ಬೆಂಗಳೂರು: ರಾಯಚೂರನ್ನು ತೆಲಂಗಾಣದದಲ್ಲಿ ವಿಲೀನ ಮಾಡಲು ಅಲ್ಲಿನ ಜನ ಬಯಸಿದ್ದಾರೆ ಎಂದು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ (ಕೆಸಿಆರ್) ಹೇಳಿಕೆ ನೀಡಿ 24 ಗಂಟೆಗಳಾದರೂ, ರಾಜ್ಯದ ಮುಖ್ಯಮಂತ್ರಿಯಾಗಲಿ, ಸರ್ಕಾರದ ಪ್ರತಿನಿಧಿಗಳಾಗಲಿ ಆಕ್ಷೇಪಿಸದೇ ಇರುವುದಕ್ಕೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ರಾಯಚೂರು ಜಿಲ್ಲೆಯ ಜನ ತಮ್ಮನ್ನು ತೆಲಂಗಾಣಕ್ಕೆ ಸೇರಿಸಿಕೊಳ್ಳಿ ಎಂದು ನನ್ನನ್ನು ಒತ್ತಾಯಿಸುತ್ತಿದ್ದಾರೆ’ ಎಂದು ತೆಲಂಗಾಣದ ಸಿಎಂ ಕೆಸಿಆರ್ ಅವರು ವಿಕಾರಾಬಾದ್ನಲ್ಲಿ ಬುಧವಾರ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ಸರಣಿ ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ರಾಯಚೂರಿನ ಜನರು ತಮ್ಮ ಕಲ್ಯಾಣ ಯೋಜನೆಗಳನ್ನು ಕಂಡು ತೆಲಂಗಾಣದೊಂದಿಗೆ ವಿಲೀನಗೊಳ್ಳಲು ಬಯಸುತ್ತಿದ್ದಾರೆ ಎಂದು ಸಿಎಂ ಕೆಸಿಆರ್ ಅವರು ಹೇಳಿಕೆ ನೀಡಿ 24 ಗಂಟೆಗಳು ಕಳೆದಿವೆ. ಈ ಹೇಳಿಕೆಯ ಬಗ್ಗೆ ನಿಮ್ಮಿಂದ ಅಥವಾ ಸರ್ಕಾರದ ಯಾರೊಬ್ಬರಿಂದಲೂ ಒಂದೇ ಒಂದು ಹೇಳಿಕೆ ಬರದಿರುವುದು ನನಗೆ ನಿರಾಶೆ ತಂದಿದೆ’ ಪ್ರಿಯಾಂಕ್ ಖರ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಈ ಮಲತಾಯಿ ಧೋರಣೆ ಏಕೆ? ಒಂದು ವೇಳೆ ಬೆಳಗಾವಿ ಗಡಿ ಸಮಸ್ಯೆಯಾಗಿದ್ದರೆ ಇಡೀ ಸಚಿವ ಸಂಪುಟವೇ ರಕ್ಷಣೆಗೆ ಮುಂದಾಗುತ್ತಿತ್ತು. ಆದರೆ, ನಮ್ಮ ವಿಚಾರದಲ್ಲಿ ಯಾಕಿಲ್ಲ? ಬಿಜೆಪಿ ಸರ್ಕಾರ ನಮ್ಮನ್ನು ಕರ್ನಾಟಕದ ಭಾಗವೆಂದು ಪರಿಗಣಿಸುತ್ತದೆಯೋ ಅಥವಾ ಇಲ್ಲವೋ? ತೆಲಂಗಾಣದಲ್ಲಿ ವಿಲೀನ ಮಾಡಲು ಸೂಚಿಸಿದ ನಿಮ್ಮ ಶಾಸಕರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ? ಎಂದು ಅವರು ಪಶ್ನೆ ಮಾಡಿದ್ದಾರೆ.
‘ಮುಖ್ಯಮಂತ್ರಿಯಾಗಲಿ, ಬಿಜೆಪಿ ಅಧ್ಯಕ್ಷರಾಗಲಿ ಇಂತಹ ಹೇಳಿಕೆಗಾಗಿ ಶಾಸಕರನ್ನು ಏಕೆ ತರಾಟೆಗೆ ತೆಗೆದುಕೊಳ್ಳಲಿಲ್ಲ? ನಿಮ್ಮ ನಿಷ್ಕ್ರಿಯತೆಯಿಂದಾಗಿ ತೆಲಂಗಾಣ ಸಿಎಂ ಧೈರ್ಯದಿಂದ ರಾಯಚೂರಿನ ಮೇಲೆ ಹಕ್ಕು ಚಲಾಸುವಂತಾಗಿದೆ. ಇದನ್ನು ಒಪ್ಪಲಾಗದು. ರಾಯಚೂರು ಕರ್ನಾಟಕಕ್ಕೆ ಸೇರಿದ್ದು, ಕರ್ನಾಟಕದಲ್ಲೇ ಉಳಿಯಲಿದೆ’ ಎಂದು ಪ್ರಿಯಾಂಕ್ ಹೇಳಿದ್ದಾರೆ.
ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿ ಎಂದಿದ್ದ ಬಿಜೆಪಿ ಶಾಸಕ ಶಿವರಾಜಪಾಟೀಲ್
‘ಅಭಿವೃದ್ಧಿ ವಿಷಯದಲ್ಲಿ ರಾಯಚೂರು ಜಿಲ್ಲೆಯನ್ನು ಮೊದಲಿನಿಂದ ಕಡೆಗಣಿಸಲಾಗುತ್ತಿದೆ. ಉತ್ತರ ಕರ್ನಾಟಕವೆಂದರೆ ಬೆಳಗಾವಿ, ಹುಬ್ಬಳ್ಳಿ–ಧಾರವಾಡ ಎಂದು ಪರಿಗಣಿಸಲಾಗಿದೆ. ಕಲ್ಯಾಣ ಕರ್ನಾಟಕವೆಂದರೆ ಬೀದರ್, ಕಲಬುರ್ಗಿ ಎರಡೇ ಜಿಲ್ಲೆಗಳು ಕಣ್ಣಿಗೆ ಕಾಣುತ್ತವೆ. ರಾಯಚೂರು ಬೇಡವಾಗಿದ್ದರೆ ತೆಲಂಗಾಣಕ್ಕೆ ಸೇರಿಸಿಬಿಡಿ’ ಎಂದು ರಾಯಚೂರು ನಗರ ಬಿಜೆಪಿ ಶಾಸಕ ಡಾ.ಶಿವರಾಜ ಪಾಟೀಲ ಅವರು ಸಚಿವ ಪ್ರಭು ಚವಾಣ್ ಅವರೆದುರು 2021ರ ಅಕ್ಟೋಬರ್ನಲ್ಲಿ ಹೇಳಿದ್ದರು. ಅವರ ಹೇಳಿಕೆಯ ವಿಡಿಯೊ ವೈರಲ್ ಆಗಿತ್ತು.
ತೆಲಂಗಾಣದ ಪತ್ರಿಕೆಗಳು ಶಾಸಕರ ಹೇಳಿಕೆ ಆಧರಿಸಿ ಸುದ್ದಿಗಳನ್ನು ಪ್ರಕಟಿಸಿದ್ದವು. ತೆಲಂಗಾಣಕ್ಕೆ ಸೇರಬೇಕಾದ ಕರ್ನಾಟಕದ ಗಡಿ ಪ್ರದೇಶಗಳ ಬಗ್ಗೆ ರಾಜ್ಯ ಸರ್ಕಾರವು ಹಕ್ಕು ಮಂಡಿಸಲು ಇದು ಸಕಾಲ. ರಾಯಚೂರು ತೆಲಂಗಾಣದ ಅಭಿವೃದ್ಧಿಯ ಭಾಗವಾಗಲು ಸಿದ್ಧವಿದೆ ಎಂದು ಬರೆಯಲಾಗಿತ್ತು.
ಈ ಬಗ್ಗೆ ‘ಪ್ರಜಾವಾಣಿ’ಗೆ ಸ್ಪಷ್ಟನೆ ನೀಡಿದ ಶಾಸಕ ಡಾ.ಶಿವರಾಜ ಪಾಟೀಲ, ‘ನಾನು ಕರ್ನಾಟಕ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ. ಅಭಿವೃದ್ಧಿ ಮಾಡಬೇಕು ಎಂದು ಒತ್ತಾಯಿಸುವ ಭರದಲ್ಲಿ ಹಾಗೇ ಹೇಳಿದ್ದೇನೆ. ಕರ್ನಾಟಕದಲ್ಲೇ ರಾಯಚೂರು ಎಂದೆಂದಿಗೂ ಇರಬೇಕು ಎಂದು ಬಯಸುತ್ತೇನೆ' ಎಂದು ಸ್ಪಷ್ಟಪಡಿಸಿದ್ದರು.
ರಾಯಚೂರನ್ನು ಪಡೆಯುವ ಮಾತು
ಬಿಜೆಪಿ ಶಾಸಕ ಶಿವರಾಜ ಪಾಟೀಲ್ ಅವರ ಹೇಳಿಕೆಯ ವಿಡಿಯೊ ಉಲ್ಲೇಖಿಸಿ ಕಳೆದ ವರ್ಷ ಅಕ್ಟೋಬರ್ನಲ್ಲಿ ಟ್ವೀಟ್ ಮಾಡಿದ್ದ ಕೆಸಿಆರ್ ಪುತ್ರ, ಕೆ.ಟಿ ರಾಮರಾವ್, ‘ರಾಯಚೂರು ಬಿಜೆಪಿ ಶಾಸಕ ಡಾ. ಶಿವರಾಜ ಪಾಟೀಲ ರಾಯಚೂರನ್ನು ತೆಲಂಗಾಣದ ಜೊತೆ ವಿಲೀನ ಮಾಡಬೇಕೆಂದು ಕೇಳಿಕೊಂಡಿದ್ದಾರೆ’ ಎಂದು ಸಮರ್ಥನೆ ಮಾಡಿಕೊಂಡಿದ್ದರು.
ವಾದಕ್ಕೆ ಕೆಸಿಆರ್ರಿಂದ ಮರುಜೀವ
ರಾಯಚೂರನ್ನು ತೆಲಂಗಾಣಕ್ಕೆ ಪಡೆಯುವ ವಾದಕ್ಕೆ ಮುಖ್ಯಮಂತ್ರಿ ಕೆಸಿಆರ್ ಬುಧವಾರ ಮರುಜೀವ ನೀಡಿದ್ದಾರೆ. ವಿಕಾರಾಬಾದ್ನಲ್ಲಿ ಮಾತನಾಡಿರುವ ಕೆಸಿಆರ್, ‘ರಾಯಚೂರು ಜಿಲ್ಲೆಯ ಜನ ತಮ್ಮನ್ನು ತೆಲಂಗಾಣಕ್ಕೆ ಸೇರಿಸಿಕೊಳ್ಳಿ ಎಂದು ನನ್ನನ್ನು ಒತ್ತಾಯಿಸುತ್ತಿದ್ದಾರೆ’ ಎಂದು ಕೆಸಿಆರ್ ವಿಕಾರಾಬಾದ್ನಲ್ಲಿ ಬುಧವಾರ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.