ADVERTISEMENT

ಕಾಂಗ್ರೆಸ್‌ನ ಪ್ರೊಸೆಸರ್‌ ಯಾವತ್ತಿಗೂ ವೇಗವಾಗಿ ಕಾರ್ಯನಿರ್ವಹಿಸುವುದಿಲ್ಲ: ಮೋದಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 15:14 IST
Last Updated 13 ಏಪ್ರಿಲ್ 2019, 15:14 IST
   

ಬೆಂಗಳೂರು: ಪ್ರಧಾನಿ ಮೋದಿಮಂಗಳೂರಿನಲ್ಲಿ ಪ್ರಚಾರ ಭಾಷಣ ಮುಗಿಸಿ ಸಂಜೆ ಬೆಂಗಳೂರಿನ ಅರಮನೆ ಮೈದಾನಕ್ಕೆ ಬಂದರು.ಮೋದಿ ಅವರಿಗೆ ಬೆಳ್ಳಿಯ ಕಮಲ ಹಾಗೂ ಬಿಲ್ಲು ಬಾಣ ನೀಡಿ ಗೌರವಿಸಲಾಯಿತು.

‘ಬೆಂಗಳೂರು ಹಾಗೂ ಚಿಕ್ಕಬಳ್ಳಾಪುರ, ಕೋಲಾರದ ಬಂಧು ಭಗಿನಿಯರಿಗೆ ನಿಮ್ಮ ಚೌಕಿದಾರ್‌ನ ನಮಸ್ಕಾರಗಳು’ ಎನ್ನುವ ಮೂಲಕ ಭಾಷಣ ಪ್ರಾರಂಭಿಸಿದರು.

‘ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರಿಗೆ ನಮನಗಳು. ನನ್ನ ಮಿತ್ರ ಅನಂತ್‌ಕುಮಾರ್‌ ಹಾಗೂ ವಿಜಯ್‌ ಕುಮಾರ್‌’ ಅವರನ್ನು ನೆನೆದು ಶ್ರದ್ಧಾಂಜಲಿ ಅರ್ಪಿಸಿದರು.

ADVERTISEMENT

ಯಾರಾದ್ದರೂ ಯೋಚಿಸಿದ್ದಿರಾ? ಮೈತ್ರಿ ಸರ್ಕಾರದಿಂದಕರ್ನಾಟಕಕ್ಕೆ ಇಂಥ ದುಸ್ಥಿತಿ ಬರುತ್ತದೆಂದು... ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಅಮೆರಿಕದಂತಹ ರಾಷ್ಟ್ರಗಳು ಮಾಡುವಂತಹ ಕೆಲಸ ನಾವು ಯಾಕೆ ಮಾಡಲಾಗುತ್ತಿಲ್ಲ, ಭಾರತವನ್ನು ಯಾರು ತಡೆಯುತ್ತಿದ್ದಾರೆ ಎಂದು ನೀವೇ ಚರ್ಚೆಸುತ್ತಿದ್ದರೆ ತಾನೇ? ಈಗ ಅದು ಸಾಧ್ಯವಾಯಿತು. ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಆದರೆ, ಕಾಂಗ್ರೆಸ್‌–ಜೆಡಿಎಸ್‌ ಸೇರಿದಂತೆ ಕೆಲವು ಪಕ್ಷಗಳಿಗೆ ಇದರಿಂದ ತೊಂದರೆಗೆ ಸಿಲುಕಿದಂತೆ ಆಡುತ್ತಿವೆ.

ಭಾರತದ ಹೊಸ ರೀತಿ ಮತ್ತು ಹೊಸ ನೀತಿಗಳ ಎದುರಿಗೆ ಕಾಂಗ್ರೆಸ್ ನಿಲ್ಲಲು ಸಾಧ್ಯವಾಗುತ್ತಿಲ್ಲ. ವಾಯುವಲಯದಲ್ಲಿ, ಅಂತರಿಕ್ಷದಲ್ಲಿ ಮಾಡುತ್ತಿರುವ ಸಾಧನೆ ಅಪಾರವಾದುದು. ಉಪಗ್ರಹ ನಿಗ್ರಹಿಸುವ ಕ್ಷಿಪಣಿ ಪರೀಕ್ಷೆಯಲ್ಲಿ ಯಶಸ್ವಿಯಾದೆವು. ಇದನ್ನು ದೇಶಕ್ಕೆ ತಿಳಿಸಿದನ್ನು ವಿರೋಧ ಪಕ್ಷಗಳು ಟೀಕಿಸುತ್ತಿವೆ. ಆಗಿದ್ದು ಆಯಿತು, ಅದನ್ನು ನೀವು ಟಿವಿ ಮುಂದೆ ಬಂದು ಹೇಳಿದ್ದೇಕೆ; ಈಗ ಹೇಳಿದ್ದೇಕೆ. ಗುಟ್ಟಾಗಿ ಇಡಬೇಕಿತ್ತು...ಎನ್ನುತ್ತಿವೆ.

ಸರ್ಜಿಕಲ್‌ ಸ್ಟ್ರೈಕ್‌, ವಾಯುದಾಳಿ, ಉಪಗ್ರಹ ನಿಗ್ರಹ ಪರೀಕ್ಷೆಗಳನ್ನು ಮಾಡಿದೆವು. ಈಗ ಇಡೀ ಜಗತ್ತು ನಮ್ಮ ಜತೆಗಿದೆ. ಹಿಂದೆ ರಷ್ಯಾ ನಮ್ಮೊಂದಿತ್ತು, ಇಡೀ ಜಗತ್ತು ಪಾಕಿಸ್ತಾನದೊಂದಿಗಿತ್ತು. ಇಂದು, ಪಾಕಿಸ್ತಾನ ಮತ್ತು ಚೀನಾಒಂದಾಗಿವೆ; ಇಡೀ ಜಗತ್ತು ಭಾರತದೊಂದಿಗಿದೆ.

ಕಾಂಗ್ರೆಸ್‌ನ ಪ್ರೊಸೆಸರ್‌ ಯಾವತ್ತಿಗೂ ವೇಗವಾಗಿ ಕಾರ್ಯವಹಿಸುವುದಿಲ್ಲ. ಅದರ ಸಾಫ್ಟ್‌ವೇರ್‌ ಹಾಳಾಗಿದೆ...ಅದರ ಡಕೋಸ್ಲಾ(ಕಾಂಗ್ರೆಸ್‌ಪ್ರಣಾಳಿಕೆ ಸುಳ್ಳಿನ ಸಂತೆ)ಪತ್ರವೂ ಇಂಥದ್ದೇ ಸ್ಥಿತಿ.

ಜಮ್ಮು ಕಾಶ್ಮೀರಕ್ಕಾಗಿ ಸಾಕಷ್ಟು ಯೋಧರು ಹುತಾತ್ಮರಾಗಿದ್ದಾರೆ. ’ಜಮ್ಮು ಕಾಶ್ಮೀರದಿಂದ ಸೇನೆಯನ್ನೂ ತೆಗೆಯುತ್ತೇವೆ..’– ಥೇಟ್‌ ಪಾಕಿಸ್ತಾನ ನೀಡುವ ಭರವಸೆಯಂತಿದೆ ಕಾಂಗ್ರೆಸ್‌ ನೀಡುತ್ತಿರುವ ಭರವಸೆ.

ಒಬ್ಬ ದೆಹಲಿಯಲ್ಲಿ ಹಾಗೂ ಮತ್ತೊಬ್ಬ ಜಮ್ಮುಕಾಶ್ಮೀರದಲ್ಲಿ ಕುಳಿತಿರುವ ಪ್ರಧಾನಿ ಇರುವಂತೆ ಮಾಡುವುದು ಅವರ ಉದ್ದೇಶ. ದೇಶಕ್ಕೆ ಇಬ್ಬರು ಪ್ರಧಾನಿ ಬೇಕ? ಕರ್ನಾಟಕದ ಯೋಧರೂ ಸಹ ಕಾಶ್ಮೀರಕ್ಕಾಗಿ ಹುತಾತ್ಮರಾಗಿದ್ದಾರೆ.

ದೇಶದ್ರೋಹದ ಕಾನೂನು ತೆಗೆದು ಹಾಕುತ್ತೇವೆ. ಯೋಧರ ಮೇಲೆ ಉಗ್ರನೊಬ್ಬ ಕಲ್ಲು ಹೊಡೆದರೆ, ಅದು ದೇಶದ್ರೋಹವೋ ಅಲ್ಲವೋ? ಅವರನ್ನು ನಿಯಂತ್ರಿಸುವುದು ಬೇಕಲ್ಲವೇ? ಇಂಥ ಕಾನೂನು ಇಲ್ಲದಂತೆ ಮಾಡುವ ಕಾಂಗ್ರೆಸ್‌ನ್ನು ನೀವು ಬೆಂಬಲಿಸುವಿರೇ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ತನ್ನ ಪರಿವಾರದವರಿಗಾಗಿ ಎಷ್ಟೆಲ್ಲ ಸ್ಮಾರಕಗಳನ್ನು ಮಾಡಿದರು, ಎಷ್ಟೆಲ್ಲ ಕಟ್ಟಡಗಳನ್ನು ಕಟ್ಟಿದರು, ಸಂಪತ್ತು ರೂಪಿಸಿಕೊಂಡರು, ಆದರೆ ಯುದ್ಧ ಸ್ಮಾರಕವನ್ನು ನಿರ್ಮಿಸಲಿಲ್ಲ. ಮೋದಿ ದೆಹಲಿಯಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ನಿರ್ಮಿಸುವಲ್ಲಿ ಸಫಲರಾಗಿದ್ದಾರೆ. ಯಾವತ್ತಿಗೇ ದೆಹಲಿಗೆ ತೆರಳಿದರೂ ಅಲ್ಲಿಗೆ ಭೇಟಿ ನೀಡಿ ಕೆಲಹೊತ್ತು ಇದ್ದು ಬನ್ನಿ ಎಂದು ಆಹ್ವಾನ ನೀಡಿದರು.

ಹಿಂದೆ ಒಂದು ಜಿಬಿ ಡಾಟಾಗೆ ನೂರಾರು ರೂಪಾಯಿ ನೀಡಬೇಕಿತ್ತು, ಇಂದು ಹತ್ತು–ಹದಿನೈದು ರುಪಾಯಿಗಳಿಗೆ ಒಂದು ಜಿಬಿ ಡಾಟಾ ದೊರೆಯುತ್ತಿದೆ. ಇದು ಡಿಜಿಟಲ್‌ ಇಂಡಿಯಾದ ಫಲ. ರುಪೇ ಕಾರ್ಡ್, ಭೀಮ್‌ ಆ್ಯಪ್‌ ಸಿಂಗಾಪುರದಲ್ಲಿ ನಡೆಯುತ್ತದೆ. ಇದು ಮೇಕ್‌ ಇನ್ ಇಂಡಿಯಾದ ಸಫಲತೆಯಾಗಿದೆ.

ವೇದಿಕೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರ ರಾವ್, ಅಭ್ಯರ್ಥಿಗಳಾದ ಡಿ.ವಿ.ಸದಾನಂದ ಗೌಡ, ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್, ಶಾಸಕರಾದ ಆರ್.ಅಶೋಕ್, ಅರವಿಂದ ಲಿಂಬಾವಳಿ, ವಿ.ಸೋಮಣ್ಣ , ಹಿರಿಯ ನಾಯಕ ಎಸ್.ಎಂ.ಕೃಷ್ಣ ಇದ್ದರು. ಶುಕ್ರವಾರದಿಂದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿರುವ ತೇಜಸ್ವಿನಿ ಅನಂತಕುಮಾರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.