ADVERTISEMENT

ರಾಜ್ಯ ಸರ್ಕಾರ ಬಡವರ ಪಿಂಚಣಿ ಹಣದಲ್ಲಿ ಉಳಿತಾಯ ಮಾಡಲು ಹೊರಟಿದೆ: ಸುನಿಲ್ ಕುಮಾರ್

ಸಂಧ್ಯಾ ಸುರಕ್ಷಾ ಮತ್ತು ವೃದ್ಧಾಪ್ಯ ವೇತನ ಯೋಜನೆಯಡಿ 23.19 ಲಕ್ಷ ಫಲಾನುಭವಿಗಳನ್ನು ಅರ್ನಹರೆಂದು ಪಿಂಚಣಿ ರದ್ದು

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 11:29 IST
Last Updated 16 ಜೂನ್ 2025, 11:29 IST
   

ಬೆಂಗಳೂರು: ಸಂಧ್ಯಾ ಸುರಕ್ಷಾ ಮತ್ತು ವೃದ್ಧಾಪ್ಯ ವೇತನ ಯೋಜನೆಯಡಿ 23.19 ಲಕ್ಷ ಫಲಾನುಭವಿಗಳನ್ನು ಅರ್ನಹರೆಂದು ಘೋಷಿಸಿದ್ದು, ಇವರ ಪಿಂಚಣಿಯನ್ನು ರದ್ದುಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆ ಆದೇಶ ನೀಡಿದೆ.

ಬಿಜೆಪಿ ಶಾಸಕ ವಿ.ಸುನಿಲ್‌ಕುಮಾರ್‌ ಅವರು ಆದೇಶದ ಪ್ರತಿಯನ್ನು ‘ಎಕ್ಸ್‌’ನಲ್ಲಿ ಟ್ಯಾಗ್‌ ಮಾಡಿ ಸರ್ಕಾರದ ಈ ಕ್ರಮವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಡವರ ಬಗ್ಗೆ ಕಾಳಜಿ, ಸಹಾನುಭೂತಿ ಇರಲಿ ಎಂದು ಜಿಲ್ಲಾಧಿಕಾರಿಗಳ ಸಭೆಯಲ್ಲಿ ಪ್ರವಚನ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಬಡವರ ಮೇಲೆ ಪ್ರಹಾರ ಮಾಡಲು ಹೊರಟಿದ್ದಾರೆ. ವಿವಿಧ ಸಾಮಾಜಿಕ ಭದ್ರತಾ ಯೋಜನೆಯ ಅಡಿ ವೃದ್ಧರು, ಅಸಹಾಯಕರು, ದುರ್ಬಲರಿಗೆ ನೀಡುತ್ತಿದ್ದ ಪಿಂಚಣಿ ಹಣದ ಮೇಲೆ 60 ಪರ್ಸೆಂಟ್‌ ಸರ್ಕಾರದ ಕಣ್ಣು ಬಿದ್ದಿದೆ ಎಂದು ಟೀಕಿಸಿದ್ದಾರೆ.

ADVERTISEMENT

ರಾಜ್ಯದಲ್ಲಿ ಒಟ್ಟು 21.87 ಲಕ್ಷ ವೃದ್ಧಾಪ್ಯ ಹಾಗೂ31.33 ಲಕ್ಷ ಸಂಧ್ಯಾ ಸುರಕ್ಷಾ ಯೋಜನೆಯ ಫಲಾನುಭವಿಗಳಲ್ಲಿ ಅನರ್ಹರನ್ನು ಹುಡುಕುವುದಕ್ಕೆ ಸರ್ಕಾರ ಮುಂದಾಗದೆ. 9.04 ಲಕ್ಷ ವೃದ್ಧಾಪ್ಯ ವೇತನದಾರರು 14.15 ಲಕ್ಷ ಸಂಧ್ಯಾ ಸುರಕ್ಷಾ ಕಾರ್ಡ್‌ಗಳನ್ನು ರದ್ದುಗೊಳಿಸುವುದಕ್ಕೆ ಸಂಬಂಧಿಸಿದಂತೆ ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದಿದ್ದಾರೆ.

ತಮ್ಮದು ಆಲಿಸುವ ಸರ್ಕಾರ ಎಂದು ಜಾಹೀರಾತಿನಲ್ಲಿ ಫೋಸು ಕೊಡುವ ಕಾಂಗ್ರೆಸ್‌ ಸರ್ಕಾರ ಬಡವರ ಪಿಂಚಣಿ ಹಣದಲ್ಲಿ ಉಳಿತಾಯ ಮಾಡಲು ಹೊರಟಿದೆ. ಸರ್ಕಾರ ದಿವಾಳಿ ಅಂಚಿಗೆ ತಲುಪಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.