ಬೆಂಗಳೂರು: ಜೆಡಿಎಸ್– ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಎಂ.ಬಿ. ಪಾಟೀಲರ ಆಪ್ತ ಸಹಾಯಕ ಸೇರಿದಂತೆ 167ಪ್ರಭಾವಿ ನಾಯಕರು, ಅವರ ಆಪ್ತರ ಫೋನ್ ಕರೆಗಳನ್ನು ಕದ್ದಾಲಿಸಲಾಗಿದೆ ಎಂದು ಹೇಳಲಾಗಿದೆ.
ಇದರಿಂದಾಗಿ, ಯಾರ್ಯಾರ ಫೋನ್ಗಳನ್ನು ಕದ್ದು ಕೇಳಿಸಿಕೊಳ್ಳಲಾಗಿದೆ ಎಂಬ ಜಿಜ್ಞಾಸೆ ರಾಜಕೀಯ ವಲಯದಲ್ಲಿದೆ.
‘ಹಿಂದಿನ ಮೈತ್ರಿ ಸರ್ಕಾರದ ಕೆಲವು ಸಚಿವರು, ಮಿತ್ರ ಪಕ್ಷಗಳ ಹಲವು ನಾಯಕರು ಮತ್ತು ಆಗಿನ ವಿರೋಧ ಪಕ್ಷಗಳ ಮುಖಂಡರ ಫೋನ್ಗಳನ್ನು ಕದ್ದಾಲಿಸಲಾಗಿದೆ’ ಎಂಬ ಮಾಹಿತಿ ಸರ್ಕಾರಕ್ಕಿದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿ ಸೋಮವಾರ ಆದೇಶ ಹೊರಡಿಸಲಾಗಿದೆ.
ಪ್ರಭಾವಿ ನಾಯಕರಿಗಿಂತಲೂ ಅವರ ಆಪ್ತ ಸಹಾಯಕರು, ಆತ್ಮೀಯರ ಫೋನ್ಗಳನ್ನು ಕದ್ದಾಲಿಸಲಾಗಿದೆ. ಸಾಮಾನ್ಯವಾಗಿ ಪ್ರಮುಖ ವ್ಯಕ್ತಿಗಳು, ಮಹತ್ವದ ವಿಷಯಗಳನ್ನು ಖಾಸಗಿ ಫೋನ್ಗಳಲ್ಲಿ ಚರ್ಚಿಸುವುದು ಬಹಳ ವಿರಳ. ಹೀಗಾಗಿ, ಪ್ರಭಾವಿ ರಾಜಕಾರಣಿಗಳ ಆಪ್ತರ ಫೋನ್ಗಳನ್ನು ಕದ್ದಾಲಿಸಲಾಗಿದೆ ಎಂದುವಿಶ್ವಸನೀಯ ಮೂಲಗಳು ತಿಳಿಸಿವೆ.
ಮೈತ್ರಿ ಸರ್ಕಾರ ಪತನವಾಗುವುದಕ್ಕೆ ಕೆಲವು ತಿಂಗಳ ಮೊದಲು ಹೆಚ್ಚೆಚ್ಚು ಫೋನ್ಗಳನ್ನು ಕದ್ದಾಲಿಸಲಾಗಿದೆ. ಈ ಪ್ರಕರಣದಲ್ಲಿ , ಪೊಲೀಸ್ ಅಧಿಕಾರಿಗಳು, ಗೃಹ ಇಲಾಖೆಯ ಅಧಿಕಾರಿಗಳ ‘ತಲೆದಂಡ’ ಆಗಬಹುದು ಎನ್ನಲಾಗಿದೆ.
ಪಂತ್, ಪಾಂಡೆಗೂ ಫರಾಜ್ ಕರೆ!
ಕಾಂಗ್ರೆಸ್ ಹೈಕಮಾಂಡ್ಗೆ ಆಪ್ತನೆಂದು ನಂಬಿಸಿ ಹಿರಿಯ ಪೊಲೀಸ್ ಅಧಿಕಾರಿ ಭಾಸ್ಕರರಾವ್ ಜೊತೆ ಮಾತನಾಡಿರುವ ಫರಾಜ್ ಎಂಬ ವ್ಯಕ್ತಿ ಎರಡು ತಿಂಗಳಲ್ಲಿ ಸುಮಾರು ಆರು ಸಾವಿರ ಕರೆಗಳನ್ನು ಮಾಡಿದ್ದಾನೆ ಎಂದು ಗೊತ್ತಾಗಿದೆ.
‘ಕಮಿಷನರ್ ಹುದ್ದೆಗೆ ನಿಮ್ಮನ್ನು ನೇಮಕ ಮಾಡಿಸುತ್ತೇನೆ’ ಎಂದು ಹೇಳಿಕೊಂಡು ಅಲೋಕ್ ಕುಮಾರ್, ಭಾಸ್ಕರ್ ರಾವ್, ಅಮರ್ಕುಮಾರ್ ಪಾಂಡೆ ಮತ್ತು ಕಮಲ್ ಪಂತ್ ಅವರ ಜೊತೆಗೂ ಫರಾಜ್ ಮಾತನಾಡಿದ್ದಾನೆ. ಪಾಂಡೆ ಹಾಗೂ ಪಂತ್, ಈತನಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಇದಲ್ಲದೆ, ಮೂವರು ಯುವತಿಯರ ಜೊತೆ, ಫರಾಜ್ ಅಶ್ಲೀಲವಾಗಿ ಮಾತನಾಡಿದ್ದಾನೆ ಎಂದೂ ಮೂಲಗಳು ವಿವರಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.