ADVERTISEMENT

ಹೆಲಿಕಾಪ್ಟರ್‌ಗಳು ಬಂದಿದ್ದರಿಂದ ಮೋದಿ ಅವರಿಗೆ ಹುಲಿಗಳು ಕಾಣಿಸಲಿಲ್ಲ: ಸಿಂಹ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2023, 10:56 IST
Last Updated 10 ಏಪ್ರಿಲ್ 2023, 10:56 IST
ಪ್ರತಾಪ್ ಸಿಂಹ
ಪ್ರತಾಪ್ ಸಿಂಹ   

ಮೈಸೂರು: ‘ವಾಯುದಳದ ಮೂರು ಹೆಲಿಕಾಪ್ಟರ್‌ಗಳು ಏಕಕಾಲಕ್ಕೆ ಬಂದಿಳಿದಿದ್ದರಿಂದ ಉಂಟಾದ ಶಬ್ದದಿಂದಾಗಿ ಪ್ರಾಣಿಗಳು ದಟ್ಟ ಅರಣ್ಯದೊಳಗೆ ಹೋಗಿವೆ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಂಡೀಪುರದಲ್ಲಿ ಹುಲಿಗಳು ಕಾಣಿಸಿಲ್ಲ. ಈ ಸಾಮಾನ್ಯ ಜ್ಞಾನವೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಇಲ್ಲವೇ?’ ಎಂದು ಸಂಸದ ಪ್ರತಾಪ ಸಿಂಹ ಕೇಳಿದರು.

ಬಂಡೀಪುರದಲ್ಲಿ ಪ್ರಧಾನಿಗೆ ಹುಲಿ ಕಾಣಲಿಲ್ಲ ಎಂಬ ಸಿದ್ದರಾಮಯ್ಯ ಟೀಕೆಗೆ ಇಲ್ಲಿ ತಿರುಗೇಟು ನೀಡಿದ ಪ್ರತಾಪ, ‘ಗುಜರಾತ್‌ನ ಸಿಂಹ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದಾಗಲೆಲ್ಲಾ ಕಾಂಗ್ರೆಸಿಗರು ಯಾಕೆ ಊಳಿಡುತ್ತಾರೆ? ಸಿದ್ದರಾಮಯ್ಯ ಎದೆಯಲ್ಲಿ ಭಯವಿರಬೇಕು’ ಎಂದು ಟೀಕಿಸಿದರು.

‘ಪ್ರಧಾನಿ ವನ್ಯಜೀವಿಗಳ ಕಾಳಜಿಯಿಂದಾಗಿ ಬಂಡೀಪುರಕ್ಕೆ ಬಂದಿದ್ದರು. ಮುಖ್ಯಮಂತ್ರಿಯಾಗಿದ್ದ ನೀವು ಒಂದು ದಿನವೂ ಬಂಡೀಪುರಕ್ಕೋ, ನಾಗರಹೊಳೆಗೋ ಹೋಗಿರಲಿಲ್ಲ. ಮೈಸೂರಿಗೆ ಬಂದು ಕುರಿ ಚರ್ಬಿ ತಿಂದು ಹೋಗುತ್ತಿದ್ದ ನೀವು ಪ್ರಧಾನಿಗೆ ಪಾಠ ಮಾಡಬೇಡಿ. ಭ್ರಷ್ಟರ ಪಾಲಿಗೆ ಹುಲಿಯಂತಿದ್ದ ಲೋಕಾಯುಕ್ತವನ್ನೇ ಮುಗಿಸಿದವರು ನೀವು’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಕೆಎಂಎಫ್‌–ಅಮೂಲ್‌ ವಿಲೀನ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದ್ದರೂ ಕಾಂಗ್ರೆಸ್ ಹಾಗೂ ಜೆಡಿಎಸ್‌ನವರು ಸುಳ್ಳು ಆರೋಪವನ್ನೇ ಪುನರಾವರ್ತನೆ ಮಾಡುತ್ತಿದ್ದಾರೆ. ಆಗ, ಹಿಂದಿ ಹೇರಿಕೆ ಅಂದರು. ಈಗ ಅಮುಲ್ ಹೇರಿಕೆ ಎಂಬ ಅಪ್ರಪಚಾರ ಮಾಡುತ್ತಿದ್ದಾರೆ. ಹಾಲಿನ ಉತ್ಪನ್ನಗಳ ಬ್ರಾಂಡ್‌ಗಳು ‘ನಂದಿನಿ’ಯ ಅಕ್ಕ–ತಂಗಿಯರಾ ಅಥವಾ ತಮಿಳುನಾಡು ಮತ್ತು ಆಂಧ್ರದಿಂದ ಬಂದ ಸೊಸೆ–ಅಳಿಯಂದಿರಾ? ಇಷ್ಟು ವರ್ಷದಿಂದ ಈ ಬ್ರಾಂಡ್‌ಗಳು ಕರ್ನಾಟಕದಲ್ಲಿ ಮಾರಾಟ ಆಗುತ್ತಿಲ್ಲವೇ? ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಇವು ರಾಜ್ಯಕ್ಕೆ ಬಂದವಾ’ ಎಂದು ಪ್ರಶ್ನಿಸಿದರು.

‘ಹಾಲು ನೀಡುವ ಹಸುಗಳನ್ನು ಕಡಿಯುವವರ ಪರವಿರುವ ಸಿದ್ದರಾಮಯ್ಯ ಅವರಿಗೆ ಅಧಿಕಾರ ಕೊಟ್ಟರೆ, ಗೋಮಾಂಸ ತಿನ್ನುವವರೇ ಜಾಸ್ತಿ ಆಗುತ್ತಾರೆ. ಅವರು ಗೋಹತ್ಯೆ ಮಾಡುವವರ ಪರ ಇದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರಿಗೆ ಗೋವು ಬೇಕಾಗಿಲ್ಲ. ಗೋವು ತಿನ್ನುವವರ ಮತಗಳು ಬೇಕಷ್ಟೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.