ADVERTISEMENT

ನಿಜ ಸಾಧಕರನ್ನು ಪುರಸ್ಕರಿಸುತ್ತಿದೆ ಪದ್ಮ ಪ್ರಶಸ್ತಿ: ಪ್ರಲ್ಹಾದ ಜೋಶಿ

‘ಪದ್ಮಶ್ರೀ’ ಪುರಸ್ಕೃತ ಡಾ.ವಿಜಯಲಕ್ಷ್ಮಿ ಅವರನ್ನು ಗೌರವಿಸಿದ ಕೇಂದ್ರ ಸಚಿವ ಜೋಶಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 16:26 IST
Last Updated 7 ಜೂನ್ 2025, 16:26 IST
ಕಾರ್ಯಕ್ರಮದಲ್ಲಿ ಪ್ರಲ್ಹಾದ ಜೋಶಿ ಅವರು ಡಾ.ವಿಜಯಲಕ್ಷಿ ದೇಶಮಾನೆ ಅವರನ್ನು ಗೌರವಿಸಿದರು
ಕಾರ್ಯಕ್ರಮದಲ್ಲಿ ಪ್ರಲ್ಹಾದ ಜೋಶಿ ಅವರು ಡಾ.ವಿಜಯಲಕ್ಷಿ ದೇಶಮಾನೆ ಅವರನ್ನು ಗೌರವಿಸಿದರು   

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ‘ಪದ್ಮ ಪ್ರಶಸ್ತಿ’ಯು ನಿಜ ಸಾಧಕರನ್ನು ಪುರಸ್ಕರಿಸುತ್ತಿದೆ. ಇದರಿಂದಾಗಿ ಪ್ರಶಸ್ತಿಯ ಮೌಲ್ಯವೂ ಹೆಚ್ಚುತ್ತಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರತಿಪಾದಿಸಿದರು.

ಅಬಲಾಶ್ರಮದ 120ನೇ ವರ್ಷಾಚರಣೆ ಪ್ರಯುಕ್ತ ನಗರದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ, ‘ಪದ್ಮಶ್ರೀ ಪ್ರಶಸ್ತಿ’ ಪುರಸ್ಕೃತೆ ಡಾ.ವಿಜಯಲಕ್ಷಿ ದೇಶಮಾನೆ ಅವರನ್ನು ಗೌರವಿಸಿ, ಮಾತನಾಡಿದರು.

‘ಹಿಂದೆ ಪ್ರಶಸ್ತಿ–ಪುರಸ್ಕಾರಕ್ಕೆ ಅರ್ಜಿ, ಶಿಫಾರಸು ಪ್ರಮುಖ ಪಾತ್ರ ವಹಿಸುತ್ತಿತ್ತು. ಆದರೆ, ಈಗ ಕೇಂದ್ರ ಮಟ್ಟದ ಗೌರವ-ಪುರಸ್ಕಾರಗಳು ನೈಜ ಸಾಧಕರನ್ನು ಅರಸಿ ಬರುತ್ತಿವೆ. ಸ್ಥಳೀಯ ಆಡಳಿತ, ಅಧಿಕಾರಿಗಳಿಗೇ ನೈಜ ಸಾಧಕರ ಬಗ್ಗೆ ಮಾಹಿತಿ ಇರುವುದಿಲ್ಲ. ಅಂಥ ಸಮಾಜ ಸೇವಕರನ್ನು, ಸಾಧಕರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುತಿಸಿ, ‘ಪದ್ಮಶ್ರೀ’ಯಂತಹ ಅತ್ಯುನ್ನತ ಪ್ರಶಸ್ತಿ ನೀಡಿ ಪುರಸ್ಕರಿಸುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

‘ಅಬಲಾಶ್ರಮದ ಅಧ್ಯಕ್ಷೆ ವಿಜಯಲಕ್ಷ್ಮಿ ದೇಶಮಾನೆ ಅವರ ಸೇವಾ ಕೈಂಕರ್ಯ ನಿಜಕ್ಕೂ ಇಂದಿನ ಸಮಾಜಕ್ಕೆ ಮಾದರಿ ಮತ್ತು ಆದರ್ಶನೀಯ. ಅಬಲೆಯರಿಗೆ ಸ್ತ್ರೀಶಕ್ತಿಯಾಗಿ ನಿಂತಿದ್ದು, ಅತ್ಯುನ್ನತ ‘ಪದ್ಮಶ್ರೀ’ ಗೌರವ ಪುರಸ್ಕಾರಕ್ಕೆ ಭಾಜನರಾಗಿರುವುದು ಹೆಮ್ಮೆಯ ಸಂಗತಿ’ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

‘ಮಹಿಳೆಯರು ಇಂದು ರೈಫಲ್‌ ಹಿಡಿಯುವುದರಿಂದ ಹಿಡಿದು, ಡ್ರೋನ್‌, ಕ್ಷಿಪಣಿ ಉಡಾಯಿಸುವಂತಹ ಮಹತ್ತರ ಎತ್ತರಕ್ಕೆ ಬೆಳೆದಿದ್ದಾರೆ. ಕೀಳರಿಮೆ, ಅವಹೇಳನವನ್ನೆಲ್ಲ ಮೆಟ್ಟಿ ನಿಂತು ಸಮಾಜದಲ್ಲಿ ಸಮಾನತೆ ಸಾಧಿಸುತ್ತಿದ್ದಾರೆ. ಅವಕಾಶ ಕೊಟ್ಟರೆ ಮುಗಿಲೆತ್ತರ ತಲುಪುತ್ತೇವೆ ಎಂಬುದನ್ನು ಸಾಧಿಸುತ್ತಿದ್ದಾರೆ. ‘ಆಪರೇಷನ್‌ ಸಿಂಧೂರ್‌’ ಮೂಲಕ ಭಾರತೀಯ ಮಹಿಳೆಯರು ಇಂದು ಜಗತ್ಪ್ರಸಿದ್ಧರಾಗಿದ್ದಾರೆ’ ಎಂದರು.

ಸ್ಟೇಟ್‌ ಬ್ಯಾಕ್ ಆಫ್‌ ಇಂಡಿಯಾದ ಮುಖ್ಯ ಆಡಳಿತಾಧಿಕಾರಿ ಜೂಹಿ ಸ್ಮಿತಾ ಸಿನ್ಹಾ, ಕ್ಲೂಬೆರ್‌ ಲೂಬ್ರಿಕೇಷನ್‌ ಇಂಡಿಯಾದ ಹಣಕಾಸು ಮುಖ್ಯಸ್ಥ ವಿಶಾಲ್‌ ಅಲ್‌ಮಲ್‌, ಅಬಲಾಶ್ರಮದ ಗೌರವ ಕಾರ್ಯದರ್ಶಿ ಆರ್‌.ಎಸ್‌. ಭಾರತೀಶ ರಾವ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.