ಶಿವಮೊಗ್ಗ: ಲೋಕಸಭಾ ಕ್ಷೇತ್ರದ ವಿವಿಧೆಡೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿರುಸಿನ ಪ್ರಚಾರ ಕೈಗೊಂಡ ಬೆನ್ನಲೆ ಕಾಂಗ್ರೆಸ್, ಜೆಡಿಎಸ್ನ ಮತ್ತಷ್ಟು ನಾಯಕರು ಪ್ರವೆಶ ಮಾಡಿದ್ದಾರೆ.
ಸಚಿವರಾದ ಡಿ.ಕೆ.ಶಿವಕುಮಾರ್, ಡಿ.ಸಿ.ತಮ್ಮಣ್ಣ, ಪುಟ್ಟರಾಜು, ಸಾ.ರಾ.ಮಹೇಶ್, ಮುಖಂಡರಾದ ಧ್ರುವನಾರಾಯಣ್, ಡಿ.ಕೆ.ಸುರೇಶ್, ಭೈರತಿ ಸುರೇಶ್, ಡಾ.ರಂಗನಾಥ್, ತನ್ವೀರ್ ಸೇಟ್, ಎ.ಮಂಜುನಾಥ್ ಗುರುವಾರ ಸಂಜೆಯ ನಂತರ ಜಿಲ್ಲೆಗೆ ಬಂದಿದ್ದಾರೆ. ಶುಕ್ರವಾರ ಕ್ಷೇತ್ರದ ಹಲವೆಡೆ ಪ್ರಚಾರ ಕೈಗೊಳ್ಳಲ್ಲಿದ್ದಾರೆ ಎಂದು ಜೆಡಿಎಸ್, ಕಾಂಗ್ರೆಸ್ ಜಿಲ್ಲಾ ಘಟಕಗಳ ಅಧ್ಯಕ್ಷರಾದ ಆರ್.ಎಂ.ಮಂಜುನಾಥ ಗೌಡ, ಎಚ್.ಎಸ್. ಸುಂದರೇಶ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
20ರ ಬೆಳಿಗ್ಗೆ 11ಕ್ಕೆ ಉಂಬಳೇಬೈಲ್ನಲ್ಲಿ ಹಮ್ಮಿಕೊಂಡಿರುವ ಶಿವಮೊಗ್ಗ ಗ್ರಾಮಾಂತರ, ತೀರ್ಥಹಳ್ಳಿ ಹಾಗೂ ಭದ್ರಾವತಿ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಕುಮಾರಸ್ವಾಮಿ ಭಾಗವಹಿಸುವರು ಎಂದರು.
ಮಲೆನಾಡು ಭಾಗದ ಸಮಸ್ಯೆಗಳಾದ ಡಾ.ಕಸ್ತೂರಿ ರಂಗನ್ ವರದಿ, ಅರಣ್ಯ ಹಕ್ಕು ಕಾಯ್ದೆ ಹಾಗೂ ಅಡಿಕೆ ಆರೋಗ್ಯಕ್ಕೆ ಹಾನಿಕರ ವರದಿ ವಿರುದ್ಧ ಎರಡೂ ಪಕ್ಷಗಳ ಮುಖಂಡರು ಧ್ವನಿ ಎತ್ತುವರು. ಕೇಂದ್ರದ ಆಡಳಿತ ವೈಫಲ್ಯ ಹಾಗೂ ಮೈತ್ರಿ ಸರ್ಕಾರದ ಸಾಧನೆಗಳನ್ನು ಮುಂದಿಟ್ಟು ಚುನಾವಣೆ ಎದುರಿಸಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮೈತ್ರಿ ಪಕ್ಷಗಳ ಮುಖಂಡರಾದ ದುಗ್ಗಪ್ಪ ಗೌಡ, ಮೋಹನ್, ತ್ಯಾಗರಾಜ್, ಸಿದ್ದಪ್ಪ, ಎನ್.ರಮೇಶ್ ಗೌಡ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.