ರಾಯಚೂರು: ‘ಸಂವಿಧಾನ ವಿರೋಧಿಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇನೆ.ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್ ಸೇರಿದಂತೆ ದೇಶವನ್ನು ನಾಶ ಮಾಡುವ ಯಾವ ಪಕ್ಷಕ್ಕೂ ಬೆಂಬಲ ನೀಡುವುದಿಲ್ಲ’ ಎಂದು ಕ್ರಾಂತಿಕಾರಿ ಕವಿ ಗದ್ದರ್ ಹೇಳಿದರು.
‘ಸಂವಿಧಾನ ಉಳಿಸುವುದಾಗಿ ಕಾಂಗ್ರೆಸ್ ನೇತೃತ್ವದ ಪಕ್ಷಗಳು ಮುಂದೆ ಬಂದಿವೆ. ಸಂವಿಧಾನದ ಪ್ರಕಾರ ಆಡಳಿತ ಮಾಡುವವರಿಗೆ ಬೆಂಬಲ ನೀಡಲಾಗುವುದು. ಆದರೆ, ಕಾಂಗ್ರೆಸ್ ಸಂಬಂಧದ ಬಗ್ಗೆ ಹಲವು ಸಂಶಯಗಳು ವ್ಯಕ್ತವಾಗಿವೆ. ಸಿದ್ಧಾಂತವನ್ನು ಬಲಿಕೊಟ್ಟು ಕಾಂಗ್ರೆಸ್ ಅನ್ನು ಅಪ್ಪಿಕೊಳ್ಳಲ್ಲ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಮನುವಾದಿ ಸಂಸ್ಕೃತಿಯ ಆಡಳಿತ ದೇಶಕ್ಕೆ ಅಪಾಯಕಾರಿಯಾಗಿದೆ. ಆದ್ದರಿಂದ ಬಿಜೆಪಿ ಬೆಂಬಲಿತ ಒಕ್ಕೂಟವನ್ನು ವಿರೋಧಿಸುತ್ತೇನೆ’ ಎಂದರು.
‘ಆರ್ಥಿಕವಾಗಿ ಹಿಂದುಳಿದಿರುವ ಮೇಲ್ವರ್ಗದವರಿಗೆ ಮೀಸಲಾತಿ ನೀಡುವುದಕ್ಕೆ ವಿರೋಧವಿಲ್ಲ. ಆದರೆ, ಕೇಂದ್ರ ಸರ್ಕಾರ ರಾಜಕೀಯ ಉದ್ದೇಶದಿಂದ ಶೇ 10ರಷ್ಟು ಮೀಸಲಾತಿ ನೀಡಿದೆ. ಸಂವಿಧಾನದಲ್ಲಿ ಇದಕ್ಕೆ ಅವಕಾಶವಿಲ್ಲ’ ಎಂದರು.
‘ಸಂವಿಧಾನದ ಆಶಯ ಶೇ25 ರಷ್ಟಾದರೂಜಾರಿಯಾಗಿದ್ದರೆ ದೇಶದಲ್ಲಿ ನಕ್ಸಲ್ ಚಟುವಟಿಕೆ ಇರುತ್ತಿರಲಿಲ್ಲ. ಇದನ್ನು ಹಿಂದೆಯೇ ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ದೇಶದಲ್ಲಿ ಹೆಚ್ಚಿನ ತ್ಯಾಗ ಮಾಡಿದವರು ನಕ್ಸಲರು ಮಾತ್ರ’ ಎಂದು ತಿಳಿಸಿದರು.
‘ನನಗೆ 71 ವರ್ಷ ವಯಸ್ಸಾಗಿದ್ದು, ತೆಲಂಗಾಣದಲ್ಲಿ ಈಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.