ಬೆಂಗಳೂರು: 'ಕೈ' ತಪ್ಪಿದ ತುಮಕೂರು ಲೋಕಸಭಾ ಕ್ಷೇತ್ರವನ್ನು ಪಡೆಯಲು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಪ್ರಯತ್ನ ಮುಂದುವರಿಸಿದ್ದಾರೆ.
ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಅವರನ್ನು ಪದ್ಮನಾಭ ನಗರದಲ್ಲಿರುವ ಅವರ ನಿವಾಸದಲ್ಲಿ ಗುರುವಾರ ರಾತ್ರಿ ಭೇಟಿ ಮಾಡಿದ ಪರಮೇಶ್ವರ, ಕ್ಷೇತ್ರ ಮರಳಿ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
'ಈಗಾಗಲೇ ಅಲ್ಲಿ ನಮ್ಮ ಪಕ್ಷದ ಹಾಲಿ ಸಂಸದರಿದ್ದಾರೆ. ಇದೀಗ ಈ ಕ್ಷೇತ್ರ ನಿಮಗೆ ಬಿಟ್ಟಿರೋದಕ್ಕೆ ಅವರ ಭವಿಷ್ಯ ಹಾಳಾಗುತ್ತದೆ. ಹೀಗಾಗಿ ತುಮಕೂರು ಕ್ಷೇತ್ರ ಬಿಟ್ಟು ಕೊಡಿ' ಎಂದು ಮನವಿ ಮಾಡಿದ್ದಾರೆ ಎಂದು ಗೊತ್ತಾಗಿದೆ.
ಪರಮೇಶ್ವರ ಅವರನ್ನು ಸಂಜೆ ಭೇಟಿ ಮಾಡಿದ್ದ ಹಾಲಿ ಸಂಸದ ಮುದ್ದಹನುಮೇಗೌಡ, ಮರಳಿ ಆ ಕ್ಷೇತ್ರ ತಮಗೇ ಕೊಡಿಸುವಂತೆ ಅಳಲು ತೋಡಿಕೊಂಡಿದ್ದರು.
ಖರ್ಗೆ ಭೇಟಿ: ಮುದ್ದಹನುಮೇಗೌಡಬೆಂಬಲಿಗರು ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಭೇಟಿ ಮಾಡಿದರು.
ಸಚಿವ ವೆಂಕಟರಮಣಪ್ಪ, ಮಾಜಿ ಶಾಸಕರಾದ ಕೆ. ಎನ್. ರಾಜಣ್ಣ, ಕೆ. ಷಡಕ್ಷರಿ ಸೇರಿ ನೂರಾರು ಬೆಂಬಲಿಗರು ಖರ್ಗೆ ಅವರನ್ನು ಭೇಟಿ ಮಾಡಿ, ತುಮಕೂರು ಕ್ಷೇತ್ರ ಉಳಿಸಿಕೊಳ್ಳುವಂತೆ ಖರ್ಗೆ ಮೇಲೆ ಒತ್ತಡ ಹಾಕಿದ್ದರು. 'ಹಾಲಿ ಸಂಸದರ ಕ್ಷೇತ್ರ ಬಿಟ್ಟು ಕೊಡುವುದಿಲ್ಲ ಎಂದು ಹೇಳಿ, ಕೊನೆಗೆ ಬಿಟ್ಟು ಕೊಟ್ಟಿದ್ದು ಏಕೆ' ಎಂದೂ ಪ್ರಶ್ನಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.