ಬೆಂಗಳೂರು: ಪಕ್ಷದ ಕಾರ್ಯಕರ್ತನ ಚಿತೆ ಉರಿಯುವಾಗ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಿನೆಮಾ ನೋಡಿಕೊಂಡು ಮೋಜು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ
ಪ್ರಲ್ಹಾದ ಜೋಶಿ ಅವರು ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಚಿತ್ರವನ್ನು ವೀಕ್ಷಿಸುತ್ತಿರುವ ಫೋಟೊಗಳನ್ನು ಕೆಪಿಸಿಸಿ ಟ್ವೀಟ್ ಮಾಡಿದೆ.
‘ಪಾವಗಡದಲ್ಲಿ ಬಸ್ ಅಪಘಾತವಾದಾಗ ಸಿಎಂ ಬಸವರಾಜ ಬೊಮ್ಮಾಯಿ 'ಚಾರ್ಲಿ' ಚಿತ್ರ ನೋಡಲು ತೆರಳಿದ್ದರು. ಹುಬ್ಬಳ್ಳಿಯಲ್ಲಿ ಮಳೆ ಅವಾಂತರವಾದಾಗ ಶಾಸಕ ಜಗದೀಶ್ ಶೆಟ್ಟರ್ ಸಿನೆಮಾವೊಂದರ ಪ್ರಚಾರಕ್ಕೆ ತೆರಳಿದ್ದರು. ಅವರದೇ ಪಕ್ಷದ ಕಾರ್ಯಕರ್ತನ ಚಿತೆ ಉರಿಯುವಾಗ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಿನೆಮಾ ನೋಡಿಕೊಂಡು ಮೋಜು ಮಾಡುತ್ತಿದ್ದಾರೆ. ಬಿಜೆಪಿಗೆ ಜನತೆ ಮುಖ್ಯವಲ್ಲ’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ದಕ್ಷಿಣ ಕನ್ನಡದ ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯಾಗಿದೆ. ಈ ವಿಚಾರವೀಗ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗದ್ದು, ಬಿಜೆಪಿ ನಾಯಕರ ವಿರುದ್ಧ ಪಕ್ಷದ ಕಾರ್ಯಕರ್ತರೇ ಹರಿಹಾಯುತ್ತಿದ್ದಾರೆ.
ಪ್ರವೀಣ್ ಹತ್ಯೆ ಪ್ರಕರಣ ಹಸಿಯಾಗಿರುವಾಗಲೇ ದಕ್ಷಿಣ ಕನ್ನಡದ ಸುರತ್ಕಲ್ನಲ್ಲಿ ಮಹಮ್ಮದ್ ಫಾಝಿಲ್ ಎಂಬ ಯುವಕನ ಕೊಲೆಯು ಗುರುವಾರ ನಡೆದಿದೆ. ಕರಾವಳಿಯಲ್ಲಿ ನಡೆದಿರುವ ಸರಣಿ ಕೊಲೆಗಳು ರಾಜಕೀಯ ವಾಗ್ವಾದಗಳಿಗೆ ದಾರಿ ಮಾಡಿಕೊಟ್ಟಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಎನ್ಐಎಗೆ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.