ADVERTISEMENT

‘ಆಡಿಯೊ’ ಕುರಿತು ಎಸ್‌ಐಟಿ ತನಿಖೆ ಬಿಜೆಪಿ ಆಕ್ಷೇಪ 

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 9:37 IST
Last Updated 11 ಫೆಬ್ರುವರಿ 2019, 9:37 IST
   

ಬೆಂಗಳೂರು: ಆಪರೇಷನ್‌ ಕಮಲ ಕುರಿತು ಬಿ.ಎಸ್‌.ಯಡಿಯೂರಪ್ಪ ಮಾತನಾಡಿರುವ ಆಡಿಯೊ ಪ್ರಕರಣ ಕುರಿತಾದ ತನಿಖೆಯನ್ನು ಎಸ್‌ಐಟಿಗೆ ವಹಿಸುವ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.

ಸೋಮವಾರ ವಿಧಾನಸಭೆ ಕಲಾಪದಲ್ಲಿ ಆಡಿಯೊ ವಿಷಯ ಪ್ರಸ್ತಾಪಿಸಿದ ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಅವರು, ಆಡಳಿತ ಮತ್ತು ವಿಪಕ್ಷಗಳ ಸದಸ್ಯರು ಅಭಿಪ್ರಾಯ ತಿಳಿಸಲೂ ಅವಕಾಶ ನೀಡಿದರು.

ಬಳಿಕ ಸಭಾಧ್ಯಕ್ಷರು, ಪ್ರಕರಣ ಕುರಿತು ಐದು ಜನರನ್ನೊಳಗೊಂಡವಿಶೇಷ ತನಿಖಾ ಸಮಿತಿ ರಚನೆ ಮಾಡಿ, 15 ದಿನಗಳ ಒಳಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿಗೆಸೂಚಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಸಭಾಧ್ಯಕ್ಷರ ಸೂಚನೆ ಮೇರೆಗೆ ತನಿಖಾ ಸಮಿತಿ ರಚನೆ ಮಾಡಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.

ಬಿಜೆಪಿ ಆಕ್ಷೇಪ

‘ಸರ್ಕಾರದ ವತಿಯಿಂದ ನಡೆಸುವ ತನಿಖೆ ಮೇಲೆ ವಿಶ್ವಾಸವಿಲ್ಲ. ಈ ಕುರಿತು ಸಭಾಧ್ಯಕ್ಷರೇ ಪಕ್ಷಾತೀತವಾಗಿ ಸಮಿತಿಯೊಂದನ್ನು ರಚಿಸಿತನಿಖೆಗೆ ಆದೇಶಿಸಬೇಕು’ ಎಂದು ಬಿಜೆಪಿಶಾಸಕ ಜೆ.ಸಿ.ಮಾಧುಸ್ವಾಮಿಆಗ್ರಹಿಸಿದರು.

ಬಿಜೆಪಿ ಸದಸ್ಯ ಎಸ್‌.ಸುರೇಶ್‌ಕುಮಾರ್‌ ಮಾತನಾಡಿ, ಸಭಾಧ್ಯಕ್ಷರು ಯಾವುದೇ ವಿಧದ ತನಿಖೆ ನಡೆಸಿದರೂ ನಾವು ಸಹಕರಿಸುತ್ತೇವೆ ಎಂದರು.

ಇದಕ್ಕೂ ಮೊದಲು ಮಾತನಾಡಿದ್ದ ಆಡಳಿತ ಪಕ್ಷದ ಸದಸ್ಯ ಡಿ.ಕೆ.ಶಿವಕುಮಾರ್‌, ಆಡಿಯೊದಂತ‌ಹ ಘಟನೆಗಳಿಂದ ತಾವು ವಿಚಲಿತರಾಗಿ, ಈ ಹಿಂದೆ ತೆಗೆದುಕೊಂಡಿದ್ದ ಆತುರದ ನಿರ್ಧಾರಗಳನ್ನು ಈಗ ಕೈಗೊಳ್ಳದೆ ತಾಳ್ಮೆಯಿಂದ ನಿರ್ವಹಿಸಿ. ಪ್ರಕರಣದಸಮಗ್ರ ತನಿಖೆಯಾಗಬೇಕು. ಇದೊಂದು ಪಾಠವಾಗಬೇಕು ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.

ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ‘ಸಭಾಧ್ಯಕ್ಷರುತಮ್ಮ ವಿವೇಚನಾ ಅನ್ವಯ ಯಾವುದೇ ಸಮಿತಿ ರಚಿಸಿ ತನಿಖೆ ನಡೆಸಿದರೂ ಸಂಪೂರ್ಣ ಸಹಕಾರ ನೀಡುವುದಾಗಿ’ ಸಲಹೆ ನೀಡಿದರು.

ಸಂಸತ್‌ನಲ್ಲಿ ಪ್ರತಿಧ್ವನಿ: ಆಪರೇಷನ್‌ ಕಮಲದ ಆಡಿಯೊ ಪ್ರಕರಣ ಕುರಿತು ಸಂಸತ್‌ನಲ್ಲಿ ಕಾಂಗ್ರೆಸ್‌ ಸಂಸದ ಮಲ್ಲಿಕಾರ್ಜುನ ಖರ್ಗೆ ಪ್ರಸ್ತಾಪಿಸಿದ್ದು, ಇದೊಂದು ದೊಡ್ಡಮಟ್ಟದ ಆಮಿಷ ಎಂದು ಆಪಾದಿಸಿದ್ದಾರೆ. ಅವರ ಹೇಳಿಕೆಗೆಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಸಹಮತ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಬಿಜೆಪಿ ಸಂಸದ ಸದಾನಂದಗೌಡ ಅವರು ಆಕ್ಷೇಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.