟ ಹರೀಶ್ ರಾಯ್ (55) ನ. 06ರಂದು ಕ್ಯಾನ್ಸರ್ನಿಂದ ಇಹಲೋಕ ತ್ಯಜಿಸಿದರು.
ಎಂ.ಎಸ್.ಉಮೇಶ್
ಎಂ.ಎಸ್.ಉಮೇಶ್
ವಿಭಿನ್ನ ಹಾವಭಾವ, ಹಾಸ್ಯಭರಿತ ಸಂಭಾಷಣೆಗಳ ಮೂಲಕ ಚಿರಪರಿಚಿತರಾಗಿದ್ದ ಎಂ.ಎಸ್.ಉಮೇಶ್ (ಮೈಸೂರು ಶ್ರೀಕಂಠಯ್ಯ ಉಮೇಶ್) (80) ಅವರು ನ. 30ರಂದು ಕ್ಯಾನ್ಸರ್ನಿಂದ ನಿಧನರಾದರು. 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಮೂಲಕ ಉಮೇಶ್ ಕನ್ನಡಿಗರ ಮೆಚ್ಚುಗೆ ಗಳಿಸಿದ್ದರು. ರಮೇಶ್ ಅರವಿಂದ ನಟನೆಯ ‘ವೆಂಕಟ ಇನ್ ಸಂಕಟ’ ಸಿನಿಮಾದಲ್ಲಿ ಹಳೆಯ ಕಾಲದ ಅಜ್ಜಿಯ ಪಾತ್ರದ ಮೂಲಕ ಉಮೇಶ್ ಪ್ರೇಕ್ಷಕರನ್ನು ರಂಜಿಸಿದ್ದರು.
ಎಚ್.ವೈ. ಮೇಟಿ
ಬಾಗಲಕೋಟೆ ಶಾಸಕ ಹಾಗೂ ಮಾಜಿ ಸಚಿವ ಎಚ್.ವೈ. ಮೇಟಿ (ಹುಲ್ಲಪ್ಪ ಯಮನಪ್ಪ ಮೇಟಿ ) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನ. 4ರಂದು ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು. ಬಾಗಲಕೋಟೆ ಜಿಲ್ಲೆಯ ತಿಮ್ಮಾಪುರದ ಮೂಲಕ ರಾಜಕೀಯ ಜೀವನ ಆರಂಭಿಸಿದ್ದರು. 1989ರಲ್ಲಿ ಗುಳೇದಗುಡ್ಡ ವಿಧಾನಸಭಾ ಕ್ಷೇತ್ರದಿಂದ ವಿಧಾನಸೌಧ ಪ್ರವೇಶಿಸಿದ್ದರು.ಬಾರಿ ಲೋಕಸಭಾ ಸದಸ್ಯರಾಗಿದ್ದು,ಬಾಗಲಕೋಟೆಯಲ್ಲಿ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.