ADVERTISEMENT

ಓಮ್ನಿಯಲ್ಲಿ 15 ಮಕ್ಕಳು! ಎಚ್ಚರಿಕೆ ನೀಡಿದ ಕಮಿಷನರ್‌

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 20:10 IST
Last Updated 29 ಜನವರಿ 2020, 20:10 IST
   

ಬೆಂಗಳೂರು: ‌ಹದಿನೈದು ಮಕ್ಕಳನ್ನು ಕರೆದೊಯ್ಯುತ್ತಿರುವ ಓಮ್ನಿ ಕಾರೊಂದರ ಫೋಟೊವನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡುವ ಮೂಲಕ ಪೊಲೀಸ್‌ ಕಮಿಷನರ್‌ ಭಾಸ್ಕರ್‌ ರಾವ್, ಶಾಲಾ ಆಡಳಿತ ಮಂಡಳಿ ಮತ್ತು ಪೋಷಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

‘4+1 ಜನರ ಸಾಮರ್ಥ್ಯದ ಓಮ್ನಿಯಲ್ಲಿ 15 ಮಕ್ಕಳು ಪ್ರಯಾಣಿಸುತ್ತಿದ್ದಾರೆ. ಈ ವಾಹನವನ್ನು ಪೊಲೀಸು ತಡೆದರೆ ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿ ಆಕ್ರೋಶ ವ್ಯಕ್ತಪಡಿಸುತ್ತದೆ. ಈ ವಾಹನದಲ್ಲಿರುವ ಸಿಲಿಂಡರ್ ಮೇಲೆ ಮಕ್ಕಳು ಕುಳಿತಿದ್ದಾರೆ. ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಕೊಂಡೊಯ್ಯುವ ವಾಹನಗಳು ಅಪಘಾತಕ್ಕೊಳಗಾಗುವ ಸಾಧ್ಯತೆಗಳಿರುತ್ತವೆ. ಒಂದು ವೇಳೆ ಅಪಘಾತ ಸಂಭವಿಸಿದರೆ ಯಾರು ಹೊಣೆ’ ಎಂದು ಕಮಿಷನರ್‌ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಈ ಟ್ವೀಟ್‌ಗೆ ಸುಮಾರು ಆರು ಸಾವಿರ ಮಂದಿ ಮೆಚ್ಚುಗೆ (ಲೈಕ್)‌ ವ್ಯಕ್ತಪಡಿಸಿದ್ದಾರೆ. ಎರಡು ಸಾವಿರಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ನಿಮ್ಮ ಈ ಕಾರ್ಯಕ್ಕೆ ಅಭಿನಂದನೆಗಳು. ಈ ಕಾರ್ಯಕ್ಕೆ ನಾವೆಲ್ಲ ನಿಮ್ಮೊಂದಿಗಿದ್ದೇವೆ. ಲಕ್ಷಾಂತರರೂಪಾಯಿ ಪಡೆಯುವ ಶಾಲಾ ಆಡಳಿತ ಮಂಡಳಿಯವರು ಮಕ್ಕಳ ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳುವುದಿಲ್ಲ. ಇನ್ನು ಪೋಷಕರು ಹಣ ಉಳಿತಾಯ ಮಾಡಲು ಮಕ್ಕಳನ್ನು ಕುರಿಗಳಂತೆ ತುಂಬಿರುವ ವಾಹನಗಳಲ್ಲೇ ಕಳುಹಿಸುತ್ತಾರೆ. ಶಾಲೆಗಳು ಮಕ್ಕಳ ಸುರಕ್ಷತೆ ಬಗ್ಗೆ ಚಿಂತಿಸಬೇಕು. ಉತ್ತಮ ವಾಹನಗಳನ್ನು ಕಲ್ಪಿಸಬೇಕು. ಪೊಲೀಸರು ತಮ್ಮ ಕಾರ್ಯವನ್ನು ನಿರಂತರವಾಗಿ ಮುಂದುವರಿಸಬೇಕು’ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.