‘ಭೂ ಸ್ವಾಧೀನದ ಕಬಂಧಬಾಹು!’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ (ಅಕ್ಟೋಬರ್ 2) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರು ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.
ಭೂ ಸ್ವಾಧೀನ ನಿಯಮ ಕಾಗದಕ್ಕಷ್ಟೇ ಸೀಮಿತ
ಭೂ ಸ್ವಾಧೀನದ ಸುರುಳಿ ರೈತ ಸಮುದಾಯವನ್ನು ನಿರ್ಗತಿಕರನ್ನಾಗಿಸುತ್ತಿದೆ. ಅಧಿಕಾರಿಗಳು, ಮಧ್ಯವರ್ತಿಗಳ ಮಾಫಿಯಾ ಶ್ರೀಮಂತರಾಗಿರುವುದು ವಾಸ್ತವ ಸತ್ಯ. ದೇವನಹಳ್ಳಿ ತಾಲ್ಲೂಕಿನಲ್ಲಿ ವಿಮಾನ ನಿಲ್ದಾಣ ಹೊರತಾಗಿ ದೊಡ್ಡಬಳ್ಳಾಪುರ ಗಡಿ ಭಾಗದಲ್ಲೂ ಸಾವಿರಾರು ಎಕರೆ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಸಾಮಾಜಿಕ ಅಧ್ಯಯನ ಮತ್ತು ಪರಿಸರ ಪ್ರಭಾವದ ಮೌಲ್ಯಮಾಪನ ಮಾಡದೆ ಬೆಲೆಬಾಳುವ, ಬೆಳೆ ಬೆಳೆಯುವ ಉತ್ಕೃಷ್ಟ ಭೂಮಿಯನ್ನು ಲಪಟಾಯಿಸಲು ಕೆಐಡಿಬಿಯನ್ನು ಬಳಸಿಕೊಳ್ಳಲಾಗುತ್ತಿದೆ. ಸ್ವಾಧೀನ ಕಾಯ್ದೆಯ ನಿಯಮಗಳೆಲ್ಲವೂ ಕೇವಲ ಕಾಗದಕ್ಕಷ್ಟೇ ಸೀಮಿತವಾಗಿವೆ.
-ಬಿ. ಆರ್.ಮೋಹನ್ ,ಬೀರಸಂದ್ರ
––––
ಸರ್ಕಾರಿ ಉದ್ಯೋಗ ನೀಡಬೇಕು
ರೈತರ ಭೂಮಿಯನ್ನು ಕಬಳಿಸುವುದು ನಿಜಕ್ಕೂ ದುರದೃಷ್ಟಕರ. ಈ ವಿಷಯಕ್ಕೆ ಸಂಬಂಧಿಸಿದಂತೆ ಬೇರೆ ಪರಿಹಾರ ಕಂಡುಕೊಳ್ಳಬೇಕು. ರೈತರ ಜಮೀನು ಹೊರತುಪಡಿಸಿ, ಬೇರೆ ಜಾಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಒಂದು ವೇಳೆ ಅನಿವಾರ್ಯವಾಗಿ ಭೂ ಸ್ವಾಧೀನ ಮಾಡಿಕೊಂಡರೆ ಜಮೀನಿನ ಮಾಲೀಕರಿಗೆ ಅಥವಾ ಅವರ ಕುಟುಂಬದ ಸದಸ್ಯರೊಬ್ಬರಿಗೆ ಕಡ್ಡಾಯವಾಗಿ ಸರ್ಕಾರಿ ಉದ್ಯೋಗ ನೀಡಬೇಕು. ಜತೆಗೆ ತ್ವರಿತಗತಿಯಲ್ಲಿ ಸೂಕ್ತ ಪರಿಹಾರ ಒದಗಿಸಬೇಕು.
ಕಲ್ಲಪ್ಪ ನಂದರಗಿ, ಬಿಜ್ಜರಗಿ, ವಿಜಯಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.