ADVERTISEMENT

ಐ.ಟಿ ಸಚಿವರಿಂದಲೇ ಫೇಕ್ ನ್ಯೂಸ್! ಬಿಜೆಪಿ ವಾಗ್ದಾಳಿಗೆ ಆಹಾರವಾದ ಪ್ರಿಯಾಂಕ್ ಖರ್ಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಡಿಸೆಂಬರ್ 2025, 13:30 IST
Last Updated 27 ಡಿಸೆಂಬರ್ 2025, 13:30 IST
<div class="paragraphs"><p>ಪ್ರಿಯಾಂಕ್ ಖರ್ಗೆ, ಬಿ.ಎಲ್. ಸಂತೋಷ</p></div>

ಪ್ರಿಯಾಂಕ್ ಖರ್ಗೆ, ಬಿ.ಎಲ್. ಸಂತೋಷ

   

ಬೆಂಗಳೂರು: ಉನ್ನಾವೊ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಉತ್ತರ ಪ್ರದೇಶ ಬಿಜೆಪಿ ನಾಯಕ ಕುಲದೀಪ್ ಸಿಂಗ್ ಸೆಂಗಾರ್‌ ಶಿಕ್ಷೆಯನ್ನು ದೆಹಲಿ ಹೈಕೋರ್ಟ್‌ ಅಮಾನತಿನಲ್ಲಿಟ್ಟು, ಜಾಮೀನು ನೀಡಿದ್ದು ದೇಶದಾದ್ಯಂತ ಚರ್ಚೆಯಾಗುತ್ತಿದೆ.

ಕುಲದೀಪ್ ಸೆಂಗಾರ್ ವಿರುದ್ಧ ಅನೇಕರು ಟೀಕೆಗಳನ್ನು ಮಾಡುತ್ತಿದ್ದಾರೆ. ಇದೇ ವೇಳೆ ಟೀಕೆ ಮಾಡುವ ಬರದಲ್ಲಿ ಕರ್ನಾಟಕದ ಗ್ರಾಮೀಣಾಭಿವೃದ್ಧಿ ಹಾಗೂ ಐ.ಟಿ, ಬಿ.ಟಿ ಸಚಿವ ಪ್ರಿಯಾಂಕ್ ಖರ್ಗೆ ಎಡವಟ್ಟೊಂದನ್ನು ಮಾಡಿ ಬಿಜೆಪಿಯಿಂದ ಹಿಗ್ಗಾಮುಗ್ಗ ತರಾಟೆಗೆ ಒಳಗಾಗಿದ್ದಾರೆ.

ADVERTISEMENT

ಕುಲದೀಪ್ ಸೆಂಗಾರ್ ತಿಹಾರ್ ಜೈಲಿನಿಂದ ಬಿಡುಗಡೆಯಾಗಿ ಜೈಲಿನ ಮುಂದೆ ಬಂದು ತನ್ನ ಬೆಂಬಲಿಗರಿಂದ ಹಾಗೂ ಕೆಲ ಪೊಲೀಸರಿಂದ ಮಾಲಾರ್ಪಣೆ ಮಾಡಿಸಿಕೊಳ್ಳುವಂತೆ ಕಾಣುವ ಎಐ ಆಧಾರಿತ ಚಿತ್ರವನ್ನು ನಿನ್ನೆ ಮಧ್ಯಾಹ್ನ ಪ್ರಿಯಾಂಕ್ ಖರ್ಗೆ ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು. ಅಲ್ಲದೇ, ಪಿಎಂ ನರೇಂದ್ರ ಮೋದಿಯನ್ನು ಎಳೆತಂದು, ‘ಮೋದಿ ಅವರೇ ನಿಮಗೆ ಶುಭಾಶಯಗಳು, ಬೇಟಿ ಬಚಾವೊ ಬೇಟಿ ಪಡಾವೊ ಅಭಿಯಾನಕ್ಕೆ ಹೊಸ ಅರ್ಥ ಸಿಕ್ಕಿದೆ ನೋಡಿ ಇಲ್ಲಿ’ ಎಂದು ಟೀಕೆ ಮಾಡಿದ್ದರು.

ಈ ಚಿತ್ರವನ್ನು ಫ್ಯಾಕ್ಟ್ ಚೆಕ್ ಮಾಡಿರುವ ಬಿಜೆಪಿ, ಪ್ರಿಯಾಂಕ್ ಖರ್ಗೆ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಟ್ರೋಲ್ ಮಾಡಿದೆ.

‘ಪಿಯುಸಿ ಫೇಲ್ ಆಗಿರುವ ಖರ್ಗೆ ಅವರು ಎಐ ಆಧಾರಿತ ತಿರುಚಿದ ಚಿತ್ರವನ್ನು ಹಂಚಿಕೊಂಡು ತಮ್ಮ ಅಜ್ಞಾನವನ್ನು ಪ್ರದರ್ಶಿಸಿ ಫೇಕ್ ನ್ಯೂಸ್‌ಗಳನ್ನು ಉತ್ಪಾದಿಸುವಲ್ಲಿ ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ತಪ್ಪಿನ ಅರಿವಾಗಿ ಆ ಪೋಸ್ಟ್‌ ಅನ್ನು ಡಿಲೀಟ್ ಮಾಡಿ ಪರಾರಿಯಾಗಿದ್ದಾರೆ’ ಎಂದು ಕುಹಕವಾಡಿದೆ.

‘ಕುಲದೀಪ್ ಸಿಂಗ್ ಸೆಂಗಾರ್‌ಗೆ ಒಂದು ಪ್ರಕರಣದಲ್ಲಿ ಮಾತ್ರ ಜಾಮೀನು ಸಿಕ್ಕಿದೆ. ಅದನ್ನು ಪ್ರಶ್ನಿಸಿ ಸಿಬಿಐ ಮೇಲ್ಮನವಿ ಸಲ್ಲಿಸಿದೆ. ಇನ್ನೊಂದು ಪ್ರಕರಣದಲ್ಲಿ ಅವರು ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ’ ಎಂದು ಬಿಜೆಪಿ ಹೇಳಿದೆ.

‘ಸುಳ್ಳು ಸುದ್ದಿಗಳನ್ನು ಹರಡುವಲ್ಲಿ ಐ.ಟಿ ಸಚಿವರೇ ಮುಂದಾಳತ್ವ ವಹಿಸದಂತಿದೆ. ಸಿದ್ದರಾಮಯ್ಯ ಅವರೇ ನಿಮ್ಮ ದ್ವೇಷ ಭಾಷಣ ಕಾಯ್ದೆ ಕೇವಲ ಜನಸಾಮಾನ್ಯರಿಗೆ ಮಾತ್ರ ಅನ್ವಯವಾಗಲಿದೆಯೇ? ಅಥವಾ ಇದರಿಂದ ಪ್ರಿಯಾಂಕ್ ಖರ್ಗೆ ಅವರಿಗೆ ವಿನಾಯಿತಿ ಇದೆಯೇ? ಎಂದು ಪ್ರಶ್ನಿಸಿದೆ.

ಪ್ರಿಯಾಂಕ್ ಖರ್ಗೆ ಸ್ಷಷ್ಟನೆ

ಇನ್ನು, ಬಿಜೆಪಿ ಟ್ವೀಟ್‌ಗೆ ಎಚ್ಚೆತ್ತುಕೊಂಡು ಮತ್ತೊಂದು ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ‘ನನ್ನ ಹಿಂದಿನ ಪೋಸ್ಟ್ ಎಐ ಆಧಾರಿತ ತಪ್ಪು ಚಿತ್ರವಾಗಿರಬಹುದು ಮತ್ತು ಮೇಲ್ವಿಚಾರಣೆ ಕೊರತೆಯಿಂದ ಆಗಿರಬೋದು. ಆದರೆ, ಇಲ್ಲಿ ನೋಡಿ.. ಇದು ಸುಳ್ಳೆ?‘ ಎಂದು ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆ ಆಗಿ ಬಂದಿದ್ದ ಅಪರಾಧಿಗಳನ್ನು ಕೆಲವರು ಸ್ವಾಗತಿಸಿ ಸನ್ಮಾನಿಸಿದ್ದಾರೆ ಎನ್ನಲಾದ ಫೋಟೊ ಹಂಚಿಕೊಂಡಿದ್ದಾರೆ.

ಅಲ್ಲದೇ, ‘ಫೋಕ್ಸೊ ಪ್ರಕರಣದಲ್ಲಿ ಆರೋಪಿಯಾಗಿರುವ ನಿಮ್ಮ ಪಕ್ಷದ ಉನ್ನತ ನಾಯಕರೊಬ್ಬರ ಮೇಲೆ ಕ್ರಮ ಏಕೆ ಆಗಿಲ್ಲ? ಅವರೇ ಅಲ್ಲವೇ ನಿಮ್ಮ ಪಕ್ಷಕ್ಕೆ ಮಾರ್ಗದರ್ಶಕರು? ಎಂದು ಪರೋಕ್ಷವಾಗಿ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಪ್ರಕರಣವನ್ನು ಉಲ್ಲೇಖಿಸಿ ಬಿಜೆಪಿಯನ್ನು ಕೆಣಕಿದ್ದಾರೆ.

ಎಐ ಆಧಾರಿತ ಚಿತ್ರದ ಎಡವಟ್ಟು ತಮ್ಮ ಮೇಲ್ವಿಚಾರಣೆಯಿಂದಲೇ ನಡೆದಿದೆ ಎಂಬುದನ್ನು ಒಪ್ಪಿಕೊಂಡಿರುವ ಪ್ರಿಯಾಂಕ್ ಖರ್ಗೆ, ಪರೋಕ್ಷವಾಗಿ ತಮ್ಮ ಟ್ವಿಟರ್ ಹ್ಯಾಂಡಲ್ ನೋಡಿಕೊಳ್ಳುವ ಮಾಧ್ಯಮ ಕಾರ್ಯದರ್ಶಿಗಳತ್ತ ಬೆರಳು ತೋರಿಸಿದ್ದಾರೆ ಎನ್ನಲಾಗಿದೆ.

ಬಿ.ಎಲ್. ಸಂತೋಷ್ ವ್ಯಂಗ್ಯ

ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರು, ‘ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅಂದ.. ಅಂಥ ಒಂದು ಗಾದೆ ಇದೆ ನಮ್ಮೂರು ಕಡೆ’ ಎಂದಷ್ಟೇ ಖರ್ಗೆ ಅವರಿಗೆ ಎದುರೇಟು ಕೊಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.