ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಕಾಂಗ್ರೆಸ್ ಪಕ್ಷವು ನಡೆಸಲು ಉದ್ದೇಶಿಸಿರುವ ಪಾದಯಾತ್ರೆ ಕುರಿತು ಬಿಜೆಪಿ ಕಿಡಿಕಾರಿದೆ.ಈ ಹಿಂದೆ ಕೃಷ್ಣ ಯೋಜನೆ ವಿಚಾರವಾಗಿ ಸುಳ್ಳುಗಳ ಸರಮಾಲೆ ಎಣೆದಿದ್ದ ಕಾಂಗ್ರೆಸ್ ಇದೀಗ ಮೆಕೆದಾಟು ವಿಚಾರದಲ್ಲಿ ಸುಳ್ಳಿನ ರಾಜಕಾರಣ ಆರಂಭಿಸಿದೆ ಎಂದು ಆರೋಪಿಸಿದೆ.
ಟ್ವಿಟರ್ನಲ್ಲಿ#ಬುರುಡೆರಾಮಯ್ಯ ಟ್ಯಾಗ್ ಬಳಸಿಸರಣಿ ಟ್ವೀಟ್ಗಳನ್ನು ಮಾಡಿರುವ ಬಿಜೆಪಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದೆ.
'ನೆಲ-ಜಲದ ವಿಚಾರವಾಗಿಯೂ ಸಿದ್ದರಾಮಯ್ಯಇಷ್ಟು ವರ್ಷ ಹೇಳಿದ್ದೆಲ್ಲವೂ ಬರೀ ಸುಳ್ಳು.ಕಾಂಗ್ರೆಸ್ ನಡಿಗೆ –ಕೃಷ್ಣೆಯ ಕಡೆಗೆ ಎಂದು 2013ರಲ್ಲಿ ಕಾಂಗ್ರೆಸ್ಆಯೋಜಿಸಿದ್ದ ಪಾದಯಾತ್ರೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಹೇಳಿದ ಸುಳ್ಳುಗಳನ್ನು ನೆನಪಿಸಬೇಕೇ?ಸುಳ್ಳಿನ ಸರಮಾಲೆ ರೂಪಿಸಿಯೇ ಇವರು ಅಧಿಕಾರಕ್ಕೆ ಬಂದಿದ್ದು' ಎಂದು ಹೇಳಿದೆ.
ಮುಂದುವರಿದು, 'ಸಿದ್ದರಾಮಯ್ಯನವರೇ,ಕಾಂಗ್ರೆಸ್ ನಡಿಗೆ –ಕೃಷ್ಣೆಯ ಕಡೆಗೆ ಪಾದಯಾತ್ರೆ ಸಂದರ್ಭದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೆ ವಾರ್ಷಿಕ ಹತ್ತು ಸಾವಿರ ಕೋಟಿ ಅನುದಾನ ನೀಡುತ್ತೇನೆ ಎಂದು ಭಾಷಣ ಬಿಗಿದಿರಿ.ಅಂದರೆ, ಐದು ವರ್ಷದಲ್ಲಿ ಐವತ್ತು ಸಾವಿರ ಕೋಟಿ! ಆದರೆ ನೀವು ಕೊಟ್ಟಿದ್ದೆಷ್ಟು?' ಎಂದು ಪ್ರಶ್ನಿಸಿದೆ.
'ಕೃಷ್ಣಾ ಮೇಲ್ದಂಡೆಗೆ ವಾರ್ಷಿಕ ಹತ್ತು ಸಾವಿರ ಕೋಟಿ ಅನುದಾನ ಅಸಾಧ್ಯ ಎಂದು ಪತ್ರಿಕೆಗಳು ಅಂದೇ ಬರೆದಿದ್ದವು.ಆದರೆ, ಕೂಡಲಸಂಗಮದ ಸತ್ಯತಾಣದಲ್ಲಿ ನಿಂತು ಭಾಷಣ ಮಾಡುವಾಗ ನೀವು ಮಾಧ್ಯಮಗಳನ್ನೇ ತರಾಟೆಗೆ ತೆಗೆದುಕೊಂಡಿರಿ. ಅನುದಾನ ನೀಡಲು ಸಾಧ್ಯವಿದೆ ಎಂದಿರಿ.ಆದರೆ, ಅಧಿಕಾರಕ್ಕೆ ಬಂದಾಗ ಕೃಷ್ಣೆಯನ್ನು ಮರೆತಿರಿ' ಎಂದು ತಿವಿದಿದೆ.
'2013 ರಲ್ಲಿ ಮುಖ್ಯಮಂತ್ರಿಯಾದಾಗ, ತಾನು ಕೃಷ್ಣಾ ನದಿಯ ತಟದಲ್ಲಿ ನಿಂತು ಆಡಿದ ಮಾತುಗಳನ್ನು #ಬುರುಡೆರಾಮಯ್ಯ ಸಂಪೂರ್ಣ ಮರೆತರು. ‘ವರ್ಷಕ್ಕೆ ಅಲ್ಲಪ್ಪ, ಅದು ಐದು ವರ್ಷಕ್ಕೆ ಹತ್ತು ಸಾವಿರ ಕೋಟಿ‘ ಎಂದಿದ್ದು ಎಂದು ವಿಷಯಾಂತರ ಮಾಡಿದರು.ದಾಖಲೆ ಮುಂದಿಟ್ಟಾಗ ‘ಮತಾಂತರ ಕಾಯ್ದೆ‘ ಸಂದರ್ಭದಲ್ಲಿ ಆದಂತೆ ಪೇಚಿಗೆ ಸಿಲುಕಿದ್ದು ಮರೆತು ಹೋಯ್ತೆ?' ಎಂದು ವ್ಯಂಗ್ಯವಾಡಿದೆ.
'ಈಗ ಮೇಕೆದಾಟು ವಿಚಾರದಲ್ಲಿ ಸಿದ್ದರಾಮಯ್ಯ ಅವರುಸುಳ್ಳಿನ ರಾಜಕಾರಣ ಆರಂಭಿಸಿದ್ದಾರೆ.ಮೇಕೆದಾಟು ನಮ್ಮ ಹಕ್ಕು ಎಂದು ರಾಜ್ಯ ಸರ್ಕಾರ ಹಲವು ಬಾರಿ ಪ್ರತಿಪಾದಿಸಿದ್ದರೂ ಕಾಂಗ್ರೆಸ್ ಪಕ್ಷದನಾಯಕರು ಸುಳ್ಳಿನ ಮೆರವಣಿಗೆ ಹೊರಟಿದ್ದಾರೆ. ಎಷ್ಟೆಂದರೂ ಸುಳ್ಳೇ ನಿಮ್ಮ ಮನೆ ದೇವರಲ್ಲವೇ' ಎಂದು ಆಕ್ರೋಶ ವ್ಯಕ್ತಪಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.