ADVERTISEMENT

ಪತನದ ಹಾದಿಯಲ್ಲಿ ರಾಜ್ಯದ ಆರ್ಥಿಕತೆ: ಬಿ.ವೈ.ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2025, 7:13 IST
Last Updated 19 ಫೆಬ್ರುವರಿ 2025, 7:13 IST
<div class="paragraphs"><p>ವಿಜಯೇಂದ್ರ</p></div>

ವಿಜಯೇಂದ್ರ

   

ಬೆಂಗಳೂರು: ‘ರಾಜ್ಯದ ಆರ್ಥಿಕ ಸ್ಥಿತಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಪತನದ ಹಾದಿಯಲ್ಲಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ರಾಜ್ಯವನ್ನು ದಿವಾಳಿ ಅಂಚಿಗೆ ತಂದು ನಿಲ್ಲಿಸಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ದೂರಿದರು.

‘ಮುಖ್ಯಮಂತ್ರಿಯವರು ಕೂಡಲೇ ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ಶ್ವೇತಪತ್ರ ಮಂಡಿಸಬೇಕು’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ADVERTISEMENT

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೇ ಪರದಾಡುತ್ತಿರುವ ಸರ್ಕಾರ ಎಲ್ಲದರ ದರವನ್ನು ಏರಿಕೆ ಮಾಡಿದೆ. ಸ್ವತ್ತಿನ ನೋಂದಣಿ ಶುಲ್ಕ ಶೇ 600, ಮಾರ್ಗಸೂಚಿ ದರ ಶೇ 30, ವಾಹನಗಳ ನೋಂದಣಿ ಶುಲ್ಕ ಶೇ 10, ಆಸ್ಪತ್ರೆಗಳ ಸೇವಾ ಶುಲ್ಕ ಶೇ 30, ಹಾಲಿನ ದರ ಶೇ 15, ಬಸ್‌ ಪ್ರಯಾಣ ದರ ಶೇ 15, ನೀರಿನ ದರ ಶೇ 30 ಹಾಗೂ ಮೆಟ್ರೊ ಪ್ರಯಾಣ ದರ ಶೇ 50 ರಷ್ಟು ಏರಿಕೆ ಮಾಡಿದೆ. ಇದರಿಂದ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

‘ರಾಜ್ಯದ ವಿವಿಧ ಇಲಾಖೆಗಳಿಂದ ₹6,000 ಕೋಟಿ ಮೊತ್ತದ ವಿದ್ಯುತ್‌ ಬಿಲ್‌ ಪಾವತಿ ಆಗದೇ ಬಾಕಿ ಉಳಿದಿದೆ. ಸಂಬಂಧಪಟ್ಟ ಇಲಾಖೆಗಳ ಸಚಿವರ ಜತೆ ಚರ್ಚೆ ಮಾಡುವುದಾಗಿ ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದ್ದಾರೆ. ಮತ್ತೊಂದೆಡೆ ನೌಕರರಿಗೆ ಸಂಬಳ ಕೊಡಲು ಸಾಧ್ಯವಾಗದ ಸ್ಥಿತಿ ತಲುಪಿದೆ. ಇದಕ್ಕೆ ಯಾರು ಹೊಣೆಗಾರರು ಎಂಬುದನ್ನು ಮುಖ್ಯಮಂತ್ರಿಯವರು ಹೇಳಬೇಕು. ಪ್ರತಿ ತಿಂಗಳು ನಿಯಮಿತವಾಗಿ ಗ್ಯಾರಂಟಿ ಯೋಜನೆಯ ಹಣ ಕೊಡಬೇಕು ಎನ್ನುವುದಕ್ಕೆ, ಅದು ತಿಂಗಳ ಸಂಬಳ ಅಲ್ಲ ಎಂದು ಜಾರ್ಜ್‌ ಹೇಳಿಕೆ ನೀಡಿದ್ದಾರೆ. ರಾಜ್ಯದ ಜನರನ್ನೇನು ಭಿಕ್ಷುಕರು ಅಂತ ಅಂದುಕೊಂಡಿದ್ದೀರಾ’ ಎಂದು ವಿಜಯೇಂದ್ರ ಪ್ರಶ್ನಿಸಿದರು.

‘ಶಕ್ತಿ’ ಯೋಜನೆಗಾಗಿ ಕೆಎಸ್‌ಆರ್‌ಟಿಸಿಗೆ ರಾಜ್ಯ ಸರ್ಕಾರ ₹7,000 ಕೋಟಿ ಕೊಡದೇ ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಕೆಎಸ್‌ಆರ್‌ಟಿಸಿ ಮುಚ್ಚುವ ಸ್ಥಿತಿ ತಲುಪಿದೆ ಎಂದು ಅವರು ಹೇಳಿದರು.

ದೇಶದ ಇತರ ನಗರಗಳಲ್ಲಿ ಮೆಟ್ರೊ ಪ್ರಯಾಣ ದರ ಏರಿಕೆ ಮಾಡಿಲ್ಲ. ಕೇಂದ್ರ ಸರ್ಕಾರ ಏರಿಕೆ ಮಾಡುವುದಿದ್ದರೆ ಅ‌ಲ್ಲೂ ಮಾಡಬೇಕಿತ್ತಲ್ಲ. ವಾಸ್ತವದಲ್ಲಿ ಮೆಟ್ರೊ ಪ್ರಯಾಣ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದೇ ರಾಜ್ಯ ಸರ್ಕಾರ. ಅಲ್ಲದೇ, ದರ ಏರಿಕೆಗೆ ದರ ನಿಗದಿ ಸಮಿತಿಯ ಮೇಲೆ ಒತ್ತಡವನ್ನೂ ಹೇರಿತ್ತು. ಗ್ಯಾರಂಟಿಗೆ ಹಣ ಹೊಂದಿಸಲಾಗದೇ ಮೆಟ್ರೊ ದರ ಏರಿಕೆ ಮಾಡಿದ್ದಾರೆ ಎಂದು ವಿಜಯೇಂದ್ರ ದೂರಿದರು.

ಸಿದ್ದರಾಮಯ್ಯ ಸರ್ಕಾರ ಕಳೆದ ಎರಡು ವರ್ಷದಲ್ಲಿ ₹1,90,000 ಕೋಟಿ ಸಾಲ ಮಾಡಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಪಿ.ಸಿ.ಮೋಹನ್, ಶಾಸಕರಾದ ಗೋಪಾಲಯ್ಯ, ಉದಯ್‌ ಗರುಡಾಚಾರ್‌, ಮುಖ್ಯ ವಕ್ತಾರ ಅಶ್ವಥನಾರಾಯಣ ಇದ್ದರು.

ಹಾವಾಡಿಗರು ಬುಟ್ಟಿಯಿಂದ ಹಾವನ್ನು ಹೊರಬಿಡುತ್ತೇನೆ ಎಂದು ಬೆದರಿಸುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಜಾತಿ ಗಣತಿ ವರದಿ ಬಿಡುಗಡೆ ಮಾಡುತ್ತೇನೆ ಎಂದು ಹೇಳುತ್ತಿರುತ್ತಾರೆ
ಬಿ.ವೈ.ವಿಜಯೇಂದ್ರ ಅಧ್ಯಕ್ಷ ಬಿಜೆಪಿ ರಾಜ್ಯ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.