ADVERTISEMENT

ವೃದ್ಧಾಪ್ಯ ವೇತನಕ್ಕೆ ಅರ್ಜಿ ಬೇಕಿಲ್ಲ!

60 ತುಂಬಿದ ತಕ್ಷಣ ಯೋಜನೆ ವ್ಯಾಪ್ತಿಗೆ ಹಿರಿಯರು

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 3:08 IST
Last Updated 30 ಜನವರಿ 2020, 3:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವೃದ್ಧಾಪ್ಯ ವೇತನಕ್ಕಾಗಿ ಇನ್ನು ಮುಂದೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಅರ್ಹ ಫಲಾನುಭವಿಗಳಿಗೆ 60 ವರ್ಷ ತುಂಬಿದ ತಕ್ಷಣವೇ ಸರ್ಕಾರವೇ ಪತ್ರ ಕಳುಹಿಸಿ, ಅಂತಹವರನ್ನು ಯೋಜನೆಯ ವ್ಯಾಪ್ತಿಗೆ ಒಳಪಡಿಸುತ್ತದೆ.

ಈ ಯೋಜನೆಗೆ ಮುಂದಿನ ತಿಂಗಳು ಉಡುಪಿಯಲ್ಲಿ ಚಾಲನೆ ನೀಡಲಾಗುವುದು ಎಂದುಕಂದಾಯ ಸಚಿವ ಆರ್‌.ಅಶೋಕ ಅವರು ಮಾಹಿತಿ ನೀಡಿದರು.

ಈವರೆಗೆ ವೃದ್ಧಾಪ್ಯ ವೇತನಕ್ಕಾಗಿ ಅರ್ಜಿ ಸಲ್ಲಿಸಿ ತಿಂಗಳುಗಟ್ಟಲೆ ಕಾಯಬೇಕಾಗಿತ್ತು. ಇನ್ನು ಮುಂದೆ ಅದಕ್ಕೆ ಅವಕಾಶವಿಲ್ಲ. ಬಿಪಿಎಲ್‌ ಪಡಿತರ ಚೀಟಿಯನ್ನು ಆಧಾರ್‌ಗೆ ಜೋಡಿಸಿರುವುದರಿಂದ ಬಿ‍ಪಿಎಲ್‌ ಕುಟುಂಬಗಳ ಪೂರ್ಣ ದತ್ತಾಂಶ ಇಲಾಖೆಯಲ್ಲಿದೆ. ಪ್ರತಿ ವ್ಯಕ್ತಿಯ ಜನ್ಮ ದಿನಾಂಕದ ಅನ್ವಯ 60 ವರ್ಷ ವಯಸ್ಸು ತುಂಬಿದ ತಕ್ಷಣವೇ, ಬಿಪಿಎಲ್‌ ಕಾರ್ಡ್‌ ಹೊಂದಿರುವವರಿಗೆ ಮಾತ್ರ ಪತ್ರ ಕಳುಹಿಸಲಾಗುತ್ತದೆ ಎಂದುಕಂದಾಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ನಿರ್ದಿಷ್ಟ ದಿನಾಂಕದಂದು ನಾಡ ಕಚೇರಿಗೆ ಬಂದು ಫೋಟೊ ತೆಗೆಸಿಕೊಂಡು ಸಹಿ ಹಾಕಲು ಸೂಚಿಸಲಾಗುತ್ತದೆ. ಫೋಟೊ ಮತ್ತು ಸಹಿ ಸರ್ವರ್‌ಗೆ ಅಪ್‌ಲೋಡ್‌ ಮಾಡಲಾಗುತ್ತದೆ. ಈ ಪ್ರಕ್ರಿಯೆ ಮುಗಿದ ಬಳಿಕ ಅವರ ಖಾತೆಗೇ ಹಣ ಜಮೆಯಾಗುತ್ತದೆ. ಇದಕ್ಕಾಗಿ ಸಾಫ್ಟ್‌ವೇರ್‌ ಸಿದ್ಧಪಡಿಸಲಾಗಿದೆ. ವಯಸ್ಸು, ಆದಾಯ ಮತ್ತಿತರ ಮಾಹಿತಿಗೆ ಅನುಗುಣವಾಗಿ ಪತ್ರವನ್ನು ಸಿದ್ಧಪಡಿಸಲಾಗುತ್ತದೆ ಎಂದರು.

ಈ ಯೋಜನೆಯನ್ನು ವರ್ಷದ ಹಿಂದೆ ಬಳ್ಳಾರಿ ಮತ್ತು ಕಾರವಾರದಲ್ಲಿಪ್ರಾಯೋಗಿಕವಾಗಿ ಜಾರಿ ಮಾಡಲಾಗಿದ್ದು, ಇದು ಯಶಸ್ವಿ ಯಾಗಿದೆ. ಈ ಯಶಸ್ಸಿನ ಹಿನ್ನೆಲೆಯಲ್ಲಿ ಯೋಜನೆಯನ್ನು ಇಡೀ ರಾಜ್ಯದಲ್ಲಿ ಜಾರಿ ಮಾಡಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.