ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಪರಸ್ಪರ ವಾಕ್ಸಮರ ಶನಿವಾರ ತಾರಕಕ್ಕೇರಿದ್ದು, ‘ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರರಾಗಿರಲು ಇಚ್ಛೆ ಇಲ್ಲದಿದ್ದರೆ, ಬೆಂಬಲ ವಾಪಸ್ ಪಡೆದುಕೊಂಡು ಹೋಗಿ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ವಿಶ್ವನಾಥ್ ಕಾಂಗ್ರೆಸ್ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ನಾಯಕ ಎಂ.ವೀರಪ್ಪ ಮೊಯಿಲಿ ಚಿಕ್ಕಬಳ್ಳಾಪುರದಲ್ಲಿಮಾತನಾಡುವ ಸಂದರ್ಭದಲ್ಲಿ, ‘ದೇವೇಗೌಡರು ಒಂದೊಂದು ದಿನ ಒಂದೊಂದು ರೀತಿ ಮಾತನಾಡುತ್ತಾರೆ. ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದ್ದರಿಂದಲೇ ಕಾಂಗ್ರೆಸ್ ಹೀನಾಯ ಸೋಲು ಕಂಡಿತು’ ಎಂಬ ಹೇಳಿಕೆ ನೀಡಿದ್ದರು.
ಮೊಯಿಲಿ ಹೇಳಿಕೆಗೆ ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ ವಿಶ್ವನಾಥ್, ‘ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಮುಖಂಡರು ದಿನಕ್ಕೊಬ್ಬರಂತೆ ಸಮ್ಮಿಶ್ರ ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ನಮ್ಮ ಜತೆ ಸುಮ್ಮನೆ ಇರುವುದಾದರೆ ಇರಿ. ಇಲ್ಲವಾದರೆ ಬೆಂಬಲ ವಾಪಸ್ ಪಡೆಯಿರಿ. ಅದನ್ನು ಬಿಟ್ಟು ದಿನಕ್ಕೊಂದು ಮಾತನಾಡುವುದು ಬೇಡ. ಸಂಬಂಧಕ್ಕಿಂತ ಸಂಕಷ್ಟವೇ ಜಾಸ್ತಿಯಾಗಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.