ADVERTISEMENT

ಪತ್ರಕರ್ತ ಮಂಜುನಾಥ್ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಿಸಿದ ಸಿಎಂ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 5:33 IST
Last Updated 21 ನವೆಂಬರ್ 2019, 5:33 IST
ಮಂಜುನಾಥ್
ಮಂಜುನಾಥ್   

ಬೆಂಗಳೂರು:ಬುಧವಾರ ರಾತ್ರಿ ಬೈಕ್‌ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ‘ಪ್ರಜಾವಾಣಿ’ಯ ಹಾವೇರಿ ಜಿಲ್ಲಾಹಿರಿಯವರದಿಗಾರ ಎಂ.ಸಿ. ಮಂಜುನಾಥ್‌ (30) ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮಂಜುನಾಥ್ ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ₹5 ಲಕ್ಷ ಪರಿಹಾರಘೋಷಣೆ ಮಾಡಿದ್ದಾರೆ.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಸಿಎಂಗೆ ಪತ್ರ

ADVERTISEMENT

ಅಪಘಾತದಲ್ಲಿ ಮೃತಪಟ್ಟ ಹಾವೇರಿ ಜಿಲ್ಲಾ ಪ್ರಜಾವಾಣಿ ವರದಿಗಾರ ಎಂ.ಸಿ.ಮಂಜುನಾಥ ಅವರ ಶವವನ್ನು ಟಾಟಾ ಏಸ್ ವಾಹನದಲ್ಲಿ, ಪ್ರಾಣಿಗಳಿಗಿಂತ ನಿಕೃಷ್ಟವಾಗಿ ಸಾಗಿಸಿರುವುದು ಖಂಡಿಸಿಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದೆ.

ಪತ್ರ ಹೀಗಿದೆ

ಮಾನ್ಯರೇ,

ಅಪಘಾತದಲ್ಲಿ ಮೃತಪಟ್ಟ ಹಾವೇರಿ ಜಿಲ್ಲಾ ಪ್ರಜಾವಾಣಿ ವರದಿಗಾರ ಎಂ.ಸಿ.ಮಂಜುನಾಥ ಅವರ ಶವವನ್ನು ಟಾಟಾ ಏಸ್ ವಾಹನದಲ್ಲಿ, ಪ್ರಾಣಿಗಳಿಗಿಂತ ನಿಕೃಷ್ಟವಾಗಿ ಸಾಗಿಸಿರುವುದು ಮಾನವಂತವರ ಹೃದಯ ಕದಡಿದೆ. ಈ ಘಟನೆ ಅತ್ಯಂತ ನೋವಿನ ಮತ್ತು ನಾಚಿಕೆಗೇಡಿನ ಹಾಗೂ ಖಂಡನಾರ್ಹ ಸಂಗತಿ.

ಎರಡು ವರ್ಷದ ಹಿಂದೆ ಹೀಗೆ ಅಪಘಾತದಲ್ಲಿ ಮೃತಪಟ್ಟ ಪತ್ರಕರ್ತ ಮೌನೇಶ ಅವರ ಶವವನ್ನು ಲಾರಿಯಲ್ಲಿ ಸಾಗಿಸಿದ್ದು ತಲೆತಗ್ಗಿಸುವ ಘಟನೆ ಮರೆಯುವ ಮುನ್ನವೇ ಮತ್ತೊಂದು ಘಟನೆ ನಡೆದದ್ದು ಕಳವಳಕಾರಿ ಸಂಗತಿ.

ಇಬ್ಬರು ಪತ್ರಕರ್ತರ ಸಾವಿನ ಸಂದರ್ಭದ ಘಟನೆಗಳು ಪೊಲೀಸ್ ವ್ಯವಸ್ಥೆ ತಮಗೆ ತಾವೇ ಮಾಡಿಕೊಂಡ ಅವಮಾನ.

ಸಾವು, ಒಂದು ಗೌರವ, ಘನತೆ ಬಯಸುತ್ತದೆ. ಸಾವನ್ನು ಅವಮಾನಿಸಿದ ಘಟನೆಗೆ ಕಾರಣರಾದವರ ಮೇಲೆ ತನಿಖೆ ನಡೆಸಿ, ಕಾನೂನು ಕ್ರಮ ಜರುಗಿಸಬೇಕು.

ಮುಂದೆ ಯಾವುದೇ ಇಂತಹ ಅಮಾನವೀಯ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಗೃಹ ಇಲಾಖೆ ಮೂಲಕ ಸುತ್ತೋಲೆ ಹೊರಡಿಸಬೇಕು.

ಶಿವಾನಂದ ತಗಡೂರು
ಅಧ್ಯಕ್ಷರು,
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ), ಬೆಂಗಳೂರು

ಪತ್ರಕರ್ತ ಮಂಜುನಾಥ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

ಬೆಂಗಳೂರು: ಪ್ರಜಾವಾಣಿ ಪತ್ರಿಕೆಯ ಹಾವೇರಿ ಜಿಲ್ಲಾ ವರದಿಗಾರ ಎಂ.ಸಿ. ಮಂಜುನಾಥ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮಂಜುನಾಥ್ ಅವರ ಅಕಾಲಿಕ ನಿಧನದಿಂದ ಒಬ್ಬ ಯುವ, ಉತ್ಸಾಹಿ ಪತ್ರಕರ್ತನನ್ನು ಕಳೆದುಕೊಂಡಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬದವರಿಗೆ ಈ ಆಘಾತ ಸಹಿಸುವ ಶಕ್ತಿ ನೀಡಲಿ ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.