ಎನ್ಐಎ, ಪ್ರವೀಣ್ ನೆಟ್ಟಾರು
ನವದೆಹಲಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಶುಕ್ರವಾರ ಬಂಧಿಸಿದೆ.
‘ಆರೋಪಿ ಅಬ್ದುಲ್ ರೆಹಮಾನ್ ಕತಾರ್ನಿಂದ ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಬಂಧಿಸಲಾಯಿತು’ ಎಂದು ಎನ್ಐಎ ತಿಳಿಸಿದೆ.
ರೆಹಮಾನ್ ಮತ್ತು ಇತರ ಇಬ್ಬರು ತಲೆಮರೆಸಿಕೊಂಡಿರುವ ಆರೋಪಿಗಳು ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳ ವಿರುದ್ಧ ಎನ್ಐಎ ಈ ವರ್ಷದ ಏಪ್ರಿಲ್ನಲ್ಲಿ ಆರೋಪಪಟ್ಟಿ ಸಲ್ಲಿಸಿತ್ತು. ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು 28 ಮಂದಿ ವಿರುದ್ದ ಆರೋಪಪಟ್ಟಿ ಸಲ್ಲಿಸಲಾಗಿದೆ. ರೆಹಮಾನ್ ಸುಳಿವು ನೀಡಿದವರಿಗೆ ಎನ್ಐಎ ₹4 ಲಕ್ಷ ಬಹುಮಾನ ಘೋಷಿಸಿತ್ತು.
ಪಿಎಫ್ಐ ಮುಖಂಡರ ನಿರ್ದೇಶನದ ಮೇರೆಗೆ ರೆಹಮಾನ್, ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳಿಗೆ ಆಶ್ರಯ ನೀಡಿರುವುದು ತನಿಖೆಯ ವೇಳೆ ತಿಳಿದುಬಂದಿದೆ. ಪ್ರವೀಣ್ ಮೇಲೆ ದಾಳಿ ನಡೆಸಿದವರ ಬಂಧನದ ಬೆನ್ನಲ್ಲೇ ಆತ ಕತಾರ್ಗೆ ಪಲಾಯನ ಮಾಡಿದ್ದಾನೆ ಎಂದು ಪ್ರಕಟಣೆ ತಿಳಿಸಿದೆ.
ಬೆಳ್ಳಾರೆಯಲ್ಲಿ 2022ರ ಜುಲೈನಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು. ಈ ಪ್ರಕರಣದ ತನಿಖೆಯನ್ನು 2022ರ ಆಗಸ್ಟ್ನಲ್ಲಿ ಎನ್ಐಎಗೆ ಹಸ್ತಾಂತರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.